ರಾಜಕೀಯಕ್ಕೆ ಬರುವಂತೆ ಗಂಗೂಲಿ ಮೇಲೆ ಒತ್ತಡ: ಸಿಪಿಎಂ ಮುಖಂಡ ಆರೋಪ
ಕೋಲ್ಕತಾ, ಜನವರಿ 4: ಬಿಸಿಸಿಐ ಅಧ್ಯಕ್ಷ ಮತ್ತು ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರಿಗೆ ರಾಜಕೀಯ ಸೇರುವಂತೆ ತೀವ್ರ ಒತ್ತಡ ಹೇರಲಾಗಿದೆ ಎಂದು ಸಿಪಿಐ (ಎಂ) ಹಿರಿಯ ಮುಖಂಡ ಅಶೋಕ್ ಭಟ್ಟಾಚಾರ್ಯ ಹೇಳಿದ್ದಾರೆ. ಭಾನುವಾರ ಹೃದಯಾಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿರುವ ಸೌರವ್ ಗಂಗೂಲಿ ಅವರ ಮೇಲೆ ರಾಜಕೀಯ ಸೇರಲು ಒತ್ತಡವಿತ್ತು ಎಂಬ ಈ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ಕೋಲಾಹಲ ಸೃಷ್ಟಿಸಿದೆ.
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್- ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಗಂಗೂಲಿ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಅವರನ್ನು ಗಂಗೂಲಿ ಇತ್ತೀಚೆಗೆ ಭೇಟಿ ಮಾಡಿ ಚರ್ಚಿಸಿದ್ದರು. ಇದರಿಂದ ಅವರ ರಾಜೀಕಯ ಪ್ರವೇಶದ ವದಂತಿಗೆ ಮತ್ತಷ್ಟು ರೆಕ್ಕೆಪುಕ್ಕ ದೊರೆತಿತ್ತು. ಆದರೆ ತಾವು ರಾಜಕೀಯಕ್ಕೆ ಇಳಿಯುವುದರ ಕುರಿತು ಆಸಕ್ತಿ ಇರುವ ಬಗ್ಗೆ ಗಂಗೂಲಿ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಆದರೆ ರಾಜಕೀಯದ ಒತ್ತಡವೇ ಅವರ ಆರೋಗ್ಯ ಹದಗೆಡಲು ಕಾರಣ ಎಂಬರ್ಥದಲ್ಲಿ ನೀಡಿರುವ ಹೇಳಿಕೆ ಚರ್ಚೆ ಹುಟ್ಟುಹಾಕಿದೆ.
ಚುನಾವಣೆಗೂ ಮುನ್ನ ಗಂಗೂಲಿಗೇನು ರಾಜಕೀಯದಲ್ಲಿ ಆಸಕ್ತಿ!
'ಗಂಗೂಲಿ ಅವರನ್ನು ರಾಜಕೀಯವಾಗಿ ಬಳಸಿಕೊಳ್ಳಲು ಕೆಲವು ಜನರು ಬಯಸಿದ್ದಾರೆ. ಇದು ಬಹುಶಃ ಅವರನ್ನು ಒತ್ತಡಕ್ಕೆ ಸಿಲುಕಿಸಿರಬಹುದು. ಅವರು ರಾಜಕೀಯ ಅಂಶವಲ್ಲ. ಅವರು ಸೌರವ್-ಕ್ರೀಡಾ ಐಕಾನ್ ಎಂದೇ ಗುರುತಿಸುವಂತಾಗಬೇಕು' ಎಂದು ಅಶೋಕ್ ಭಟ್ಟಾಚಾರ್ಯ ಹೇಳಿದ್ದಾರೆ. ಅಶೋಕ್ ಅವರು ಸೌರವ್ ಗಂಗೂಲಿ ಅವರ ದೀರ್ಘಕಾಲದ ಕುಟುಂಬ ಸ್ನೇಹಿತರೂ ಹೌದು. ಹೀಗಾಗಿ ಅವರ ಹೇಳಿಕೆ ಮಹತ್ವ ಪಡೆದಿದೆ. ಮುಂದೆ ಓದಿ.
ರಾಜಕೀಯ ಬೇಡ ಎಂದಿದ್ದೆ
'ಅವರು ರಾಜಕೀಯಕ್ಕೆ ಸೇರುವಂತೆ ನಾವು ಅವರ ಮೇಲೆ ಯಾವುದೇ ಒತ್ತಡ ಹೇರಬಾರದು. ನೀವು ರಾಜಕೀಯ ಸೇರಬಾರದು ಎಂದು ನಾನು ಕಳೆದ ವಾರ ಸೌರವ್ಗೆ ಹೇಳಿದ್ದೆ. ಅವರು ನನ್ನ ಅಭಿಪ್ರಾಯವನ್ನು ವಿರೋಧಿಸಿರಲಿಲ್ಲ' ಎಂದು ಭಟ್ಟಾಚಾರ್ಯ ಹೇಳಿದ್ದಾರೆ.
ಇದರಲ್ಲಿ ರಾಜಕೀಯ ಬೇಡ
ಭಟ್ಟಾಚಾರ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, 'ಕೆಲವು ಜನರು ತಮ್ಮ ವ್ಯಾದಿಗ್ರಸ್ಥ ಮನಸ್ಥಿತಿಯ ಕಾರಣ ಎಲ್ಲವನ್ನೂ ರಾಜಕೀಯದ ಮೂಲಕವೇ ನೋಡುತ್ತಾರೆ. ಅವರ ಲಕ್ಷಾಂತರ ಅಭಿಮಾನಿಗಳಂತೆ, ಸೌರವ್ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದೇ ನಾವು ಬಯಸುತ್ತೇವೆ' ಎಂದಿದ್ದಾರೆ.
ಮೊದಲು 30 ಸೀಟು ಗೆದ್ದು ನೋಡಿ; ಬಿಜೆಪಿಗೆ ದೀದಿ ದೊಡ್ಡ ಸವಾಲು
ನಾವು ಪ್ರಯತ್ನ ಮಾಡಿಲ್ಲ
'ಗಂಗೂಲಿ ಅವರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ನಾವು ಯಾವ ಪ್ರಯತ್ನವನ್ನೂ ಮಾಡಿರಲಿಲ್ಲ. ಅವರನ್ನು ಕ್ರೀಡೆಯ ಐಕಾನ್ ಆಗಿ ಹೊಂದಲು ನಾವು ಹೆಮ್ಮೆ ಪಡುತ್ತೇವೆ' ಎಂದು ತೃಣಮೂಲ ಕಾಂಗ್ರೆಸ್ನ ಹಿರಿಯ ಮುಖಂಡ ಮತ್ತು ಸಚಿವ ಸೋಭಂದೇಬ್ ಚಟರ್ಜಿ ಹೇಳಿದ್ದಾರೆ.
ಆಂಜಿಯೋಪ್ಲಾಸ್ಟಿ ನಡೆಸಲಾಗಿದೆ
ಗಂಗೂಲಿ ಅವರ ಹೃದಯದ ಅಪಧಮನಿಗಳಲ್ಲಿ ಮೂರು ಬ್ಲಾಕ್ಗಳು ಪತ್ತೆಯಾಗಿದ್ದವು. ಬ್ಲಾಕೇಜ್ ತೆರವುಗೊಳಿಸಲು ಸ್ಟಂಟ್ ಅಳವಡಿಸಲಾಗಿತ್ತು. ಭಾನುವಾರ 3 ಗಂಟೆ ವೇಳೆಗೆ ಆಂಜಿಯೋಪ್ಲಾಸ್ಟಿ ನಡೆಸಲಾಗಿದ್ದು, ನಾಳೆ ಇಕೋಕಾರ್ಡಿಯಾಗ್ರಫಿಯನ್ನು ಪುನಃ ಮಾಡಲಾಗುವುದು ಎಂದು ಆಸ್ಪತ್ರೆ ಭಾನುವಾರ ರಾತ್ರಿ ಹೇಳಿಕೆ ನೀಡಿದೆ.
ಇಂದು ಸಭೆ ನಡೆಸಿ ತೀರ್ಮಾನ
ಗಂಗೂಲಿ ಅವರ ರಕ್ತದೊತ್ತಡ 110/80 ಮತ್ತು ಆಮ್ಲಜನಕದ ಉಸಿರಾಟದ ಮಟ್ಟ ಶೇ 98ರಷ್ಟಿದೆ. ಗಂಗೂಲಿ ಅವರ ಸ್ಥಿತಿ ನೋಡಿ ಮತ್ತೊಂದು ಆಂಜಿಯೋಪ್ಲಾಸ್ಟಿ ನಡೆಸುವ ಬಗ್ಗೆ ತೀರ್ಮಾನಿಲಾಗುತ್ತದೆ. ಸೋಮವಾರ 9 ಸದಸ್ಯರ ವೈದ್ಯಕೀಯ ಮಂಡಳಿ ಸಭೆ ನಡೆಸಲಿದ್ದು, ಅವರ ಕುಟುಂಬದ ಸದಸ್ಯರ ಜತೆ ಮುಂದಿನ ಚಿಕಿತ್ಸೆಯ ಯೋಜನೆಗಳನ್ನು ಚರ್ಚಿಸಲಿದೆ. ಸೌರವ್ ಅವರು ರಾತ್ರಿ 10 ಗಂಟೆಗೆ ಊಟ ಮಾಡಿದ್ದರು. ಅವರು ಆರೋಗ್ಯ ಸುಧಾರಿಸಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.