ಟಿಎಂಸಿ ಪರ ಪ್ರಚಾರ ಮಾಡದಂತೆ ಆರ್ಜೆಡಿ, ಎನ್ಸಿಪಿ ಮುಖಂಡರಿಗೆ ಕಾಂಗ್ರೆಸ್ ಪತ್ರ
ಕೋಲ್ಕತ್ತಾ, ಮಾರ್ಚ್ 17: ಅಧಿಕಾರಕ್ಕೆ ಮರಳಲು ಮಾತ್ರವಲ್ಲ, ಪಶ್ಚಿಮ ಬಂಗಾಳದಲ್ಲಿ ನೆಲೆಯೂರುವ ಪ್ರಯತ್ನದಲ್ಲಿರುವ ಬಿಜೆಪಿಯನ್ನು ಹಿಂದಕ್ಕೆ ತಳ್ಳುವ ಮುಖ್ಯ ಉದ್ದೇಶದೊಂದಿಗೆ ತೃಣಮೂಲ ಕಾಂಗ್ರೆಸ್ ಈ ಬಾರಿ ಚುನಾವಣಾ ಕಣದಲ್ಲಿದೆ. ಟಿಎಂಸಿಯ ಈ ಸ್ಪರ್ಧೆಗೆ ಬಿಹಾರದ ಆರ್ಜೆಡಿ, ಎನ್ಸಿಪಿ ಕೂಡ ತಮ್ಮ ಬೆಂಬಲ ವ್ಯಕ್ತಪಡಿಸಿವೆ.
ಆದರೆ ಈ ಒಂದು ನಡೆ ಕಾಂಗ್ರೆಸ್ ಹಾಗೂ ಸಿಪಿಐ (ಎಂ) ಮೈತ್ರಿಯಲ್ಲಿ ಅಸಮಾಧಾನ ಮೂಡಿಸಿದೆ. ಆರ್ಜೆಡಿ, ಎನ್ಸಿಪಿ ಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪರ ಪ್ರಚಾರದಲ್ಲಿ ಭಾಗಿಯಾಗಿರುವುದು ಬಂಗಾಳದಲ್ಲಿ ತಮ್ಮ ಪ್ರಚಾರಕ್ಕೆ ಅಡ್ಡಿಯುಂಟು ಮಾಡಬಹುದು ಎಂದು ಕಾಂಗ್ರೆಸ್ ತಿಳಿಸಿದೆ.
ಪಶ್ಚಿಮ ಬಂಗಾಳ: ಕಳೆದ ಚುನಾವಣಾಪೂರ್ವ ಸಮೀಕ್ಷೆಗಳು ಹೇಳಿದ್ದೇನು, ಆಗಿದ್ದೇನು?
ಇದೇ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಪ್ರದೀಪ್ ಭಟ್ಟಾಚಾರ್ಯ ಬುಧವಾರ ಎನ್ಸಿಪಿ ಮುಖಂಡ ಶರದ್ ಪವಾರ್ ಹಾಗೂ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ಗೆ ಪತ್ರ ಬರೆದಿದ್ದಾರೆ.
"ಟಿಎಂಸಿ ಪರ ಸ್ಟಾರ್ ಪ್ರಚಾರಕರಾಗಿ ನೀವು ಇರುವುದು ಪಶ್ಚಿಮ ಬಂಗಾಳ ಮತದಾರರಲ್ಲಿ ಗೊಂದಲ ಮೂಡಿಸುತ್ತಿದೆ. ಟಿಎಂಸಿ ಪರ ಪ್ರಚಾರ ಮಾಡುವುದನ್ನು ನಿಲ್ಲಿಸಿ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಎನ್ಸಿಪಿ, ಕಾಂಗ್ರೆಸ್ ಮೈತ್ರಿಯಲ್ಲಿದ್ದು, ಬಿಹಾರದಲ್ಲಿ ಯುಪಿಎ ಹಾಗೂ ಆರ್ಜೆಡಿ ಮೈತ್ರಿಯಲ್ಲಿದೆ.