ಸಿಎಂಗಳನ್ನು ಬೊಂಬೆಗಳಂತೆ ಕೂರಿಸಿ ಅವಮಾನ ಮಾಡುತ್ತಿದ್ದಾರೆ; ದೀದಿ
ಕೋಲ್ಕತ್ತಾ, ಮೇ 20: ಕೊರೊನಾ ನಿರ್ವಹಣೆ ಸಂಬಂಧ ಪ್ರಧಾನಿ ಮೋದಿ ಅವರೊಂದಿಗಿನ ಸಭೆಯಲ್ಲಿ ಮುಖ್ಯಮಂತ್ರಿಗಳನ್ನು ಬೊಂಬೆಗಳಂತೆ ಕೂರಿಸಿ ಅವಮಾನ ಮಾಡಲಾಗುತ್ತದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಗುರುವಾರ ಕೊರೊನಾ ನಿಯಂತ್ರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹತ್ತು ರಾಜ್ಯಗಳ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವರ್ಚುಯಲ್ ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ಈ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶವನ್ನೇ ನೀಡುವುದಿಲ್ಲ ಎಂದು ದೂರಿದ್ದಾರೆ.
ಕೊರೊನಾ ನಿಯಂತ್ರಣ; ಸಣ್ಣ ಎಚ್ಚರಿಕೆ ರವಾನಿಸಿದ ಪ್ರಧಾನಿ ಮೋದಿ
"ಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದಾದರೆ ಸಭೆಯನ್ನು ಏಕೆ ಕರೆಯಬೇಕು? ಚರ್ಚೆ ಮಾಡಲು ಅವಕಾಶ ನೀಡದ್ದಕ್ಕೆ ಎಲ್ಲಾ ಮುಖ್ಯಮಂತ್ರಿಗಳು ಪ್ರತಿಭಟನೆ ನಡೆಸಬೇಕು" ಎಂದಿದ್ದಾರೆ.
ದೇಶದಲ್ಲಿ ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿವೆ ಎನ್ನುತ್ತಾರೆ. ಆದರೆ ಏಕಿಷ್ಟು ಜನ ಸಾಯುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಈ ಸಭೆ ಎನ್ನುವುದು ಸೂಪರ್ ಫ್ಲಾಪ್ ಆಗಿದೆ ಹಾಗೂ ಮುಖ್ಯಮಂತ್ರಿಗಳಿಗೆ ಸಭೆಯಲ್ಲಿ ಅವಮಾನವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಕೊರೊನಾ ಸೋಂಕು ಇಡೀ ದೇಶಕ್ಕೆ ಸವಾಲಾಗಿದೆ. ಸ್ಥಳೀಯ ಅನುಭವಗಳನ್ನು ಬಳಸಿಕೊಂಡು ಇದರ ವಿರುದ್ಧ ಹೋರಾಡಬೇಕಿದೆ. ಮುಂದೆ ಹೊಸ ರೂಪಾಂತರಗಳು ಸೃಷ್ಟಿಯಾಗಲಿದ್ದು, ಅದಕ್ಕೆ ತಕ್ಕಂತೆ ಕಾರ್ಯಸೂಚಿಗಳನ್ನೂ ರೂಪಿಸಬೇಕಿದೆ ಎಂದಿದ್ದರು.
ಕೊರೊನಾ ನಿಯಂತ್ರಣ ವಿಷಯದಲ್ಲಿ ನಾವು ಸ್ಥಳೀಯ ಅನುಭವಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿದೆ. ಈ ಅನುಭವಗಳೊಂದಿಗೆ ಒಂದೇ ದೇಶವಾಗಿ ನಾವು ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂಬುದನ್ನು ಒತ್ತಿ ಹೇಳಿದ್ದರು. ಕೊರೊನಾ ಸೋಂಕು ಭಾರತದಲ್ಲಿ ಕಾಣಿಸಿಕೊಂಡ ಈ ಒಂದೂವರೆ ವರ್ಷದಲ್ಲಿ ಸಾಕಷ್ಟು ಅನುಭವಗಳಾಗಿವೆ. ಅದರ ವಿರುದ್ಧ ಹೋರಾಡಬೇಕಾದ ಅನಿವಾರ್ಯದ ಕುರಿತೂ ಮನದಟ್ಟಾಗಿದೆ. ಸಣ್ಣ ಮಟ್ಟದಲ್ಲಿದ್ದರೂ ಕೊರೊನಾ ನಿರ್ಲಕ್ಷಿಸುವಂತಿಲ್ಲ. ಸವಾಲು ಎಂದಿಗೂ ಇದ್ದೇ ಇದೆ ಎಂದು ಹೇಳಿದ್ದರು.