ಸಿದ್ದಾರ್ಥ ಸಾವಿಗೆ ವಿಷಾದ ವ್ಯಕ್ತಪಡಿಸುತ್ತಾ ಮೋದಿ ಸರಕಾರವನ್ನು ಬೆಂಡೆತ್ತಿದ ಮಮತಾ
Recommended Video
ಕೋಲ್ಕತ್ತಾ, ಜುಲೈ 31: ಉದ್ಯಮಿ ವಿ ಜಿ ಸಿದ್ದಾರ್ಥ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವಿಷಾದ ವ್ಯಕ್ತ ಪಡಿಸುತ್ತಾ ಕೇಂದ್ರ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.
ಈ ಬಗ್ಗೆ ಒಂಬತ್ತು ಟ್ವೀಟ್ ಗಳನ್ನು ಮಾಡಿ ದೀದಿ ಆಕ್ರೋಶ ವ್ಯಕ್ತ ಪಡಿಸಿದ್ದು ಹೀಗೆ, "ವಿ ಜಿ ಸಿದ್ಧಾರ್ಥ ಅವರ ಸಾವಿನ ಸುದ್ದಿಯನ್ನು ಕೇಳಿ ತೀವ್ರ ಆಘಾತಕ್ಕೊಳಗಾಗಿದ್ದೇನೆ. ಇದು ನಿಜಕ್ಕೂ ತುಂಬಾ ದುಃಖಕರ ಮತ್ತು ದುರದೃಷ್ಟಕರ".
ನಲವತ್ತು ವರ್ಷದ ನಂಟು; ಸಿದ್ಧಾರ್ಥ್ ಸಾವಿಗೆ ಕಣ್ಣೀರಾದ ಶಾಸಕ ರಾಜೇಗೌಡ
"ವಿವಿಧ ಏಜೆನ್ಸಿಗಳ ಕಿರುಕುಳ ಮತ್ತು ಒತ್ತಡದಿಂದಾಗಿ ಸಿದ್ಧಾರ್ಥ ತಮ್ಮ ವ್ಯವಹಾರವನ್ನು ನಿರಾಯಾಸವಾಗಿ ನಡೆಸಲು ಸಾಧ್ಯವಾಗಲಿಲ್ಲ. ಜೊತೆಗೆ, ಅದನ್ನು ಅವರು ವಿರೋಧಿಸಲು ಸಾಧ್ಯವಾಗಲಿಲ್ಲ".
"ದೇಶದ ಉದ್ಯಮಿಗಳು ಸಾಕಷ್ಟು ಒತ್ತಡದಲ್ಲಿದ್ದಾರೆ, ಕೆಲವರು ಈಗಾಗಲೇ ದೇಶವನ್ನು ತೊರೆದಿದ್ದಾರೆ, ಇನ್ನು ಕೆಲವರು ದೇಶ ಬಿಟ್ಟು ಹೋಗಲು ಯೋಚಿಸುತ್ತಿದ್ದಾರೆ. ದೇಶದ ಎಲ್ಲಾ ವಿರೋಧ ಪಕ್ಷಗಳು ಕುದುರೆ ವ್ಯಾಪಾರಕ್ಕೆ ಹೆದರುತ್ತಿವೆ".
"ಇನ್ನೊಂದೆಡೆ, 2018-19ರ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆ ಶೇ. 5.8% ನಷ್ಟು ಕುಸಿದಿದೆ. ನಿರುದ್ಯೋಗ ಸಮಸ್ಯೆ ಕಳೆದ ನಲವತ್ತೈದು ವರ್ಷಗಳಲ್ಲಿ ಇಲ್ಲದಷ್ಟು ಏರಿಕೆ ಕಂಡಿದೆ".
ಕಾಫಿ ಡೇ ಸಂಸ್ಥೆಯ ನೂತನ ಸಿಒಒ ಆಗಿ ನಿತಿನ್ ಬಾಗ್ಮನೆ ನೇಮಕ
" ಜೊತೆಗೆ, ಸಾರ್ವಜನಿಕ ವಲಯದ ಬಿಎಸ್ಎನ್ಎಲ್, ಏರ್ ಇಂಡಿಯಾ, ಚಿತ್ತರಂಜನ್ ಫ್ಯಾಕ್ಟರಿ ಮುಂತಾದ ಸಂಸ್ಥೆಗಳ ಆಸ್ತಿಯನ್ನು ಬೇರೆ ಕಡೆ ಹೂಡಿಕೆ ಮಾಡುತ್ತಿದೆ. ಒಟ್ಟಾರೆಯಾಗಿ, ದೇಶದ ಆರ್ಥಿಕ ಸ್ಥಿತಿಯಿಂದಾಗಿ, ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ".
"ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ನನ್ನ ಮನವಿ ಏನೆಂದರೆ, ಇನ್ನಾದರೂ ಶಾಂತಿಯುತವಾಗಿ ಕೆಲಸ ಮಾಡಿ, ಜನರ ವಿಶ್ವಾಸಗಳಿಸಿಕೊಳ್ಳಿ" ಇದು ಮಮತಾ ಬ್ಯಾನರ್ಜಿ ಮಾಡಿರುವ ಸಾಲುಸಾಲು ಟ್ವೀಟಿಗೆ ಸಾರಾಂಶ.