ಎಲ್ಲರಿಗೂ ಉಚಿತ ಲಸಿಕೆ ನೀಡುವಂತೆ ಕಾಂಗ್ರೆಸ್ ನಾಯಕರ ಒತ್ತಾಯ
ಕೊಲ್ಕತ್ತಾ, ಜೂನ್ 6: ಪ್ರತಿಯೊಬ್ಬರಿಯೂ ಉಚಿತವಾಗಿ ಕೊರೊನಾ ವೈರಸ್ ಲಸಿಕೆಯನ್ನು ನೀಡಬೇಕು ಎಂಬ ಕಾಂಗ್ರೆಸ್ ನಾಯಕರ ಒತ್ತಾಯ ಹೆಚ್ಚಾಗಿದೆ. ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಕೂಡ ಪಶ್ಚಿಮ ಬಂಗಾಳದ ರಾಜ್ಯಪಾಲರಿಗೆ ಪತ್ರವನ್ನು ಬರೆದು ಉಚಿಯ ಲಸಿಕೆಗಾಗಿ ಒತ್ತಾಯಿಸಿದ್ದಾರೆ. ಜೊತೆಗೆ ನಿತ್ಯವೂ ಒಂದು ಕೋಟಿ ಲಸಿಕೆಯನ್ನು ಖಾತ್ರಿಪಡಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಕೇಂದ್ರ ಬಿಜೆಪಿ ನಾಯಕರು ಜುಲೈ ಮಧ್ಯದಲ್ಲಿ ಅಥವಾ ಆಗಸ್ಟ್ ಆರಂಭದಲ್ಲಿ ಭಾರತದಲ್ಲಿ ಅಗತ್ಯ ಲಸಿಕೆಗಳು ಲಭ್ಯವಾಗಲಿದೆ, ನಿತ್ಯವೂ ಒಂದು ಕೋಟಿ ಜನರಿಗೆ ಲಸಿಕೆ ನೀಡಲು ಸಾಧ್ಯವಾಗಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಭರವಸೆಗಳ ನಂತರ ಅಧೀರ್ ರಂಜನ್ ಚೌಧರಿ ಈ ಮನವಿಯನ್ನು ಮಾಡಿದ್ದಾರೆ.
ಭಾರತಕ್ಕೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಅಮೆರಿಕ ಅಧ್ಯಕ್ಷ ಬೈಡನ್..!
ಕಾಂಗ್ರೆಸ್ ನಾಯಕರಾದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ತಿರುವನಂತಪುರಂ ಸಂಸದ ಶಶಿ ತರೂರ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಎಲ್ಲರಿಗೂ ಉಚಿತ ಲಸಿಕೆ ನೀಡುವಂತೆ ಮನವಿಯನ್ನು ಮಾಡಿದ್ದರು. ಈಗ ಅಧೀರ್ ರಂಜನ್ ಚೌಧರಿ ಕೂಡ ಇದೇ ಒತ್ತಾಯವನ್ನು ಮಾಡಿದ್ದಾರೆ.
ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಚೌಧರಿ, "ಈ ಹಂತದಲ್ಲಿ ನಿತ್ಯವೂ 16 ಲಕ್ಷ ಲಸಿಕೆ ಡೋಸ್ಗಳನ್ನು ಜನರಿಗೆ ನೀಡಲಾಗುತ್ತಿದೆ. ಈ ವೇಗದಲ್ಲಿ ಲಸಿಕೆಯನ್ನು ಮುಂದುವರಿಸಿದರೆ 18 ವರ್ಷಕ್ಕಿಂತ ಮೇಲ್ಪಟ್ಟವರ ಲಸಿಕೆ ಪೂರೈಸಲು 3 ವರ್ಷಗಳು ಬೇಕಾಗುತ್ತದೆ. ಹೀಗಿದ್ದಾಗ ಮೂರನೇ ಅಲೆಯಲ್ಲಿ ಜನರನ್ನು ರಕ್ಷಣೆ ಮಾಡಲು ಹೇಗೆ ಸಾಧ್ಯವಾಗುತ್ತದೆ" ಎಂದು ಪ್ರಶ್ನಿಸಿದ್ದಾರೆ.
ಲಸಿಕೆ ಪಡೆದಾಗಿದೆ, ಕೊರೊನಾ ಸೋಂಕಿನ ಲಕ್ಷಣವಿದೆ ಏನು ಮಾಡಬೇಕು?
ಇನ್ನು ಇದೇ ಸಂದರ್ಭದಲ್ಲಿ ಚೌಧರಿ ಕೇಂದ್ರ ಸರ್ಕಾರದ ಲಸಿಕಾ ನೀತಿ ಅಪಾಯಕಾರಿ ಹಾಗೂ ಎಡವಟ್ಟುಗಳಿಂದ ಕೂಡಿದೆ ಎಂದಿದ್ದಾರೆ. ಡಿಜಿಟಲ್ ವೇದಿಕೆಗಳನ್ನು ಬಳಸುವ ಮೂಲಕ ಲಸಿಕೆಯ ವೇಗವನ್ನು ಕುಗ್ಗಿಸಲಾಗಿದೆ ಹಾಗೂ ಉದ್ದೇಶಪೂರ್ವಕವಾಗಿ ಒಂದೇ ಲಸಿಕೆಗೆ ಬೇರೆ ಬೇರೆ ಪ್ರಮಾಣದಲ್ಲಿ ದರವನ್ನು ನಿಗದಿಪಡಿಸಲಾಗಿದೆ ಎಂದು ಕಾಂಗ್ರೆಸ್ ಸಂಸದ ರಾಜ್ಯಪಾಲರರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.