ಭಾರತಕ್ಕೆ ಕೊರಾನಾ ವೈರಸ್ ಹೊತ್ತು ತಂದ ಬ್ಯಾಂಕಾಕ್ ಬಳಗ
ಕೋಲ್ಕತ್ತಾ, ಫೆಬ್ರವರಿ.13: ಚೀನಾದಲ್ಲಿ ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್ ಸೋಂಕು ಭಾರತಕ್ಕೂ ಕಾಲಿಟ್ಟಿದೆ. ಪಶ್ಚಿಮ ಬಂಗಾಳ ರಾಜ್ಯವೊಂದರಲ್ಲೇ ಇದುವರೆಗೂ ಮೂವರಿಗೆ ಮಾರಕ ಸೋಂಕು ತಗಲಿರುವ ಬಗ್ಗೆ ದೃಢಪಟ್ಟಿದೆ.
ಗುರುವಾರದ ಕೋಲ್ಕತ್ತಾದ ನೇತಾಜಿ ಸುಭಾಶ್ ಚಂದ್ರ ಭೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್ ನಿಂದ ಆಗಮಿಸಿದ ಇಬ್ಬರು ಪ್ರಯಾಣಿಕರಲ್ಲಿ ಕೊರೊನಾ ವೈರಸ್ ತಗಲಿರುವ ಬಗ್ಗೆ ವೈದ್ಯಕೀಯ ತಪಾಸಣೆ ವೇಳೆ ತಿಳಿದು ಬಂದಿದೆ.
ಇಬ್ಬರು ಭಾರತೀಯರಿಗೆ ಕೊರೊನಾ ವೈರಸ್: ಇದು ಹಡಗಿನಲ್ಲಿರುವವರ ವಿಷ್ಯ
ಬ್ಯಾಂಕಾಕ್ ನಿಂದ ಕೋಲ್ಕತ್ತಾಗೆ ಆಗಮಿಸಿದ ಹಿಮಾದ್ರಿ ಬರ್ಮನ್ ಗೆ ಕೊರೊನಾ ವೈರಸ್ ಇರುವ ಬಗ್ಗೆ ಮಂಗಳವಾರ ತಿಳಿದಿದೆ. ಇನ್ನೊಬ್ಬ ಪ್ರಯಾಣಿಕ ನಾಗೇಂದ್ರ ಸಿಂಗ್ ರನ್ನು ಬುಧವಾರ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಈ ವೇಳೆ ಸೋಂಕು ತಗಲಿರುವ ಬಗ್ಗೆ ದೃಢಪಟ್ಟಿದೆ ಎಂದು ಕೋಲ್ಕತ್ತಾ ವಿಮಾನ ನಿಲ್ದಾಣದ ನಿರ್ದೇಶಕ ಕೌಶಿಕ್ ಭಟ್ಟಾಚಾರ್ಯ ಸ್ಪಷ್ಟಪಡಿಸಿದ್ದಾರೆ.
ಕೋಲ್ಕತ್ತಾದಲ್ಲಿ ಮೂವರಿಗೆ ಕೊರೊನಾ ವೈರಸ್
ಇನ್ನು, ಇದಕ್ಕೂ ಮೊದಲು ಅನಿತಾ ಓರೌನ್ ಎಂಬ ಪ್ರಯಾಣಿಕರನ್ನು ಕೊರೊನಾ ವೈರಸ್ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ತಗಲಿರುವ ಬಗ್ಗೆ ವೈದ್ಯಕೀಯ ತಪಾಸಣೆ ವೇಳೆ ತಿಳಿದು ಬಂದಿತ್ತು. ಇದರಿಂದಾಗಿ ಇದುವರೆಗೂ ಕೋಲ್ಕತ್ತಾ ಒಂದರಲ್ಲಿ ಮೂವರಿಗೆ ಕೊರೊನಾ ವೈರಸ್ ಸೋಂಕು ತಗಲಿರುವ ಬಗ್ಗೆ ತಿಳಿದು ಬಂದಿದೆ ಎಂದು ಕೌಶಿಕ್ ಭಟ್ಟಾಚಾರ್ಯ ಮಾಹಿತಿ ನೀಡಿದ್ದಾರೆ.
ಎರಡು ಕಂಪನಿ ವಿಮಾನಯಾನಗಳ ಸಂಚಾರ ಸ್ಟಾಪ್
ಈಗಾಗಲೇ ಎರಡು ವಿಮಾನಯಾನ ಸಂಸ್ಥೆಗಳು ಚೀನಾ ಮತ್ತು ಕೋಲ್ಕತ್ತಾ ನಡುವೆ ಸಂಚಾರಿಸುತ್ತಿದ್ದ ತಮ್ಮ ಸಂಸ್ಥೆ ವಿಮಾನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ತಡೆ ಹೇರಿವೆ. ಕಳೆದ ಫೆಬ್ರವರಿ.06ರಿಂದಲೇ ಜನಪ್ರಿಯ ವಿಮಾನಯಾನ ಸಂಸ್ಥೆ ಇಂಡಿಯೋ ಕೋಲ್ಕತ್ತಾ ಮತ್ತು ಗೌಂಗಜೌ ನಡುವಿನ ಸಂಚಾರಕ್ಕೆ ಬ್ರೇಕ್ ಹಾಕಿತ್ತು.
ಇಂಡಿಗೋ ವಿಮಾನಗಳ ಸಂಚಾರಕ್ಕೆ ಕಡಿವಾಣ
ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ(WHO)ಯು ಕೊರೊನಾ ವೈರಸ್ ಎಂಬ ಸೋಂಕು ಜಾಗತಿಕ ಮಟ್ಟದಲ್ಲಿ ಹರಡುವ ಅಪಾಯವಿದೆ ಎಂದು ಎಚ್ಚರಿಕೆ ನೀಡುತ್ತಿದ್ದಂತೆ ಇಂಡಿಗೋ ವಿಮಾನಯಾನ ಸಂಸ್ಥೆಯು ಫೆಬ್ರವರಿ.06 ರಿಂದ ಫೆಬ್ರವರಿ.25ರವರೆಗೂ ಕೋಲ್ಕತ್ತಾ ಮತ್ತು ಚೀನಾ ನಡುವೆ ಸಂಸ್ಥೆಯ ವಿಮಾನಗಳ ಸಂಚಾರಕ್ಕೆ ತಡೆ ಹಿಡಿಯಲಾಗಿದೆ ಎಂದು ಇಂಡಿಗೋ ತಿಳಿಸಿದೆ.
ವಿಮಾನ ಸಂಚಾರಕ್ಕೆ ಚೀನಾದಿಂದಲೂ ಕಡಿವಾಣ
ಇಂಡಿಗೋ ವಿಮಾನಯಾನ ಸಂಸ್ಥೆಯ ತೀರ್ಮಾನದ ಬೆನ್ನಲ್ಲೇ ಚೀನಾದ ಈಸ್ಟರ್ನ್ ವಿಮಾನಯಾನ ಸಂಸ್ಥೆಯು ತನ್ನ ಕೋಲ್ಕತ್ತಾ ಮತ್ತು ಗೌಂಗಜೌ ನಡುವೆ ಸಂಚರಿಸುತ್ತಿದ್ದ ಕಂಪನಿಯ ವಿಮಾನಗಳನ್ನು ತಡೆ ಹಿಡಿಯಿತು. ಇದರ ಮಧ್ಯೆ ಸಿಂಗಾಪುರ್, ಹಾಂಕ್ ಕಾಂಗ್ ನಲ್ಲಿ ಪ್ರಯಾಣಿಕರನ್ನು ಕೊರೊನಾ ವೈರಸ್ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇಷ್ಟಾಗಿಯೂ ಬ್ಯಾಂಕಾಕ್ ನಿಂದ ಕೋಲ್ಕತ್ತಾಗೆ ಆಗಮಿಸಿದ ಪ್ರಯಾಣಿಕನಲ್ಲಿ ಸೋಂಕು ತಗಲಿರುವುದು ಪತ್ತೆಯಾಗಿದೆ.