ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಭದ್ರತಾ ಪಡೆಗಳಿಂದಲೇ 'ನರಮೇಧ'!
ಕೋಲ್ಕತ್ತಾ, ಏಪ್ರಿಲ್ 11: ಪಶ್ಚಿಮ ಬಂಗಾಳದ ಕೂಚ್ ಬೆಹರ್ ಜಿಲ್ಲೆಯ ಮತಗಟ್ಟೆಯಲ್ಲಿ ನಡೆದ ಗುಂಡಿನ ದಾಳಿ ವೇಳೆ ನಾಲ್ವರು ಮೃತಪಟ್ಟಿರುವ ಘಟನೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನರಮೇಧ ಎಂದು ಕರೆದಿದ್ದಾರೆ.
ಕೋಲ್ಕತ್ತಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೂಚ್ ಬೆಹರ್ ಜಿಲ್ಲೆಗೆ ಮುಂದಿನ 72 ಗಂಟೆಗಳವರೆಗೆ ರಾಜಕಾರಣಗಳಿಗೆ ನಿರ್ಬಂಧ ವಿಧಿಸಿದೆ. ಆ ಮೂಲಕ ಚುನಾವಣಾ ಆಯೋಗವು ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ದೂಷಿಸಿದ್ದಾರೆ.
ನಮ್ಮ ಕೆಟ್ಟ ಭಯ ಇಂದು ನಿಜವಾಗಿದೆ: ಮಮತಾ ಬ್ಯಾನರ್ಜಿ
ಸಿತಾಲ್ ಕುಚಿಯಲ್ಲಿ ಕೇಂದ್ರ ಪಡೆಗಳು ನರಮೇಧವನ್ನು ನಡೆಸಿವೆ. ಏಪ್ರಿಲ್ 14ರಂದು ಸಿತಾಲ್ ಕುಚಿಗೆ ನಾನು ಭೇಟಿ ನೀಡುತ್ತೇನೆ. ಕೂಚ್ ಬೆಹರ್ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ವಿಧಿಸುವ ಮೂಲಕ ಚುನಾವಣಾ ಆಯೋಗ ಸತ್ಯವನ್ನು ಮರೆಮಾಚುವ ಪ್ರಯತ್ನಿಸಲಾಗುತ್ತಿದೆ. ನಮ್ಮಲ್ಲಿ ಅಸಮರ್ಥ ಗೃಹ ಸಚಿವರು ಮತ್ತು ಅಸಮರ್ಥ ಕೇಂದ್ರ ಸರ್ಕಾರವಿದೆ ಎಂದು ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.
"ಕೇಂದ್ರ ಪಡೆಗೆ ಪರಿಸ್ಥಿತಿ ನಿಯಂತ್ರಣದ ಬಗ್ಗೆ ತಿಳಿದಿಲ್ಲವೇ?"
ಸಿಐಎಸ್ಎಫ್ ಸಿಬ್ಬಂದಿಗೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಅರಿವಿಲ್ಲ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಮೊದಲ ಹಂತದ ಚುನಾವಣೆಯಿಂದ ಕೇಂದ್ರ ಭದ್ರತಾ ಪಡೆಗಳು ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ನಾನು ಹೇಳುತ್ತಲೇ ಬಂದಿದ್ದೇನೆ. ನಂದಿಗ್ರಾಮ್ ಚುನಾವಣೆ ಸಂದರ್ಭದಲ್ಲೂ ಈ ಬಗ್ಗೆ ಧ್ವನಿ ಎತ್ತಿದರೆ ಯಾರೊಬ್ಬರೂ ಕಿವಿಗೊಡಲಿಲ್ಲ ಎಂದು ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.
ಸಿಐಎಸ್ಎಫ್ ದಾಳಿಯಲ್ಲಿ ನಾಲ್ವರು ಸಾವು
ಪಶ್ಚಿಮ ಬಂಗಾಳದ ವಿಧಾನಸಭೆಗೆ ಏಪ್ರಿಲ್ 10ರಂದು ನಾಲ್ಕನೇ ಹಂತದ ಮತದಾನ ನಡೆಯಿತು. ಕೂಚ್ ಬೆಹರ್ ಜಿಲ್ಲೆಯ ಮತಗಟ್ಟೆ ಬಳಿ ಕೆಲವು ದುಷ್ಕರ್ಮಿಗಳು ಸಿಐಎಸ್ಎಫ್ ಸಿಬ್ಬಂದಿಯ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಯತ್ನಿಸಿದರು. ಈ ವೇಳೆ ಸಿಐಎಸ್ಎಫ್ ಸಿಬ್ಬಂದಿಯು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದರು ಎನ್ನಲಾಗಿದೆ.
ಮತಗಟ್ಟೆಯಲ್ಲಿ ಗುಂಡಿನ ದಾಳಿ: ಸಿಐಎಸ್ಎಫ್ ಹೇಳಿದ್ದೇನು?
|
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಡಿಯೋ ಕಾಲ್
ಕೋಲ್ಕತ್ತಾದಲ್ಲಿ ನಡೆಸಿದ ಸುದ್ದಿಗೋಷ್ಠಿ ಮಧ್ಯೆಯೇ ಮೃತ ವ್ಯಕ್ತಿಯ ಸಹೋದರನಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಡಿಯೋ ಕಾಲ್ ಮಾಡಿದ್ದರು. ಮೃತರ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಮಾತನಾಡಿದ ಮೃತ ವ್ಯಕ್ತಿಯ ಸಹೋದರನು ಘಟನೆ ಬಗ್ಗೆ ವಿವರಿಸಿದರು. "ಭದ್ರತಾ ಪಡೆ ಸಿಬ್ಬಂದಿ ಗುಂಡು ಹಾರಿಸಿದ ಸಂದರ್ಭದಲ್ಲಿ ಅವನು ಮತದಾನಕ್ಕಾಗಿ ಸಾಲಿನಲ್ಲಿ ನಿಂತಿದ್ದನು. ನನ್ನ ಸಹೋದರನ ಪತ್ನಿ ಗರ್ಭಿಣಿಯಾಗಿದ್ದು, ಇಬ್ಬರು ದಂಪತಿಗೆ 3 ವರ್ಷ ಮಗು ಕೂಡಾ ಇದೆ. ನನ್ನ ಸಹೋದರನ ಸಾವಿನ ವಿಷಯವನ್ನು ಕೇಳಿ ಹೆತ್ತವರು ಆಘಾತಕ್ಕೊಳಗಾಗಿದ್ದಾರೆ" ಎಂದು ಮೃತ ವ್ಯಕ್ತಿಯ ಸಹೋದರನು ವಿಡಿಯೋ ಕಾಲ್ ನಲ್ಲಿ ವಿವರಿಸಿದ್ದಾರೆ.
ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ತಿರುಗೇಟು
ಬಿಜೆಪಿಯು ತನ್ನೆಲ್ಲ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದು. ಆದರೆ ಜಗತ್ತಿನ ಯಾವುದೇ ಶಕ್ತಿಯು ನನ್ನ ಮತ್ತು ಜನರ ನಡುವಿನ ಬಾಂಧವ್ಯವನ್ನು ಮುರಿಯುವುದಕ್ಕೆ ಸಾಧ್ಯವಿಲ್ಲ. ಅವರು ಮೂರು ದಿನಗಳವರೆಗೂ ಕೂಚ್ ಬೆಹರ್ ಜಿಲ್ಲೆಯ ನನ್ನ ಸಹೋದರ ಮತ್ತು ಸಹೋದರಿಯರ ಮನೆಗೆ ಹೋಗದಂತೆ ತಡೆಯಬಹುದು. ಆದರೆ ನಾಲ್ಕನೇ ದಿನ ನಾನು ಅಲ್ಲಿಗೆ ಹೋಗೇ ಹೋಗುತ್ತೇನೆ ಎಂದು ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಇನ್ನೂ ನಾಲ್ಕು ಹಂತದ ಚುನಾವಣೆ ಬಾಕಿ
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಎರಡು ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮಾರ್ಚ್ 27ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ, ಏಪ್ರಿಲ್ 6ರಂದು ಮೂರನೇ ಹಂತ, ಏಪ್ರಿಲ್ 10ರಂದು ನಾಲ್ಕನೇ ಹಂತದ ಮತದಾನ ನಡೆದಿದೆ. ಉಳಿದಂತೆ ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.