ಕೋವಿಡ್ ಲಸಿಕೆ ಕಾರ್ಯಕ್ರಮ ಮುಗಿದ ಬಳಿಕ ಸಿಎಎ ಜಾರಿ: ಅಮಿತ್ ಶಾ
ಕೋಲ್ಕತಾ, ಫೆಬ್ರವರಿ 11: ಕೋವಿಡ್-19 ಲಸಿಕೆ ನೀಡುವ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದರು. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಅವರು ಅಲ್ಲಿನ ವಲಸಿಗ ಹಿಂದೂ ಸಮುದಾಯಗಳಿಗೆ ಈ ಭರವಸೆ ನೀಡಿದ್ದಾರೆ.
2015ಕ್ಕೂ ಮುನ್ನ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಿಂದ ಭಾರತಕ್ಕೆ ಬಂದ ಇತರೆ ಮುಸ್ಲಿಮೇತರ ವಲಸಿಗರ ನಡುವೆ ಮತುವಾ ಸಮುದಾಯಕ್ಕೆ ಸಿಎಎ ಜಾರಿಯಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ನಾರಾಯಣಿ ಸೇನಾ ಬೆಟಾಲಿಯನ್ ಸ್ಥಾಪನೆ: ಅಮಿತ್ ಶಾ ಭರವಸೆ
ಸಿಎಎ ಅನುಷ್ಠಾನದಿಂದ ಭಾರತದಲ್ಲಿನ ಅಲ್ಪಸಂಖ್ಯಾತರ ಪೌರತ್ವ ಸ್ಥಿತಿಗತಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಭಾರತೀಯ ರಾಷ್ಟ್ರೀಯತೆಗೆ ಧರ್ಮವನ್ನು ಮಾನದಂಡವಾಗಿಸುವ ತಾರತಮ್ಯ ಮಾಡಲಾಗುತ್ತಿದೆ ಎಂದು ವಿರೋಧಪಕ್ಷಗಳು ಟೀಕಿಸುವ ಮೂಲಕ ದೇಶದಲ್ಲಿನ ಅಲ್ಪಸಂಖ್ಯಾತರನ್ನು ದಾರಿತಪ್ಪಿಸುತ್ತಿವೆ ಎಂದು ಆರೋಪಿಸಿದ್ದಾರೆ.
ನೂತನ ಪೌರತ್ವ ಕಾನೂನನ್ನು ತರುವುದಾಗಿ 2018ರಲ್ಲಿ ಮೋದಿ ಸರ್ಕಾರ ಮಾತು ನೀಡಿತ್ತು. 2019ರಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದ ಬಳಿಕ ಅದನ್ನು ಈಡೇರಿಸಿತು. ಆದರೆ 2020ರಲ್ಲಿ ಕೋವಿಡ್ ಸಾಂಕ್ರಾಮಿಕ ಪಿಡುಗು ದೇಶಕ್ಕೆ ಅಪ್ಪಳಿಸಿದ್ದರಿಂದ ಸಿಎಎ ಜಾರಿಯನ್ನು ತಡೆಹಿಡಿಯಲಾಗಿದೆ ಎಂದಿದ್ದಾರೆ.
Video: ಪಶ್ಚಿಮ ಬಂಗಾಳದಲ್ಲಿ ದೀದಿ ವಿರುದ್ಧ "ಶ್ರೀರಾಮ" ಬಾಣ ಬಿಟ್ಟ ಅಮಿತ್ ಶಾ!
'ನಾವು ಸುಳ್ಳು ಭರವಸೆ ನೀಡಿದ್ದೆವು ಎಂದು ಮಮತಾ ದೀದಿ ಹೇಳುತ್ತಾರೆ. ಸಿಎಎಯನ್ನು ವಿರೋಧಿಸಲು ಆರಂಭಿಸಿದ ಅವರು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ತಾನು ನೀಡುವ ಭರವಸೆಗಳನ್ನು ಬಿಜೆಪಿ ಯಾವಾಗಲೂ ಈಡೇರಿಸುತ್ತದೆ. ನಾವು ಈ ಕಾನೂನು ತಂದಿದ್ದೇವೆ ಮತ್ತು ನಿರಾಶ್ರಿತರಿಗೆ ಪೌರತ್ವ ಸಿಗಲಿದೆ' ಎಂದು ಹೇಳಿದ್ದಾರೆ.