ಬಂಗಾಳ, ಒಡಿಶಾದಲ್ಲಿ ಯಾಸ್ ಅಬ್ಬರ, ಮಧ್ಯರಾತ್ರಿ ಜಾರ್ಖಂಡ್ಗೆ ಭೀತಿ
ಕೊಲ್ಕತ್ತಾ, ಮೇ 26: ಯಾಸ್ ಚಂಡಮಾರುತ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ತನ್ನ ಅಬ್ಬರವನ್ನು ಹೆಚ್ಚುಗೊಳಿಸಿದೆ. ಚಂಡಮಾರುತದ ಪರಿಣಾಮವಾಗಿ ನದಿಗಳಲ್ಲಿ ನೀರಿನ ಮಟ್ಟ ಭಾರೀ ಹೆಚ್ಚಾಗಿದ್ದು ಕರಾವಳಿ ಜಿಲ್ಲೆಗಳಾದ ಪುರ್ಬಾ ಮೆಡಿನಿಪುರ ಮತ್ತು ದಕ್ಷಿಣ 24 ಪರಗಣಗಳ ದೊಡ್ಡ ಪ್ರದೇಶಗಳು ಮುಳುಗಡೆಯಾಗಿದೆ. ಬೃಹತ್ ಗಾತ್ರದ ಅಲೆಗಳು ಅಪ್ಪಳಿಸುತ್ತಿರುವ ಕಾರಣ ಹಲವಾರು ಕಾರುಗಳು ನೀರಿನಲ್ಲಿ ತೇಲಾಡುತ್ತಿರುವುದು ಕಂಡು ಬಂದಿದೆ.
ನೀರಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಹಲವಾರು ಸ್ಥಳಗಳಲ್ಲಿ ಸಾಕಷ್ಟು ಹಾನಿಯುಂಟು ಮಾಡಿದೆ. ಅನೇಕ ಹಳ್ಳಿಗಳು ಹಾಗೂ ಸಣ್ಣ ನಗರಗಳು ಮುಳುಗಡೆಯಾಗಿದೆ ಎಂದು ಅಧಿಕಾರಿಯೊಬ್ಬರು ಚಂಡಮಾರುತದ ಪ್ರಭಾವವನ್ನು ವಿವರಿಸುತ್ತಾ ಮಾಹಿತಿ ನೀಡಿದ್ದಾರೆ.
ಚಂಡಮಾರುತದ ಪರಿಣಾಮದಿಂದಾಗಿ ಪಶ್ಚಿಮ ಮಿಡ್ನಾಪುರ್ನ ಹಲ್ದಿಯಾ ಬಂದರು ಕೂಡ ನೀರಿನಿಂದ ಮುಳುಗಡೆಯಾಗಿದೆ. ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ಚಂಡಮಾರುತ ಅಪ್ಪಳಿಸಿದ ಬಳಿಕ ಪಕ್ಕದ ಜಾರ್ಖಂಡ್ಗೂ ಕೂಡ ಹೈಅಲರ್ಟ್ ಘೋಷಿಸಲಾಗಿದೆ. ಮಧ್ಯರಾತ್ರಿ ವೇಳೆಗೆ ಚಂಡಮಾರುತ ಜಾರ್ಖಂಡ್ ಮೇಲೆ ಹೆಚ್ಚಿನ ಪರಿಣಾಮವನ್ನುಂಟು ಮಾಡುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಈ ಮಧ್ಯೆ ಭಾರತೀಯ ಹವಾಮಾನ ಇಲಾಖೆ ಸಮಾಧಾನಕರ ಸಂಗತಿಯೊಂದನ್ನು ತಿಳಿಸಿದೆ. ಮುಂದಿನ ಮೂರು ಗಂಟೆಗಳಲ್ಲಿ ಚಂಡಮಾರುತ ಪ್ರಭಾವವನ್ನು ಕಡಿಮೆಗೊಳಿಸಲಿದೆ ಎಂದಿದೆ. ಸದ್ಯ 'ಸೀವಿಯರ್ ಸೈಕ್ಲೋನ್ ಸ್ಟ್ರೋಮ್' ಹಂತದಲ್ಲಿರುವ ಯಾಸ್ ಪ್ರಭಾವ ಕಡಿಮೆಗೊಳಿಸುತ್ತಾ 'ಸೈಕ್ಲೋನ್ ಸ್ಟ್ರೋಮ್' ಹಂತಕ್ಕೆ ತಗ್ಗಲಿದೆ ಎಂದು ಮಾಹಿತಿ ನೀಡಿದೆ. "ಈ ಚಂಡಮಾರುತ ವಾಯುವ್ಯ ದಿಕ್ಕಿನತ್ತ ಪ್ರಯಾಣಿಸಲಿದೆ ಮತ್ತು ತೀವ್ರತೆಯನ್ನು ಕಡಿಮೆಗೊಳಿಸುತ್ತಾ ಮುಂದಿನ ಮೂರು ಗಂಟೆಗಳಲ್ಲಿ ಸೈಕ್ಲೋನ್ ಸ್ಟ್ರೋಮ್ ಸ್ವರೂಪಕ್ಕೆ ತಗ್ಗಲಿದೆ" ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಒಡಿಶಾದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 5.8 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದರೆ ಪಶ್ಚಿಮ ಬಂಗಾಳದಲ್ಲಿ 15 ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ 1 ಕೋಟಿ ಜನರ ಮೇಲೆ ಈ ಚಂಡಮಾರುತ ಪರಿಣಾಮ ಬೀರಿದ್ದು ಮೂರು ಲಕ್ಷ ಮನೆಗಳಿಗೆ ಹಾನಿಯಾಗಿದೆ ಎಂದಿದ್ದಾರೆ.