ಕೊರೊನಾ: ಅವನು ಗೋಮೂತ್ರ ಕುಡಿಸಿ ಜೈಲಿಗೆ ಹೋದ, ಅವಳು ಆಸ್ಪತ್ರೆಗೆ ಅಡ್ಮಿಟ್ ಆದಳು
ಕೋಲ್ಕತ್ತಾ, ಮಾರ್ಚ್ 19: ಮಾರಣಾಂತಿಕ ಕೊರೊನಾ ವೈರಸ್ ಸೋಂಕನ್ನು ಮಟ್ಟಹಾಕಲು ಗೋಮೂತ್ರವೇ ಪರಿಹಾರ ಎಂದು ಸಂಘ ಪರಿವಾರದ ಮುಖಂಡರು ಹೇಳುತ್ತಲೇ ಬರುತ್ತಿದ್ದರು.
ಈಗ ಬಿಜೆಪಿಯ ಕಾರ್ಯಕರ್ತನೊಬ್ಬ ಅದನ್ನು ತಮ್ಮದೇ ಪಕ್ಷದ ಕಾರ್ಯಕರ್ತೆಗೆ ಪ್ರಯೋಗಿಸಿ ಜೈಲು ಪಾಲಾಗಿದ್ದಾನೆ. ಗೋಮೂತ್ರ ಕುಡಿದ ಕಾರ್ಯಕರ್ತೆ, ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಕೊರೊನಾ ಹೊಡೆತಕ್ಕೆ ಇಟಲಿ ಜರ್ಜರಿತ: ಒಂದೇ ದಿನ 475 ಸಾವು!
ನಾರಾಯಣ ಚಟರ್ಜಿಎನ್ನುವವನನ್ನು, ಕಾರ್ಯಕರ್ತೆ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ. ಈತ ನಗರದಲ್ಲಿ ಗೋಮೂತ್ರ ಪಾರ್ಟಿಯನ್ನು ಆಯೋಜಿಸಿದ್ದ ಎಂದು ಪೊಲೀಸ್ ಆಯುಕ್ತ ಅನುಜ್ ಶರ್ಮಾ ಹೇಳಿದ್ದಾರೆ.
ಆಸ್ಪತ್ರೆಗೆ ದಾಖಲಾಗಿದ್ದ ಕಾರ್ಯಕರ್ತೆಯನ್ನು ಪ್ರಾಥಮಿಕ ಚಿಕಿತ್ಸೆಯ ನಂತರ ಬಿಡುಗಡೆಗೊಳಿಸಲಾಗಿದೆ. ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿದ್ದಕ್ಕೆ ರಾಜ್ಯಾಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ಭಾರತ ಪ್ರಜಾಪಭುತ್ವ ರಾಷ್ಟ್ರ. ಇಲ್ಲಿ ಎಲ್ಲರಿಗೂ ತಮ್ಮತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶವಿದೆ. ಬಲವಂತವಾಗಿ ಗೋಮೂತ್ರವನ್ನು ಕುಡಿಸಲಾಯಿತೇ ಎನ್ನುವುದರ ಬಗ್ಗೆ ನನ್ನಲ್ಲಿ ಸರಿಯಾದ ಮಾಹಿತಿಯಿಲ್ಲ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
"ಹಿಂದೂಗಳಲ್ಲಿ ಗೋವಿಗೆ ಪೂಜ್ಯ ಸ್ಥಾನವಿದೆ. ಅಸ್ತಮಾ, ಕ್ಯಾನ್ಸರ್, ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿಗೆ ಗೋಮೂತ್ರವೇ ಮದ್ದು" ಎಂದು ಘೋಷ್ ಹೇಳಿದ್ದಾರೆ.