ಬಿಜೆಪಿಯವರೇನು ದೇವರಾ?; ರಥಯಾತ್ರೆ ಬಗ್ಗೆ ಮಮತಾ ಬ್ಯಾನರ್ಜಿ ಟೀಕೆ
ಕೋಲ್ಕತ್ತಾ, ಫೆಬ್ರುವರಿ 10: ಮುಂಬರುವ ವಿಧಾನಸಭೆ ಚುನಾವಣಾ ಪ್ರಚಾರ ಕಾರ್ಯಕ್ಕೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಥಯಾತ್ರೆ ಆರಂಭಿಸಿದ್ದು, ಈ ಬಗ್ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದ್ದಾರೆ. "ತಾವು ದೇವರು ಎಂಬ ರೀತಿ ಕೇಸರಿ ಮುಖಂಡರು ರಥಗಳಲ್ಲಿ ಓಡಾಡುತ್ತಿದ್ದಾರೆ" ಎಂದು ಟೀಕಿಸಿದ್ದಾರೆ.
"ರಥಯಾತ್ರೆ ಎಂಬುದು ಧಾರ್ಮಿಕ ಉತ್ಸವ. ಈ ಉತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳುತ್ತೇವೆ. ಜಗನ್ನಾಥ, ಬಲರಾಮ ಹಾಗೂ ಸುಭದ್ರಾ ದೇವರಿಗೆ ರಥದಲ್ಲಿ ಮೆರವಣಿಗೆ ಮಾಡಿ ಪೂಜಿಸುತ್ತೇವೆ. ಆದರೆ ಬಿಜೆಪಿ ನಾಯಕರು ತಮ್ಮ ರಾಜಕೀಯ ಉದ್ದೇಶಗಳಿಗೆ ಈ ರಥಗಳನ್ನು ಬಳಸಿಕೊಳ್ಳುತ್ತಿದ್ದಾರೆ. ತಾವೇ ದೇವರು ಎಂಬಂತೆ ರಥದಲ್ಲಿ ಮೆರವಣಿಗೆ ಮಾಡುತ್ತಿದ್ದಾರೆ" ಎಂದು ವ್ಯಂಗ್ಯ ಮಾಡಿದ್ದಾರೆ.
"ಬಿಜೆಪಿಯವರು ದುಡ್ಡು ಕೊಟ್ಟರೆ ಮಟನ್ ತಿನ್ನಿ; ಆದರೆ ಮತ ಹಾಕಬೇಡಿ"
ಬುಧವಾರ ರಾಯ್ ಗಂಜ್ ನಲ್ಲಿ ಪ್ರಚಾರ ಮೆರವಣಿಗೆ ಸಂದರ್ಭ ಮಾತನಾಡಿದ ಅವರು, "ಬಿಜೆಪಿ ತನ್ನ ಬಳಿ ಹಣವಿದೆ, ಅದರಿಂದ ಏನು ಬೇಕಾದರೂ ಮಾಡಬಹುದು ಎಂದುಕೊಂಡಿದೆ. ಆದರೆ ದುಡ್ಡಿಗಿಂತ ಮನುಷ್ಯ ದೊಡ್ಡವನು. ನಮ್ಮ ಅವಶ್ಯಕತೆಗಳಿಗಷ್ಟೇ ಹಣ, ಅದರಿಂದಾಚೆಗೆ ಅಲ್ಲ" ಎಂದಿದ್ದಾರೆ. "ಕೆಲವು ಹೊರಗಿನ ಜನರು ಐಷಾರಾಮಿ ಕಾರುಗಳಲ್ಲಿ ಬಂದು ಪಶ್ಚಿಮ ಬಂಗಾಳದ ಬಡವರ ಮನೆಗಳಲ್ಲಿ ಫೋಟೊ ಸೆಷನ್ ಮಾಡಿಸಿಕೊಳ್ಳುತ್ತಿದ್ದಾರೆ" ಎಂದು ಪುನಃ ದೂರಿದ್ದಾರೆ.
ಈ ರಾಜ್ಯದವರೇ ಬಂಗಾಳವನ್ನು ಆಳುತ್ತಾರೆ, ಗುಜರಾತ್ ನಿಂದ ಬಂದವರಲ್ಲ. ನಾನು ಸಾಮಾನ್ಯ ಜನರ ಸ್ಥಾನದಲ್ಲಿ ನಿಂತು ಸರ್ಕಾರ ನಡೆಸುತ್ತೇನೆ. ಯಾರು ಕೆಲಸ ಮಾಡುತ್ತಾರೋ ಅವರಿಗೆ ತೃಣಮೂಲ ಕಾಂಗ್ರೆಸ್ ಟಿಕೆಟ್ ನೀಡುತ್ತದೆ. ತೃಣಮೂಲ ಕಾಂಗ್ರೆಸ್ ಯಾರ ಮುಂದೆಯೂ ತಲೆಬಾಗುವುದಿಲ್ಲ ಎಂದು ಹೇಳಿದ್ದಾರೆ.