ಮಮತಾ ಭಾಷಣದ ಮಧ್ಯೆ ಜೈ ಶ್ರೀರಾಮ ಘೋಷಣೆ; ಕೋಪದಲ್ಲೇ ಭಾಷಣ ಆರಂಭಿಸಿದ ದೀದಿ
ಕೋಲ್ಕತ್ತಾ, ಜನವರಿ 23: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನೋತ್ಸವವನ್ನು ಕೇಂದ್ರ ಸರ್ಕಾರ ಕೋಲ್ಕತ್ತಾದಲ್ಲಿ ಆಚರಿಸಿದ್ದು, ಕಾರ್ಯಕ್ರಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಭಾಗವಹಿಸಿದ್ದರು.
ನೇತಾಜಿ ಅವರ ಜನ್ಮದಿನವನ್ನು ಪರಾಕ್ರಮ ದಿನವನ್ನಾಗಿ ಶನಿವಾರ ಆಚರಿಸಿದ್ದು, ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೋಪಗೊಂಡು ಭಾಷಣ ಮಾಡಲು ನಿರಾಕರಿಸಿದ ಸಂಗತಿಯೂ ನಡೆಯಿತು. ಅದೇನು? ಮುಂದೆ ಓದಿ...
ದೇಶಕ್ಕೆ ನಾಲ್ಕು ರಾಜಧಾನಿ ಬೇಕು: ಮಮತಾ ಬ್ಯಾನರ್ಜಿ ಒತ್ತಾಯ
ಮಮತಾ ಬ್ಯಾನರ್ಜಿ ಕೋಪಕ್ಕೆ ಕಾರಣವಾದ ಘೋಷಣೆ
ನೇತಾಜಿ ಅವರ ಜನ್ಮದಿನ ಸಂಬಂಧ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ವೇದಿಕೆಗೆ ಆಹ್ವಾನಿಸಲಾಯಿತು. ಆದರೆ ಮಮತಾ ಬ್ಯಾನರ್ಜಿ ವೇದಿಕೆಗೆ ಬರುತ್ತಿದ್ದಂತೆಯೇ ಕೆಲವರು "ಜೈ ಶ್ರೀರಾಮ್" ಎಂದು ಘೋಷಣೆ ಕೂಗಿದ್ದು, ಅವರ ಕೋಪಕ್ಕೆ ಕಾರಣವಾಯಿತು.
|
ಭಾಷಣ ಮಾಡಲು ನಿರಾಕರಣೆ
ಈ ಸಂದರ್ಭ ವೇದಿಕೆ ಮೇಲೆ ಬಂದ ಮಮತಾ ಬ್ಯಾನರ್ಜಿ ಭಾಷಣ ಮಾಡಲು ಹಿಂದೇಟು ಹಾಕಿದರು. ಕೊನೆಗೆ ಕೋಪದಲ್ಲೇ ಮಾತು ಆರಂಭಿಸಿದ ಅವರು,"ಸರ್ಕಾರದ ಕಾರ್ಯಕ್ರಮಗಳಲ್ಲಿ ಶಿಸ್ತುಪಾಲನೆ, ಘನತೆ ಅಗತ್ಯ. ಇದು ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ" ಎಂದೇ ಭಾಷಣ ಶುರು ಮಾಡಿದರು.
"ಸರ್ಕಾರಿ ಕಾರ್ಯಕ್ರಮದಲ್ಲಿ ಘನತೆ ಇರಬೇಕು"
"ನೇತಾಜಿ ಅವರ ಜನ್ಮದಿನ ಕಾರ್ಯಕ್ರಮ ಯಾವುದೇ ಪಕ್ಷಕ್ಕೆ ಸಂಬಂಧಿಸಿದ ಕಾರ್ಯಕ್ರಮವಲ್ಲ. ಎಲ್ಲಾ ಪಕ್ಷಗಳಿಗೆ, ಎಲ್ಲಾ ಜನರಿಗೆ ಸಂಬಂಧಿಸಿದ ಕಾರ್ಯಕ್ರಮ. ಸರ್ಕಾರದ ಕಾರ್ಯಕ್ರಮದಲ್ಲಿ ಶಿಸ್ತು ಪಾಲನೆ, ಘನತೆ ಇರಬೇಕು ಎಂಬ ಬಗ್ಗೆ ಕನಿಷ್ಠ ಅರಿವಿರಬೇಕು" ಎಂದು ಸಿಡಿಮಿಡಿಗೊಂಡರು.
"ಆಹ್ವಾನಿಸಿ ಅವಮಾನಿಸುವುದು ನಿಮಗೆ ಹೊಸತಲ್ಲ"
"ಕೇಂದ್ರ ಸರ್ಕಾರ ನೇತಾಜಿ ಅವರ ಜನ್ಮದಿನಾಚರಣೆಗೆ ಕೋಲ್ಕತ್ತಾ ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದ. ಪ್ರಧಾನಿ ಮೋದಿ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಧನ್ಯವಾದ ಅರ್ಪಿಸುವೆ" ಎಂದು ಹೇಳಿದರು. ಕೊನೆಗೆ, "ಯಾರನ್ನಾದರೂ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವಮಾನಿಸುವುದು ನಿಮಗೆ ಅಪೇಕ್ಷಿತವೇ ಆಗಿದೆ. ನಾನೇನೂ ಹೆಚ್ಚು ಮಾತನಾಡುವುದಿಲ್ಲ. ಜೈ ಹಿಂದ್, ಜೈ ಬಾಂಗ್ಲಾ" ಎಂದು ಕುಟುಕಿ ವೇದಿಕೆಯಿಂದ ನಡೆದರು.