ನವಭಾರತ ನಿರ್ಮಾಣದ ಹೊಣೆ ಈಗ ಟಿಎಂಸಿ ಮೇಲಿದೆ; ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಅಕ್ಟೋಬರ್ 07: ಬಿಜೆಪಿ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ದಯನೀಯವಾಗಿ ಸೋತಿದೆ. ಭಾರತದ ಜನರು 'ಫ್ಯಾಸಿಸ್ಟ್' ಕೇಸರಿ ಪಕ್ಷವನ್ನು ಹೊರಹಾಕುವ ಮೂಲಕ ನವಭಾರತ ನಿರ್ಮಾಣದ ಹೊಣೆಯನ್ನು ತೃಣಮೂಲ ಕಾಂಗ್ರೆಸ್ಗೆ ನೀಡಿದ್ದಾರೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದರು.
ಈ ವರ್ಷಾರಂಭದಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ನಂತರ ದೇಶಾದ್ಯಂತ ಜನರಲ್ಲಿ ನಮ್ಮ ಮೇಲೆ ನಂಬಿಕೆ, ವಿಶ್ವಾಸ ಬಂದಿದೆ ಎಂದು ಪಕ್ಷದ ಮುಖವಾಣಿ 'ಜಾಗೋ ಬಾಂಗ್ಲಾ' ಸಂಪಾದಕೀಯದಲ್ಲಿ ಹೇಳಿಕೆ ನೀಡಿದ್ದಾರೆ.
ಬಂಗಾಳ ಪ್ರವಾಹಕ್ಕೆ ಶಾಶ್ವತ ಪರಿಹಾರ ಕೋರಿ ಮೋದಿಗೆ ದೀದಿ ಪತ್ರ
'ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತನ್ನ ಸೋಲನ್ನು ಜೀರ್ಣಿಸಿಕೊಳ್ಳಲು ಆಗಲಿಲ್ಲ. ಇದೀಗ ಸೇಡು ತೀರಿಸಿಕೊಳ್ಳುವ ರಾಜಕೀಯ ಮಾಡುತ್ತಿದೆ. ಟಿಎಂಸಿ ಮುಂದೆ ಈಗ ಹೊಸ ಸವಾಲು ಇದೆ. ದೆಹಲಿ ಕರೆ. ಈ ದೇಶದ ಜನರು ಜನವಿರೋಧಿ ನೀತಿಗಳು ಹಾಗೂ ಫ್ಯಾಸಿಸ್ಟ್ ಶಕ್ತಿಗಳಿಂದ ಮುಕ್ತಿ ಬಯಸುತ್ತಾರೆ' ಎಂದಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ ನಂತರ ಮಮತಾ ಬ್ಯಾನರ್ಜಿ ಜುಲೈ ತಿಂಗಳಿನಲ್ಲಿ ದೆಹಲಿಗೆ ಭೇಟಿ ನೀಡಿದ್ದರು. 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಸೋಲಿಸಲು ವಿಪಕ್ಷಗಳ ಮೈತ್ರಿ ಮಾರ್ಗಗಳ ಅನ್ವೇಷಣೆಗೆ ವಿರೋಧ ಪಕ್ಷದ ನಾಯಕರೊಂದಿಗೆ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದರು.
'ದೇಶದ ಜನರು ಈಗ ತೃಣಮೂಲ ಕಾಂಗ್ರೆಸ್ ಸುತ್ತ ಹೊಸ ಭಾರತದ ಕನಸು ಕಟ್ಟುತ್ತಿದ್ದಾರೆ. ಟಿಎಂಸಿಗೆ ವಿವಿಧ ರಾಜ್ಯಗಳಿಂದ ಕರೆಗಳು ಬರುತ್ತಿವೆ. ಹೊಸ ಭಾರತ ನಿರ್ಮಾಣ ಹೋರಾಟವನ್ನು ಪಶ್ಚಿಮ ಬಂಗಾಳ ಮುನ್ನಡೆಸಬೇಕೆಂದು ಅವರು ಬಯಸುತ್ತಿದ್ದಾರೆ. ಜನರ ಕರೆಗಳಿಗೆ ನಾವು ಸ್ಪಂದಿಸಬೇಕಿದೆ. ಅವರ ಆಸೆಗಳನ್ನು ಈಡೇರಿಸಬೇಕು. ಎಲ್ಲಾ ಬಿಜೆಪಿ ವಿರೋಧಿ ಶಕ್ತಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಬೇಕು' ಎಂದು ಅವರು ಹೇಳಿದ್ದಾರೆ.
ಭವಾನಿಪುರ ಉಪ ಚುನಾವಣೆ; ನಿಜವಾಯ್ತು ಎಚ್ಡಿಕೆ ಭವಿಷ್ಯ!
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಗೋವಾ ಮಾಜಿ ಮುಖ್ಯಮಂತ್ರಿ ಲ್ಯೂಜಿನ್ಹೋ ಫಲೀರೊ ಈಚೆಗೆ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾದರು. ಗೋವಾ ಹಾಗೂ ತ್ರಿಪುರಾದಲ್ಲಿ 2022 ಹಾಗೂ 2023ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ತ್ರಿಪುರಾದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವತ್ತ ಪಕ್ಷ ಕಣ್ಣಿಟ್ಟಿದೆ.
'ಬಿಜೆಪಿ ವಿರೋಧಿ ಶಕ್ತಿಗಳ ಒಗ್ಗಟ್ಟಿನ ವೇದಿಕೆಯಿಂದ ಕಾಂಗ್ರೆಸ್ ದೂರವಿರಿಸುವುದನ್ನು ತಾವು ಪರಿಗಣಿಸಿಲ್ಲ' ಎಂದಿರುವ ಬ್ಯಾನರ್ಜಿ, ಇಂಥ ವೇದಿಕೆ ನೀತಿಗಳನ್ನು ಆಧರಿಸಿರಬೇಕು' ಎಂದು ಹೇಳಿದ್ದಾರೆ.
'ಆದರೆ ವಾಸ್ತವವೆಂದರೆ, ಈಚೆಗೆ ಬಿಜೆಪಿ ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ವಿಫಲವಾಗಿದೆ. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಇದು ಸಾಬೀತಾಗಿದೆ. ನೀವು ಕೇಂದ್ರದಲ್ಲಿ ಹೋರಾಟ ಮಾಡಲು ಸಾಧ್ಯವಾಗದಿದ್ದರೆ, ಅದು ಜನಸಾಮಾನ್ಯರ ವಿಶ್ವಾಸವನ್ನು ಕಳೆದುಕೊಳ್ಳುತ್ತದೆ ಮತ್ತು ಈ ಕಾರಣಕ್ಕೆ ಬಿಜೆಪಿ ಇನ್ನೂ ಕೆಲವು ಮತಗಳನ್ನು ಪಡೆಯುತ್ತದೆ. ಈ ಬಾರಿ ಹೀಗಾಗಲು ಬಿಡಬಾರದು' ಎಂದಿದ್ದಾರೆ.
'ನಮಗೆ ಈ ಮೈತ್ರಿ ನಾಯಕತ್ವ ಬೇಕಾಗಿಲ್ಲ. ಆದರೆ ಕಾಂಗ್ರೆಸ್ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದರೆ ಮೈತ್ರಿಕೂಟದಲ್ಲಿ ಅಂತರ ಉಂಟಾಗುತ್ತದೆ. ವಿರೋಧಿ ಬಲ ರಚನೆಯಲ್ಲಿ ಯವುದೇ ಲೋಪವಿರಬಾರದು, ಅಖಿಲ ಭಾರತ ಮಟ್ಟದಲ್ಲಿ ರಚನೆಯಾಗಬೇಕು' ಎಂದು ಸಲಹೆ ನೀಡಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಟಿಎಂಸಿ ಪ್ರೇರಕ ಶಕ್ತಿಯಾಗಿದೆ ಎಂದು ಹೇಳಿದ ಅವರು, ಟಿಎಂಸಿ ಅಭಿವೃದ್ಧಿ ಮಾದರಿ ಕೇಸರಿ ಪಕ್ಷವನ್ನು ಸೋಲಿಸಿದೆ ಎಂದು ಸಮರ್ಥಿಸಿಕೊಂಡರು.
ಈಚೆಗೆ ಪಶ್ಚಿಮ ಬಂಗಾಳದ ಭವಾನಿಪುರ ಉಪ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಗೆಲುವು ಸಾಧಿಸಿದ್ದರು. 58 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್, ಸಿಪಿಐ(ಎಂ) ನಿಂದ ಶ್ರೀಜಿಬ್ ಬಿಸ್ವಾಸ್ ಮಮತಾ ಬ್ಯಾನರ್ಜಿ ಎದುರಾಳಿಗಳಾಗಿದ್ದರು.