ಮೂರು ಬಲಿ ಪಡೆದ ಬುಲ್ ಬುಲ್: 'ದೀದಿ'ಯ ಉತ್ತರ ಬಂಗಾಳದ ಪ್ರವಾಸ ಕ್ಯಾನ್ಸಲ್
ನವದೆಹಲಿ, ನವೆಂಬರ್.10: ದೇಶದಲ್ಲಿ ಬುಲ್ ಬುಲ್ ಚಂಡಮಾರುತದ ಆರ್ಭಟ ದಿನೇ ದಿನೆ ಹೆಚ್ಚುತ್ತಲೇ ಇದೆ. ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ವರುಣನ ಹಾವಳಿಗೆ ಜನಜೀವನ ಅಕ್ಷರಶಃ ತತ್ತರಿಸಿ ಹೋಗಿದೆ. ಮಳೆ ಹೊಡೆತಕ್ಕೆ ಈಗಾಗ್ಲೆ ಪಶ್ಚಿಮ ಬಂಗಾಳದಲ್ಲಿ ಮೂವರು ಪ್ರಾಣ ತೆತ್ತಿದ್ದಾರೆ.
ಬುಲ್ ಬುಲ್ ಚಂಡಮಾರುತದ ಪ್ರಭಾವದಿಂದ ಪಶ್ಚಿಮ ಬಂಗಾಳದಲ್ಲಿ ಮಳೆಯ ರೌದ್ರ ನರ್ತನ ಮಾಡುತ್ತಿದೆ. ಇಂದು ಸುರಿದ ಮಳೆಗೆ ಪಶ್ಚಿಮ ಬಂಗಾಳದಲ್ಲಿರುವ ಉತ್ತರದ 24 ಜಿಲ್ಲೆಗಳಲ್ಲಿ ನಲುಗಿ ಹೋಗಿವೆ. ಮನೆ ಮೇಲೆ ಮರ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇತ್ತ ಒಡಿಶಾದ ಕೇಂದ್ರಪಾರ ಜಿಲ್ಲೆಯ ರಾಜಕನಿಕ ಬ್ಲಾಕ್ ನಲ್ಲಿ ಮನೆಯ ಗೋಡೆ ಕುಸಿದು ವ್ಯಕ್ತಿಯೊಬ್ಬರು ಪ್ರಾಣ ಬಿಟ್ಟಿದ್ದಾರೆ.
48 ಗಂಟೆಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಹೈ ಅಲರ್ಟ್
ಶನಿವಾರವಷ್ಟೇ ದಕ್ಷಿಣ ಕೋಲ್ಕತ್ತಾದ ಕರಾವಳಿ ಪ್ರದೇಶಕ್ಕೆ ಬುಲ್ ಬುಲ್ ಚಂಡಮಾರುತ ಅಪ್ಪಳಿಸಿತ್ತು. ಇದರಿಂದ ಕಳೆದ 24 ಗಂಟೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಮಳೆರಾಯ ಅಬ್ಬರಿಸಿದ ಬೊಬ್ಬಿರಿದಿದ್ದಾನೆ. ವರುಣನ ರೋಷಾವೇಷಕ್ಕೆ ಜನರು ಬೆಚ್ಚಿ ಬಿದ್ದಿದ್ದು, ಆತಂಕದಲ್ಲೇ ದಿನ ಕಳೆಯುವಂತಾ ಸ್ಥಿತಿ ನಿರ್ಮಾಣವಾಗಿದೆ.
ದೀದಿ ವೈಮಾನಿಕ ಸಮೀಕ್ಷೆ
ಮಳೆ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ. ತಮ್ಮ ಉತ್ತರ ಬಂಗಾಳ ಪ್ರವಾಸವನ್ನು ಮುಂದಿನ ವಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ನವೆಂಬರ್.11 ಸೋಮವಾರ ಮಳೆಯಿಂದ ಹಾನಿಗೆ ಒಳಗಾಗಿರುವ ಪಶ್ಚಿಮ ಬಂಗಾಳದ ವಿವಿಧ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ದೀದಿ, ನಾಮಖಾನಾ, ಬಖ್ಖಾಲಿಯಲ್ಲಿ ಸಮೀಕ್ಷೆ ನಡೆಸುವುದಾಗಿ ತಿಳಿಸಿದ್ದಾರೆ.
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಕುರಿತು ಹಿರಿಯ ಅಧಿಕಾರಿಗಳಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ತೆಗ್ಗು ಪ್ರದೇಶಗಳಲ್ಲಿ ವಾಸಿಸುವ 1 ಲಕ್ಷ 64 ಸಾವಿರದ 315 ಮಂದಿಯನ್ನು ಈಗಾಗಲೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.
ಕೇಂದ್ರ ಸರ್ಕಾರದಿಂದ ನೆರವಿನ ಭರವಸೆ
ಭಾರತದ ಪೂರ್ವ ಭಾಗದಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಬುಲ್ ಬುಲ್ ಚಂಡಮಾರುತದ ಪ್ರಭಾವದಿಂದ ಆಗಿರುವ ಹಾನಿ ಕುರಿತು ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ ನೆರವಿಗೆ ಸದಾಸಿದ್ಧ ಎಂದು ತಿಳಿಸಿದ್ದಾರೆ. ಅಲ್ಲದೇ ದೀದಿ ಜೊತೆ ದೂರವಾಣಿಯಲ್ಲಿ ಮಾತನಾಡಿ ಅಮಿತ್ ಶಾ ಸಹ ಮಾಹಿತಿ ಪಡೆದುಕೊಂಡಿದ್ದಾರೆ.
'ಗಜ' ಸೈಕ್ಲೋನ್ ಅಪ್ಪಳಿಸಿದ್ದ ಪ್ರದೇಶಗಳಲ್ಲೇ 'ಬುಲ್ಬುಲ್' ಅಬ್ಬರ
ಒಡಿಶಾದಲ್ಲಿ 38 ಮೀನುಗಾರರ ರಕ್ಷಣೆ
ಪಶ್ಚಿಮ ಬಂಗಾಳ ಅಷ್ಟೇ ಅಲ್ಲದೇ ಒಡಿಶಾದಲ್ಲೂ ಕೂಡಾ ಬುಲ್ ಬುಲ್ ಚಂಡಮಾರುತದ ಎಫೆಕ್ಟ್ ತಟ್ಟಿದೆ. ಒಡಿಶಾದಲ್ಲೂ ಭಾರಿ ಮಳೆಯಾಗುತ್ತಿದ್ದು, ಈ ನಡುವೆ ಮೀನುಗಾರಿಕೆಗೆ ತೆರಳಿದ್ದ 38 ಮೀನುಗಾರರು ಸಮುದ್ರದ ಮಧ್ಯೆ ಸಿಲುಕಿದ್ದರು. ಡಮ್ರಾದ ತಲುಚುವಾ ಬಳಿ ಸಿಲುಕಿದ್ದ 38 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ನೆರಕ್ಕುಳಿದ ಮರಗಳು, ವಿದ್ಯುತ್ ಸಂಪರ್ಕ ಕಟ್
ಬಿರುಗಾಳಿ ಸಹಿತ ಮಳೆ ಹೊಡೆತಕ್ಕೆ ಪಶ್ಚಿಮ ಬಂಗಾಳ ಒಡಿಶಾ ಸೇರಿದಂತೆ ಭಾರತದ ಪೂರ್ವ ಭಾಗದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ಸಾಕಷ್ಟು ಕಡೆಗಳಲ್ಲಿ ಮರಗಳು ಧರಾಶಾಹಿಯಾಗಿವೆ. ಹಲವೆಡೆ ವಿದ್ಯುತ್ ಕಡಿತಗೊಳಿಸಲಾಗಿದೆ. ಮನೆ, ಆಸ್ತಿ-ಪಾಸ್ತಿ ನಷ್ಟವಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯವಸ್ಥಗೊಂಡಿದೆ.