ದೇವೇಂದ್ರ ಫಡ್ನವೀಸ್ ನಡೆಗೆ ಶಹಬ್ಬಾಶ್ ಎಂದ ಮಮತಾ ಬ್ಯಾನರ್ಜಿ!
ಕೋಲ್ಕತ್ತಾ, ನವೆಂಬರ್.26: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಹೋಗಿ ಭಾರತೀಯ ಜನತಾ ಪಕ್ಷ ಮುಖಭಂಗ ಅನುಭವಿಸಿದೆ. ಸುಪ್ರೀಂಕೋರ್ಟ್ 24 ಗಂಟೆಗಳಲ್ಲಿ ವಿಶ್ವಾಸಮತಯಾಚನೆ ಮಾಡಬೇಕು ಎಂದು ತೀರ್ಪು ನೀಡುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ.
ಸರ್ಕಾರ ರಚಿಸಿ ಅಧಿಕಾರದ ಗದ್ದುಗೆ ಏರಿದ್ದ ಇಬ್ಬರು ನಾಯಕರು ತಮ್ಮ ಸೀಟ್ ನಿಂದ ಕೆಳಗೆ ಇಳಿದಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್, ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ರಾಜೀನಾಮೆ ಸಲ್ಲಿಸಿದ್ದಾರೆ. ಆ ಮೂಲಕ ಮೈತ್ರಿ ಪಕ್ಷಗಳು ಸರ್ಕಾರ ರಚಿಸಲು ಅವಕಾಶ ಕಲ್ಪಿಸಿಕೊಟ್ಟಿವೆ.
ಕಡಿಮೆ ಅವಧಿ ಸಿಎಂಗಳ ಪಟ್ಟಿ ಸೇರಿದ ದೇವೇಂದ್ರ ಫಡ್ನವೀಸ್
ವಿಶ್ವಾಸಮತಯಾಚನೆ ವೇಳೆ ಮುಖಭಂಗ ಅನುಭವಿಸುವುದಕ್ಕೂ ಮೊದಲೇ ದೇವೇಂದ್ರ ಫಡ್ನವೀಸ್ ಅಲರ್ಟ್ ಆಗಿದ್ದಾರೆ. ಇಂದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಡೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶಹಬ್ಬಾಶ್ ಎಂದಿದ್ದಾರೆ.
ದೇವೇಂದ್ರ ಫಡ್ನವೀಸ್ ಗೆ ದೀದಿ ಶಹಬ್ಬಾಶ್!
ಬಿಜೆಪಿ ವಿರುದ್ಧ ಸದಾ ಹರಿಹಾಯುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಇದೇ ವೇಳೆ ದೇವೇಂದ್ರ ಫಡ್ನವೀಸ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಿರ್ಧಾರವನ್ನು ಅವರು ಮೆಚ್ಚಿಕೊಂಡಿದ್ದಾರೆ. ವಿಶ್ವಾಸಮತವಿಲ್ಲದೇ ಸರ್ಕಾರ ರಚಿಸಲು ಹೋಗಿ ಬಿಜೆಪಿ ಮುಖಭಂಗ ಅನುಭವಿಸಿದೆ.
ಆದರೆ, ದೇವೇಂದ್ರ ಫಡ್ನವೀಸ್ ರಾಜೀನಾಮೆ ಸಲ್ಲಿಸುವ ಮೂಲಕ ಉತ್ತಮ ನಡೆ ಅನುಸರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಸರ್ಕಾರ ರಚಿಸುವಷ್ಟು ಸಂಖ್ಯಾಬಲವೇ ಇರಲಿಲ್ಲ. ಆತುರಕ್ಕೆ ಬಿದ್ದು ಸರ್ಕಾರ ರಚಿಸಲು ಹೋಗಿ ಇಷ್ಟೆಲ್ಲ ಅವಾಂತರ ಸೃಷ್ಟಿಯಾಯಿತು ಎಂದು ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.