'ಅಂಫಾನ್ ನಿಂದಾದ ಅನಾಹುತ ಕೊರೊನಾ ವೈರಸ್ ಗಿಂತಲೂ ಭಯಂಕರ'
ಕೋಲ್ಕತಾ, ಮೇ 20: ಭೀಕರ ಚಂಡಮಾರುತ ಅಂಫಾನ್ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ್ದು, 12 ಮಂದಿ ಮೃತಪಟ್ಟಿದ್ದಾರೆ. ''ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತದಿಂದಾದ ಅನಾಹುತ ಕೊರೊನಾ ವೈರಸ್ ಗಿಂತಲೂ ಭಯಂಕರವಾಗಿದೆ'' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
''ಚಂಡಮಾರುತ ಅಂಫಾನ್ ನಿಂದ 1 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ'' ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಮೇಲೆ ಆಕ್ರಮಣ ಮಾಡಿದ ಅಂಫಾನ್! 12 ಸಾವು
190 ಕಿ.ಮೀ ವೇಗದಲ್ಲಿ ಅಪ್ಪಳಿಸಿದ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳದಲ್ಲಿ ಬುಧವಾರ ಅಕ್ಷರಶಃ ಘರ್ಜಿಸಿತು. ಭಾರಿ ಮಳೆಯಿಂದಾಗಿ ಹಲವು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದವು. 5,500 ಮನೆಗಳು ನೆಲಕಚ್ಚಿದವು. ದಿಘಾ ಮತ್ತು ಹತಿಯಾ ದ್ವೀಪದ ನಡುವೆ ಭೂಕುಸಿತ ಉಂಟಾಗಿ ಭಾರತೀಯ ದ್ವೀಪಗಳನ್ನು ಸಂಪರ್ಕಿಸುವ ಸೇತುವೆಗೆ ಹಾನಿಯಾಗಿದೆ.
ಚಂಡಮಾರುತ ಅಪ್ಪಳಿಸುವುದಕ್ಕೂ ಮುನ್ನ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಕನಿಷ್ಠ 6.58 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿತ್ತು.
''ಫೆಡರಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ ನ 20 ತಂಡಗಳು ಈಗಾಗಲೇ ಒಡಿಶಾದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿವೆ. ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲಾಗಿದ್ದ 19 ತಂಡಗಳು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿವೆ'' ಎಂದು ಎನ್.ಡಿ.ಆರ್.ಎಫ್ ಮುಖ್ಯಸ್ಥ ಎಸ್.ಎನ್.ಪ್ರಧಾನ್ ಹೇಳಿದ್ದಾರೆ.