ಪಶ್ಚಿಮ ಬಂಗಾಳ ಐಪಿಎಸ್ ಅಧಿಕಾರಿಗಳಿಗೆ ಗಡುವು ನೀಡಿದ ಕೇಂದ್ರ
ಪಶ್ಚಿಮ ಬಂಗಾಳ, ಡಿಸೆಂಬರ್ 18: ಪಶ್ಚಿಮ ಬಂಗಾಳದ ಮೂರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರದ ಕರ್ತವ್ಯಕ್ಕೆ ನಿಯೋಜಿಸಿರುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಸಂಜೆ 5 ಗಂಟೆ ಒಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಗಡುವು ನೀಡಿದೆ.
ಗುರುವಾರವಷ್ಟೇ ಈ ಕುರಿತು ಸಚಿವಾಲಯ ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಡಿಜಿಪಿಗೆ ಪತ್ರ ಬರೆದಿದ್ದು, ಮೂವರು ಅಧಿಕಾರಿಗಳನ್ನು ಕೇಂದ್ರದ ಕರ್ತವ್ಯಕ್ಕೆ ತಕ್ಷಣವೇ ಕಳುಹಿಸಿಕೊಡುವಂತೆ ಎಚ್ಚರಿಕೆ ನೀಡಿತ್ತು. ಇದೀಗ ಇಂದು ಸಂಜೆ ಐದು ಗಂಟೆಯೊಳಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕಾಗಿ ಗಡುವು ನೀಡಿದೆ.
ಇದು ಅಧಿಕಾರ ದುರ್ಬಳಕೆಯಲ್ಲದೇ ಮತ್ತೇನು; ಮಮತಾ ಬ್ಯಾನರ್ಜಿ
ಕೇಂದ್ರದ ಈ ಆಜ್ಞೆಗೆ ಪಶ್ಚಿಮ ಬಂಗಾಳ ಡಿಜಿಪಿ ಹಾಗೂ ಮುಖ್ಯ ಕಾರ್ಯದರ್ಶಿ ಯಾವುದೇ ಉತ್ತರ ನೀಡಿಲ್ಲ. ಕೊರೊನಾ ಕಾರಣವಾಗಿ ದೆಹಲಿಗೆ ಹೋಗಲು ಸಾಧ್ಯವಿಲ್ಲ ಎಂದು ಮೂವರಲ್ಲಿ ಇಬ್ಬರು ಅಧಿಕಾರಿಗಳು ನಿರಾಕರಿಸಿರುವುದಾಗಿ ತಿಳಿದುಬಂದಿದೆ.
ಪಶ್ಚಿಮ ಬಂಗಾಳ ಭೇಟಿ ಸಂದರ್ಭ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆದಿದ್ದು, ಭದ್ರತಾ ವೈಫಲ್ಯದ ಆರೋಪದಲ್ಲಿ ಪಶ್ಚಿಮ ಬಂಗಾಳದ ಮೂವರು ಐಪಿಎಸ್ ಅಧಿಕಾರಿಗಳನ್ನು ಗೃಹ ವ್ಯವಹಾರಗಳ ಸಚಿವಾಲಯವು ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವಂತೆ ನಿಯೋಜಿಸಿತ್ತು. ಡಿ.12ರಂದು ಪಶ್ಚಿಮ ಬಂಗಾಳದ ಐಪಿಎಸ್ ಅಧಿಕಾರಿಗಳಾದ ಭೋಲಾನಾಥ್ ಪಾಂಡೆ, ರಾಜೀವ್ ಮಿಶ್ರಾ ಹಾಗೂ ಪ್ರವೀಣ್ ತ್ರಿಪಾಠಿ ಎಂಬುವರನ್ನು ಐದು ವರ್ಷಗಳ ಕಾಲ ಕೇಂದ್ರಕ್ಕೆ ನಿಯೋಜನೆ ಮಾಡಲಾಗಿತ್ತು.
ಗುರುವಾರ ಕೂಡ ತಕ್ಷಣವೇ ಹಾಜರಾಗುವಂತೆ ಸಚಿವಾಲಯ ಪತ್ರ ಬರೆದಿದ್ದು, ಕೇಂದ್ರದ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ಮಮತಾ ಬ್ಯಾನರ್ಜಿ, "ಇದು ಅಧಿಕಾರದ ದುರ್ಬಳಕೆ" ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಗುರುವಾರ ತೃಣಮೂಲ ಕಾಂಗ್ರೆಸ್ನ ಬಂಡಾಯ ಶಾಸಕ ಸುವೇಂದು ಅಧಿಕಾರಿ ಕೂಡ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶುಕ್ರವಾರ ಮಮತಾ ಬ್ಯಾನರ್ಜಿ ತುರ್ತು ಸಭೆ ಕರೆದಿದ್ದಾರೆ.
ಆದರೆ ಇದು ಪ್ರತಿ ಶುಕ್ರವಾರ ನಡೆಯುವ ಸಾಮಾನ್ಯ ಸಭೆಯಷ್ಟೆ. ತುರ್ತು ಸಭೆಯಲ್ಲ ಎಂದು ಟಿಎಂಸಿ ಮೂಲಗಳು ತಿಳಿಸಿವೆ.