ಪೌರತ್ವ ಕಾಯ್ದೆಯನ್ನು ನನ್ನ ಹೆಣದ ಮೇಲೆ ಜಾರಿ ಮಾಡಿ: ಮಮತಾ ಬ್ಯಾನರ್ಜಿ
ಕೊಲ್ಕತ್ತ, ಡಿಸೆಂಬರ್ 16: ಪೌರತ್ವ ಕಾಯ್ದೆಯನ್ನು ನನ್ನ ಹೆಣದ ಮೇಲೆ ಜಾರಿ ಮಾಡಬೇಕಷ್ಟೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗರ್ಜಿಸಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಆರಂಭದಿಂದಲೂ ಪ್ರಬಲ ಪ್ರತಿರೋಧವನ್ನು ಬಹುತೇಕ ವಿಷಯಗಳಲ್ಲಿ ಒಡ್ಡುತ್ತಲೇ ಬಂದಿರುವ ಮಮತಾ ಬ್ಯಾನರ್ಜಿ, ಪೌರತ್ವ ಕಾಯ್ದೆಯನ್ನೂ ಸಹ ಪ್ರಬಲವಾಗಿ ವಿರೋಧಿಸುತ್ತಿದ್ದಾರೆ.
ಪೌರತ್ವ ಕಾಯ್ದೆ ವಿರುದ್ಧದ ಜಾಹೀರಾತು ಹಿಂಪಡೆಯುವಂತೆ ದೀದಿಗೆ ಆಗ್ರಹ
'ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ ಯನ್ನು ಜಾರಿ ಮಾಡುವುದೇ ಆದರೆ ಅದನ್ನು ನನ್ನ ಹೆಣದ ಮೇಲೆ ಜಾರಿ ಮಾಡಬೇಕಷ್ಟೆ' ಎಂದು ಮಮತಾ ಬ್ಯಾನರ್ಜಿ ಇಂದು ಹೇಳಿದ್ದಾರೆ. ಆ ಮೂಲಕ ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ ವಿರುದ್ಧ ಹೋರಾಟವನ್ನು ಉಗ್ರ ರೂಪಕ್ಕೆ ಕೊಂಡೊಯ್ಯುವ ಸುಳಿವು ನೀಡಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಹೇಳಿಕೆ ನೀಡಿದ್ದ ಮಮತಾ ಬ್ಯಾನರ್ಜಿ, 'ನನ್ನ ರಾಜ್ಯದಲ್ಲಿ (ಪಶ್ಚಿಮ ಬಂಗಾಳ) ಯಾವ ಒಬ್ಬ ವ್ಯಕ್ತಿಯನ್ನಾದರೂ ಎನ್ಆರ್ಸಿ, ಪೌರತ್ವ ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಮುಟ್ಟಿ ನೋಡಲಿ' ಎಂದು ಸವಾಲು ಹಾಕಿದ್ದರು.
ಆಟಿಕೆ ಬಂದೂಕು ತೋರಿಸಿ ಮುಖ್ಯಮಂತ್ರಿ ಅಣ್ಣನನ್ನೇ ಅಪಹರಿಸಿದ ಐನಾತಿಗಳು
ಆದರೆ ಪಶ್ಚಿಮ ಬಂಗಾಳ ರಾಜ್ಯಪಾಲರು ಮಮತಾ ಬ್ಯಾನರ್ಜಿ ಅವರು ಇಂದು ನಡೆಸಿದ ಪ್ರತಿಭಟನಾ ಬೃಹತ್ ಸಭೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದು, 'ಸಾಂವಿಧಾನಿಕ ಹುದ್ದೆ ಹೊಂದಿರುವ ಯಾರೂ ಸಹ ರಾಷ್ಟ್ರಪತಿಗಳ ಅಂಕಿತದಿಂದ ಆದ ಕಾನೂನನ್ನು ವಿರೋಧಿಸುವುದು ಅಸಾಂವಿಧಾನಿಕ ಎನಿಸಿಕೊಳ್ಳುತ್ತದೆ' ಎಂದಿದ್ದಾರೆ.