ಟಿಎಂಸಿಯಲ್ಲಿ ಬಿಕ್ಕಟ್ಟು: ಮಮತಾ ಸಂಪುಟದಿಂದ ಪ್ರಮುಖ ಸಚಿವ ಹೊರಕ್ಕೆ
ಕೋಲ್ಕತಾ, ನ. 27: ತೃಣಮೂಲ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಈ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಸಚಿವ ಸಂಪುಟದ ಪ್ರಮುಖ ವಿಕೆಟ್ ಪತನವಾಗಿದೆ. ಪಶ್ಚಿಮ ಬಂಗಾಳದ ನೀರಾವರಿ, ಸಾರಿಗೆ ಸಚಿವ ಸ್ಥಾನಕ್ಕೆ ಸುವೇಂದು ಅಧಿಕಾರಿ ಗುರುವಾರದಂದು ರಾಜೀನಾಮೆ ನೀಡಿದ್ದಾರೆ.
ಜೊತೆಗೆ ಹೂಗ್ಲಿ ನದಿ ಸೇತುವೆ ಕಮಿಷನರ್ಸ್(HRBC)ಚೇಮರ್ನ್ ಸ್ಥಾನವನ್ನು ಅಧಿಕಾರಿ ತೊರೆದಿದ್ದಾರೆ. ಈ ಸ್ಥಾನಕ್ಕೆ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರನ್ನು ತಕ್ಷಣವೇ ನೇಮಿಸಲಾಗಿದೆ.
ಟಿಎಂಸಿ ಸದಸ್ಯರಿಗೆ ತಿರುಗಿ ಬಾರಿಸಲು ಬಿದಿರಿನ ದೊಣ್ಣೆ ತನ್ನಿ: ಬಿಜೆಪಿ ಮುಖಂಡ
ಸಾರಿಗೆ, ನೀರಾವರಿ ಹಾಗೂ ಜಲ ಸಂಪನ್ಮೂಲ ಖಾತೆ ಸಚಿವರಾಗಿದ್ದ ಅಧಿಕಾರಿ ಅವರು ಕಳೆದ ಕೆಲ ತಿಂಗಳುಗಳಿಂದ ಟಿಎಂಸಿ ಚಟುವಟಿಕೆಗಳಿಂದ ದೂರವೇ ಉಳಿದಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೂ ಪಕ್ಷದ ಬ್ಯಾನರ್ ನಡಿ ಕಾಣಿಸಿಕೊಂಡಿಲ್ಲ. ಅಧಿಕಾರಿ ಪಾಲ್ಗೊಂಡಿದ್ದ ಸಭೆ, ಸಮಾರಂಭಗಳಲ್ಲಿ ಅಮ್ರಾ ದಾದರ್ ಅನುಗಾಮಿ (ದಾದಾನ ಅನುಯಾಯಿಗಳು) ಎಂಬ ಬ್ಯಾನರ್ ಕಾಣಿಸಿಕೊಂಡಿದೆ.
ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ
ಹೀಗಾಗಿ, ರಾಜೀನಾಮೆ ಸಲ್ಲಿಸುವುದಕ್ಕೂ ಮುನ್ನವೇ ಅಧಿಕಾರಿ ಅವರು ಟಿಎಂಸಿ ತೊರೆದು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಆಯ್ಕೆಯ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಗಾಳಿ ಸುದ್ದಿಗೆ ಪುಷ್ಟಿ ಸಿಕ್ಕಿದೆ. ಆದರೆ, ಈ ಬಗ್ಗೆ ಅಧಿಕಾರಿ ಎಲ್ಲೂ ಕೂಡಾ ತುಟಿ ಬಿಚ್ಚಿಲ್ಲ. ಆದರೆ, ಅವರ ಆಪ್ತ ವಲಯದವರು ಪ್ರತಿಕ್ರಿಯಿಸಿ, ರಾಜೀನಾಮೆ ನೀಡಿರುವುದನ್ನು ಟಿಎಂಸಿ ತೊರೆಯುವ ಹಾದಿಯಲ್ಲಿ ಮೊದಲ ಹೆಜ್ಜೆ ಎಂದು ತಿಳಿದುಕೊಳ್ಳಿ ಎಂದಿದ್ದಾರೆ.
ಅಧಿಕಾರಿ ತಂದೆ ಪ್ರತಿಕ್ರಿಯೆ
ಎಚ್ ಆರ್ ಬಿ ಸಿಗೆ ಅಧಿಕಾರಿ ರಾಜೀನಾಮೆ ನೀಡಿರುವ ಸುದ್ದಿಯನ್ನು ಟಿವಿಯಲ್ಲಿ ನೋಡಿದೆ. ಈ ಸ್ಥಾನಕ್ಕೆ ಕಲ್ಯಾಣ್ ಬ್ಯಾನರ್ಜಿ ಅವರು ಸೂಕ್ತ ಎಂದು ಮುಖ್ಯಮಂತ್ರಿಗಳು ನಿರ್ಣಯಿಸಿದ್ದಾರೆ. ಈ ಬಗ್ಗೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ ಎಂದು ಅಧಿಕಾರಿಯ ತಂದೆ ಟಿಎಂಸಿ ಸಂಸದ ಶಿಶಿರ್ ಅಧಿಕಾರಿ ಹೇಳಿದ್ದಾರೆ.
ಮಮತಾ ಬ್ಯಾನರ್ಜಿಗೆ ಆಘಾತ: ಐವರು ಟಿಎಂಸಿ ಸಂಸದರು ಬಿಜೆಪಿಗೆ?
''ಅಧಿಕಾರಿ ಕುಟುಂಬವು ಒಗ್ಗಟ್ಟು ಪ್ರದರ್ಶಿಸುತ್ತಾ ಬಂದಿದೆ. ಈಗ ಸುವೇಂದು ಅವರ ರಾಜೀನಾಮೆ ಬಳಿಕ ಅವರ ತಂದೆ ಸಂಸದ ಶಿಶಿರ್ ಹಾಗೂ ಇನ್ನಿಬ್ಬರು ಸೋದರರು ಕೂಡಾ ಟಿಎಂಸಿ ತೊರೆದರೆ ಅಚ್ಚರಿ ಪಡಬೇಕಾಗಿಲ್ಲ'ಎಂದು ಹಿರಿಯ ಟಿಎಂಸಿ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಟಿಎಂಸಿ ತೊರೆಯುವವರ ಸಂಖ್ಯೆ ಹೆಚ್ಚಳ
ಇತ್ತೀಚೆಗೆ ಕೂಚ್ ಬೆಹಾರ್ ದಕ್ಷಿಣ ಕ್ಷೇತ್ರದ ಶಾಸಕ ಮಿಹಿರ್ ಗೋಸ್ವಾಮಿ ಪಕ್ಷವನ್ನು ತೊರೆದಿದ್ದಾರೆ. ಅಕ್ಟೋಬರ್ 3ರಿಂದಲೇ ನನಗೆ ವಹಿಸಿದ್ದ ಎಲ್ಲಾ ಸಂಘಟನಾ ಜವಾಬ್ದಾರಿಗಳಿಂದ ಮುಕ್ತನಾಗಿ ರಾಜೀನಾಮೆ ಸಲ್ಲಿಸಿದ್ದೇನೆ. ಇದಾಗಿ ಎರಡು ತಿಂಗಳಾಗುತ್ತಾ ಬಂದಿದ್ದು, ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎನಿಸುತ್ತದೆ. ಪಕ್ಷದ ವರಿಷ್ಠರು ನಿರ್ಧರಿಸಿದಂತೆ ಆಗಲಿ, ನನ್ನ ನಿರ್ಧಾರವನ್ನು ಅನೇಕರು ಸ್ವಾಗತಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿ, ಅಪಮಾನಕ್ಕೊಳಗಾಗಿದ್ದೇನೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಗೋಸ್ವಾಮಿ ಬರೆದುಕೊಂಡಿದ್ದರು.
|
ಪ್ರಶಾಂತ್ ಕಿಶೋರ್ ಐಪ್ಯಾಕ್ ಮೇಲೆ ಆರೋಪ
20 ವರ್ಷಗಳ ಹಿಂದೆ ನಾನು ಸೇರಿದಾಗ ಇದ್ದ ಪಕ್ಷದ ಸಿದ್ಧಾಂತ ಈಗ ಕಾಣುತ್ತಿಲ್ಲ. ಪಕ್ಷದ ಹಿರಿಯ ಮುಖಂಡರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ನನಗೆ ಇನ್ನು ಈ ಪಕ್ಷದಲ್ಲಿ ಸ್ಥಾನವಿಲ್ಲ. ನಾನು ಎಲ್ಲಾ ಬಂಧಗಳನ್ನು ಕಳಚಿಕೊಳ್ಳುತ್ತಿದ್ದೇನೆ. ನನ್ನ ಹಿತೈಷಿಗಳು, ಬಹುಕಾಲದ ಗೆಳೆಯರು ನನ್ನ ನಿರ್ಣಯವನ್ನು ಮನ್ನಿಸಲಿದ್ದಾರೆ ಎಂಬ ನಂಬಿಕೆಯಿದೆ ಎಂದು ಗೋಸ್ವಾಮಿ ಹೇಳಿದ್ದಾರೆ.
ಎರಡು ಬಾರಿ ಶಾಸಕ ಗೋಸ್ವಾಮಿ ತಾವು ರಾಜೀನಾಮೆ ನೀಡಲು ಪಕ್ಷದ ರಾಜತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಐ ಪ್ಯಾಕ್ ಮೂಗು ತೂರಿಸಿದ್ದು ಕಾರಣ ಎಂದಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕೂಚ್ ಬಿಹಾರ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.