ಯಾಸ್ ಚಂಡಮಾರುತ: 20,000 ಕೋಟಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಸಿಎಂ ಮಮತಾ ಮನವಿ
ಕೊಲ್ಕತ್ತಾ, ಮೇ 28: ಯಾಸ್ ಚಂಡಮಾರುತದಿಂದ ಅಪಾರ ಪ್ರಮಾಣದಲ್ಲಿ ಹಾನಿಗೆ ಒಳಗಾಗಿರುವ ಪಶ್ಚಿಮ ಬಂಗಾಳಕ್ಕೆ 20,000 ಕೋಟಿ ರೂಪಾಯಿ ಪರಿಹಾರವನ್ನು ನೀಡುವಂತೆ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳಕ್ಕೆ ತೆರಳಿ ಹಾನಿಗೆ ಒಳಗಾಗಿರುವ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಬೇಡಿಕೆಯನ್ನು ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆಗೆ ಮುನ್ನ ಪರಿಶೀಲನಾ ಸಭೆಯನ್ನು ನಡೆಸಿದ್ದರು. ಆದರೆ ಈ ಸಭೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಜರಾಗಿರಲಿಲ್ಲ. ಈ ಬಗ್ಗೆ ದಿಘಾದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಉತ್ತರಿಸಿದ್ದಾರೆ. ಪ್ರಧಾನಮಂತ್ರಿ ಸಭೆಯನ್ನು ಕರೆದಿದ್ದರು, ಆದರೆ ದಿಘಾದಲ್ಲಿ ಸಭೆಯಿದ್ದ ಕಾರಣ ನಮಗೆ ಅದು ತಿಳಿದಿರಲಿಲ್ಲ. ಹಾಗಾಗಿ ಕಲೈಕುಂಡಾಗೆ ತೆರಳಿ ನಾವು ಪ್ರಧಾನಿಗಳನ್ನು ಭೇಟಿಯಾಗಿದ್ದೇವೆ ಎಂದಿದ್ದಾರೆ.
ಯಾಸ್ ಚಂಡಮಾರುತ: ಪ್ರಧಾನಿ ಮೋದಿ ಜೊತೆಗಿನ ಪರಿಶೀಲನಾ ಸಭೆಗೆ ಗೈರಾದ ದೀದಿ
ಪ್ರಧಾನಮಂತ್ರಿಗಳನ್ನು ಭೇಟಿಯಾದ ನಂತರ ಯಾಸ್ ಚಂಡಮಾರುತದಿಂದ ಆಗಿರುವ ಅನಾಹುತ ಮತ್ತು ನಷ್ಟದ ಬಗ್ಗೆ ವರದಿಯನ್ನು ಅವರಿಗೆ ಸಲ್ಲಿಸಲಾಗಿದೆ. ನಮ್ಮ ಅಂದಾಜಿನ ಪ್ರಕಾರ 20,000 ಕೋಟಿಯಷ್ಟು ನಷ್ಟ ಉಂಟಾಗಿದೆ. ಹೀಗಾಗಿ ದಿಘಾ ಮತ್ತು ಸುಂದರ್ಬನ್ ಪ್ರದೇಶಗಳ ಅಭಿವೃದ್ಧಿಗೆ ತಲಾ 10,000 ಕೋಟಿ ಪ್ಯಾಕೇಜ್ ಕೇಳಿದ್ದೇವೆ ಎಂದಿದ್ದಾರೆ ಮಮತಾ ಬ್ಯಾನರ್ಜಿ.
"ಈ ಪರಿಹಾರಗಳನ್ನು ನಾವು ಪಡೆಯುತ್ತೇವೋ ಗೊತ್ತಿಲ್ಲ. ಆದರೆ ಮುಖ್ಯಕಾರ್ಯದರ್ಶಿಗಳ ಜೊತೆಗೆ ಪ್ರಧಾನಿಯನ್ನು ಭೇಟಿಯಾಗಿ ಎಲ್ಲಾ ದಾಖಲೆಗಳನ್ನು ಹಸ್ತಾಂತರಿಸಿದ್ದೇವೆ. ಅದಾದ ನಂತರ ಅವರ ಅನುಮತಿಯನ್ನು ಪಡೆದು ದಿಘಾಗೆ ತೆರಳಿ ಅವಲೋಕನ ಸಭೆಯನ್ನು ನಡೆಸಿದ್ದೇವೆ. ನಾಳೆ ನಾವು ವೈಮಾನಿಕ ಸಮೀಕ್ಷೆಯನ್ನು ನಡೆಸಲಾಗುತ್ತದೆ. ಈ ಭಾಗ ಪ್ರತೀ ವರ್ಷವೂ ಇಂತಾ ದೊಡ್ಡ ದೊಡ್ಡ ಚಂಡಮಾರುತಗಳಿಗೆ ತುತ್ತಾಗುತ್ತಿರುವ ಕಾರಣ ಶಾಶ್ವತ ಪರಿಹಾರದ ಅಗತ್ಯವಿದೆ ಎಂದು ನನಗೆ ಅನಿಸುತ್ತಿದೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಯಾಸ್ ಚಂಡಮಾರುತ ಕಳೆದ ಬುಧವಾರ ಪಶ್ಚಿಮ ಬಂಗಾಳ ಭೂಭಾಗಕ್ಕೆ ಅಪ್ಪಳಿಸಿತ್ತು. ಪೂರ್ವ ಮೆಡ್ನಿಪುರ್, ಪಶ್ಚಿಮ ಮಡ್ನಿಪುರ್, ಬಂಕುರ, ದಕ್ಷಿಣ 24 ಪರಗಣ, ಮತ್ತು ಜರ್ಗ್ರಾಮ್ ಜಿಲ್ಲೆಗಳು ಈ ಚಂಡಮಾರುತದ ದಾಳಿಗೆ ಸಿಲುಕಿ ಅತಿ ಹೆಚ್ಚಿನ ಹಾನಿಯನ್ನು ಉಂಟು ಮಾಡಿದೆ. ಕರಾವಳಿ ಪ್ರದೇಶಗಳಾದ ದಿಘಾ ಮತ್ತು ಸುಂದರ್ಬನ್ ಪ್ರದೇಶಗಳು ಅತಿ ಕೆಟ್ಟ ಪರಿಣಾಮಕ್ಕೆ ಒಳಗಾಗಿದೆ.