"ಸೀತೆಗೆ ಅವಮಾನ"; ತೃಣಮೂಲ ಕಾಂಗ್ರೆಸ್ ಸಂಸದನ ಮೇಲೆ ದೂರು ದಾಖಲು
ಕೋಲ್ಕತ್ತಾ, ಜನವರಿ 11: ಹಿಂದೂ ದೇವತೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ, ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ತೃಣಮೂಲ ಕಾಂಗ್ರೆಸ್ ನ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಭಾನುವಾರ ಉತ್ತರ 24 ಪರಗಣ ಜಿಲ್ಲೆಯ ಬ್ಯಾರಕ್ ಪೋರ್ ನಲ್ಲಿ ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಸಂಸದ ಕಲ್ಯಾಣ್ ಬ್ಯಾನರ್ಜಿ, ಹಿಂದೂ ದೇವತೆ ಸೀತೆಯ ಅಪಹರಣ ಸಂಗತಿಯನ್ನು ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಹೋಲಿಸಿ ಮಾತನಾಡಿದ್ದರು.
ಹಿಂದೂ ದೇವತೆ ಬಗ್ಗೆ ಹೇಳಿಕೆ; ತೃಣಮೂಲ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬಿಜೆಪಿ
"ನಾನು ರಾವಣನಿಂದ ಅಪಹರಣಕ್ಕೆ ಒಳಗಾದೆ, ನಿಮ್ಮ ಕೇಸರಿ ಅನುಯಾಯಿಗಳಿಂದ ಅಪಹರಣವಾಗಿದ್ದರೆ ಹತ್ರಾಸ್ ಪ್ರಕರಣದಂತೆಯೇ ನನ್ನ ಹಣೆ ಬರಹವೂ ಆಗುತ್ತಿತ್ತು" ಎಂದು ಸದ್ಯದ ಪರಿಸ್ಥಿತಿಯಲ್ಲಿ ಸೀತೆ ರಾಮನಿಗೆ ಹೇಳಬೇಕಾಗಿತ್ತು ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ದೇವತೆ ಸೀತಾ ಮಾತೆ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ, ಹಿಂದೂ ಭಾವನೆಗಳಿಗೆ ಧಕ್ಕೆ ತರುವಂತೆ ಮಾತನಾಡಿದ್ದಾರೆ ಎಂದು ದೂರಿದ್ದರು. ಬಿಜೆಪಿ ಯುವ ಮೋಚರ್ ಆಶಿಶ್ ಜೈಸ್ವಾಲ್ ಹೌರಾಹ್ ನ ಗೋಲಬರಿ ಪೊಲೀಸ್ ಠಾಣೆಯಲ್ಲಿ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
"ಕಲ್ಯಾಣ್ ಬ್ಯಾನರ್ಜಿ ಸೀತಾಮಾತೆ ಬಗ್ಗೆ ಬಳಸಿದ ಪದ ಅವಹೇಳನಕಾರಿಯಲ್ಲದೇ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಇಡೀ ಹಿಂದೂ ಸಮುದಾಯ ಸೀತಾಮಾತೆಯನ್ನು ಪೂಜಿಸುತ್ತದೆ. ಅಂಥ ಮಾತೆಗೇ ಅವಮಾನ ಮಾಡಿದ್ದಾರೆ ಎಂದು ದೂರಿದ್ದಾರೆ. ಈ ಒಂದು ವಿವಾದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ-ಬಿಜೆಪಿ ನಡುವಿನ ವಾಗ್ವಾದ ಇನ್ನಷ್ಟು ಹೆಚ್ಚಾಗಿದೆ.