ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ; ಟಿಎಂಸಿ ನಾಯಕನ ಮನೆ ಮೇಲೆ ಸಿಬಿಐ ದಾಳಿ
ಕೋಲ್ಕತ್ತಾ, ಡಿಸೆಂಬರ್ 31: ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದಲ್ಲಿ ಗುರುವಾರ ತೃಣಮೂಲ ಕಾಂಗ್ರೆಸ್ ನಾಯಕ ವಿನಯ್ ಮಿಶ್ರಾ ಹಾಗೂ ಉದ್ಯಮಿಗಳಾದ ಅವರ ಸಹೋದರರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ.
ವಿನಯ್ ಮಿಶ್ರಾ ಹಾಗೂ ಅವರ ಸಹೋದರರಾದ ಅಮಿತ್ ಸಿಂಗ್ ಹಾಗೂ ನೀರಜ್ ಸಿಂಗ್ ಅವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಇದರೊಂದಿಗೆ ಜನವರಿ 4ರಂದು ಕೋಲ್ಕತ್ತಾದ ಸಿಬಿಐ ಕಚೇರಿಯಲ್ಲಿ ಮಿಶ್ರಾ ಹಾಗೂ ಇತರರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ.
ಅಮಿತ್ ಶಾ ಭೇಟಿ ನಂತರದ ಒಂದೇ ವಾರದಲ್ಲಿ ಉತ್ತರ ಕೊಟ್ಟ ದೀದಿ
ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ ನ ಗಣಿ ಕಂಪನಿಗಳು ಕಾರ್ಯನಿರ್ವಹಿಸುವ, ಪಶ್ಚಿಮ ಬಂಗಾಳದ ಪಶ್ಚಿಮ ಭಾಗಗಳಲ್ಲಿ ಕಲ್ಲಿದ್ದಲು ದಂಧೆ ನಡೆಯುತ್ತಿದ್ದು, ಹಲವು ವರ್ಷಗಳಿಂದ ಅಕ್ರಮವಾಗಿ ಗಣಿಗಾರಿಕೆ ಮಾಡಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಲ್ಲಿದ್ದಲನ್ನು ಬ್ಲ್ಯಾಕ್ ಮಾರ್ಕೆಟ್ ನಲ್ಲಿ ಮಾರಾಟ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.
ಪೊಲೀಸ್ ಸಿಬ್ಬಂದಿಯೊಂದಿಗೆ ಸಿಬಿಐ ತಂಡ ಗುರುವಾರ ಚೆಟ್ಲಾ, ರಾಶ್ ಬೆಹಾರಿ, ಪೂರ್ವ ಕೋಲ್ಕತ್ತಾದಲ್ಲಿನ ಲೇಕ್ ಟೌನ್ ನಲ್ಲಿ ಮಿಶ್ರಾ ಒಡೆತನದ ಮೂರು ಅಪಾರ್ಟ್ ಮೆಂಟ್ ಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ದಾಳಿ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿರುವ ಸಿಬಿಐ, ಹಲವು ಲ್ಯಾಪ್ ಟಾಪ್, ದಾಖಲೆಗಳನ್ನು ನಿವಾಸದಿಂದ ವಶಪಡಿಸಿಕೊಂಡಿರುವುದಾಗಿ ತಿಳಿಸಿದೆ. ಇದರೊಂದಿಗೆ ಹೂಗ್ಲಿ ಜಿಲ್ಲೆಯ ಕೊನ್ನಗಾರ್ ನಲ್ಲಿನ ಅಮಿತ್ ಸಿಂಗ್ ಹಾಗೂ ನೀರಜ್ ಸಿಂಗ್ ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಡಿಸೆಂಬರ್ ಮೊದಲ ವಾರದಲ್ಲಿ ಕೋಲ್ಕತ್ತಾದ ಚಾರ್ಟೆಡ್ ಅಕೌಂಟಂಟ್ ಗಣೇಶ್ ಬಗಾರಿಯಾ ಎಂಬುವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು.
ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಈ ದಂಧೆ ತನಿಖೆ ಆರಂಭಗೊಂಡಿದ್ದು, ಅಕ್ರಮವಾಗಿ ಕಲ್ಲಿದ್ದಲು ಮಾರಾಟದಿಂದ ಬಂದ ಹಣವನ್ನು ಟಿಎಂಸಿ ಪಕ್ಷದ ನಿಧಿಗೆ ಕೊಡಲಾಗುತ್ತಿದೆ ಎಂದು ಆಗಿನಿಂದಲೂ ಬಿಜೆಪಿ ತೃಣಮೂಲ ಕಾಂಗ್ರೆಸ್ ಮೇಲೆ ಆರೋಪಿಸುತ್ತಾ ಬಂದಿದೆ. ಇದರೊಂದಿಗೆ, ಲೋಕಸಭಾ ಸದಸ್ಯ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಇದರಿಂದ ಲಾಭ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ದೂರಿತ್ತು.
ಅಭಿಷೇಕ್ ಬ್ಯಾನರ್ಜಿ, ಟಿಎಂಸಿ ಯುವ ಸಂಘಟನೆಯ ಅಧ್ಯಕ್ಷರಾಗಿದ್ದು, ಜುಲೈ 20ರಂದು ಮಿಶ್ರಾ ಒಳಗೊಂಡಂತೆ ಹದಿನೈದು ಕಾರ್ಯದರ್ಶಿಗಳನ್ನು ನೇಮಿಸಿದ್ದರು.
ಸಿಬಿಐ ದಾಳಿ ನಂತರ ತೃಣಮೂಲ ಕಾಂಗ್ರೆಸ್ ಮೇಲೆ ಬಿಜೆಪಿ ಹರಿಹಾಯ್ದಿದೆ. "ಇದು ಟಿಎಂಸಿ ನಾಯಕತ್ವದ ನಿಜವಾದ ಬಣ್ಣ" ಎಂದು ಈಚೆಗೆ ಟಿಎಂಸಿ ತೊರೆದ ಸುವೇಂದು ಅಧಿಕಾರಿ ಟೀಕಿಸಿದ್ದಾರೆ. ಇದಕ್ಕೆ, "ಮಿಶ್ರಾ ಪಕ್ಷದ ಪ್ರಮುಖ ಸದಸ್ಯ ಅಲ್ಲ.ಈ ಸಿಬಿಐ ದಾಳಿಯು ಪಕ್ಷದಲ್ಲಿ ಯಾವುದೇ ಬದಲಾವಣೆಗೆ ಕಾರಣವಲ್ಲ" ಎಂದು ಟಿಎಂಸಿ ವಕ್ತಾರ ಸುಗತಾ ರಾಯ್ ಪ್ರತಿಕ್ರಿಯಿಸಿದ್ದಾರೆ.