ಕೋಲ್ಕತ್ತಾದಲ್ಲಿ ಭಾನುವಾರ ಹೈ ಡ್ರಾಮಾ: ಸಿಬಿಐ ವರ್ಸಸ್ ಪೊಲೀಸ್
ಕೋಲ್ಕತ್ತಾ, ಫೆಬ್ರವರಿ 3: ಸಿಬಿಐ ತಂಡಕ್ಕೆ ಕೋಲ್ಕತ್ತಾ ಪೊಲೀಸ್ ಮುಖ್ಯಸ್ಥ ರಾಜೀವ್ ಕುಮಾರ್ ಅವರ ನಿವಾಸಕ್ಕೆ ಪ್ರವೇಶಿಸದಂತೆ ಭಾನುವಾರ ಪೊಲೀಸರು ತಡೆ ಹಾಕಿದ್ದು, ಆ ನಂತರ ಸಿಬಿಐ ತಂಡವು ವಾಪಸಾಗಿದೆ. ಈ ಬೆಳವಣಿಗೆ ನಂತರ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀವ್ ಕುಮಾರ್ ರ ಮನೆಗೆ ಬಂದಿದ್ದಾರೆ.
ಮೂಲಗಳ ಪ್ರಕಾರ, ಕಮಿಷನರ್ ಮನೆಯಿರುವ ಷೇಕ್ ಸ್ಪಿಯರ್ ಪೊಲೀಸ್ ಠಾಣೆಯಲ್ಲಿ ಸಿಬಿಐ ತಂಡ ಇದೆ. ರೋಸ್ ವ್ಯಾಲಿ ಹಾಗೂ ಶಾರದಾ ಚಿಟ್ ಫಂಡ್ ಹಗರಣದ ವಿಚಾರವಾಗಿ ಪ್ರಶ್ನೆ ಮಾಡಲು ಸಿಬಿಐನಿಂದ ಕೋಲ್ಕತ್ತಾ ಪೊಲೀಸ್ ಮುಖ್ಯಸ್ಥರಿಗಾಗಿ ಹುಡುಕಾಟ ನಡೆದಿದೆ. ಕೊನೆಯದಾಗಿ ಪೊಲೀಸ್ ಮುಖ್ಯಸ್ಥ ರಾಜೀವ್ ಕುಮಾರ್ ನ ಬಂಧನ ಕೂಡ ಮಾಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಾರದಾ ಚಿಟ್ ಫಂಡ್ ಹಗರಣದಲ್ಲಿ ನಳಿನಿ ಚಿದಂಬರಂ ವಿರುದ್ಧ ಸಿಬಿಐ ಚಾರ್ಜ್ ಶೀಟ್
ಈ ಐಪಿಎಸ್ ಅಧಿಕಾರಿಯು ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವನ್ನು ಮುನ್ನಡೆಸಿದ್ದಾರೆ. ಈಗ ನಾಪತ್ತೆ ಆಗಿರುವ ಕಡತಗಳ ಬಗ್ಗೆ ಅವರನ್ನು ಪ್ರಶ್ನೆ ಮಾಡಬೇಕಿದೆ. ಆದರೆ ಈ ವಿಚಾರವಾಗಿ ಸಿಬಿಐ ಮುಂದೆ ಹಾಜರಾಗುವಂತೆ ನೀಡುತ್ತಿರುವ ನೋಟಿಸ್ ಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಹೇಳಲಾಗಿದೆ.
ತೃಣಮೂಲ ಕಾಂಗ್ರೆಸ್ ನ ಹಿರಿಯ ನಾಯಕ ಡೆರೆಕ್ ಒ ಬ್ರಯಾನ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಈ ದಾಳಿಯು ಸಾಂವಿಧಾನಿಕ ದಂಗೆ ಎಂದು ಕರೆದಿದ್ದಾರೆ. "ಬಿಜೆಪಿಯು ಸಾಂವಿಧಾನಿಕ ದಂಗೆಗೆ ಯತ್ನಿಸುತ್ತಿದೆಯಾ? ನಲವತ್ತು ಸಿಬಿಐ ಅಧಿಕಾರಿಗಳು ಕೋಲ್ಕತ್ತಾ ಪೊಲೀಸ್ ಕಮಿಷನರ್ ಮನೆಯನ್ನು ಸುತ್ತುವರಿದಿದ್ದಾರೆ. ಸಂಸ್ಥೆಗಳ ನಾಶ ಹೀಗೆ ಮುಂದುವರಿದಿದೆ. ಸೋಮವಾರದಂದು ನಾವು ಸಂಸತ್ ನಲ್ಲಿ ಆಗ್ರಹಿಸುತ್ತೇವೆ. ಮೋದಿ ಕೆಳಗಿಳಿಯಬೇಕು. ಪ್ರಜಾಪ್ರಭುತ್ವ ಉಳಿಸಲು ಎಲ್ಲ ವಿಪಕ್ಷಗಳನ್ನು ನಾವು ಸಂಪರ್ಕಿಸಿ, ಈ ವಿಚಾರ ಹಂಚಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.
1989ನೇ ಸಾಲಿನ ಪಶ್ಚಿಮ ಬಂಗಾಲ ಕೇಡರ್ ನ ಐಪಿಎಸ್ ಅಧಿಕಾರಿ
ರಾಜೀವ್ ಕುಮಾರ್ 1989ನೇ ಸಾಲಿನ ಪಶ್ಚಿಮ ಬಂಗಾಲ ಕೇಡರ್ ನ ಐಪಿಎಸ್ ಅಧಿಕಾರಿ. ಅವರು ಚುನಾವಣೆ ಸಿದ್ಧತೆ ಬಗ್ಗೆ ಚರ್ಚೆ ನಡೆಸಲು ಬಂದ ಆಯೋಗದ ಅಧಿಕಾರಿಗಳನ್ನು ಸಹ ಭೇಟಿ ಆಗಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಅವರ ಸಿಬ್ಬಂದಿಯು, ಕುಮಾರ್ ಶುಕ್ರವಾರ ಕಚೇರಿಗೆ ಬಂದಿದ್ದರು. ಆ ನಂತರ ಹೊರಟರು ಎನ್ನುತ್ತಾರೆ.
ಮಮತಾ ಕುತ್ತಿಗೆಗೆ ಸುತ್ತಿಕೊಂಡ 'ಚೀಟ್' ಫಂಡ್
"ಅವರು ಮತ್ತೆ ಕಚೇರಿಗೆ ಬರುವ ಅವಕಾಶ ಬಹಳ ಕಡಿಮೆ. ಸೋಮವಾರ ಪ್ರಯತ್ನಿಸಿ ಅಥವಾ ಅವರ ಮನೆಗೆ ಕರೆ ಮಾಡಿ" ಎಂದು ಫೋನ್ ನಲ್ಲಿ ಕಚೇರಿ ಸಿಬ್ಬಂದಿಯು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಇನ್ನು ಆ ಸಿಬ್ಬಂದಿ ನೀಡಿದ ಮನೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಅದು ರಿಂಗ್ ಆಗುತ್ತಿಲ್ಲ. ಮೊಬೈಲ್ ಫೋನ್ ಗೆ ಕರೆ ಮಾಡಿದರೂ ಉತ್ತರವಿಲ್ಲ. ಬೆಂಗಾಲಿ ಸಿನಿಮಾ ನಿರ್ಮಾಪಕ ಶ್ರೀಕಾಂತ್ ಮೊಹಿತಾರನ್ನು ವಶಕ್ಕೆ ಪಡೆದ ಮೇಲೆ ಕುಮಾರ್ ಸಿಗುತ್ತಿಲ್ಲ ಎಂದು ಸಿಬಿಐ ಅಧಿಕಾರಿಗಳು ಹೇಳುತ್ತಾರೆ.
ಎರಡೂ ಪ್ರಕರಣದಲ್ಲಿ ಆರೋಪಿಗಳಿಗೆ ಟಿಎಂಸಿ ಜತೆ ನಂಟು
ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಕೆಲ ದಿನಗಳ ಹಿಂದೆ ಪುಸ್ತಕ ಮೇಳದಲ್ಲಿ ಕುಮಾರ್ ಕಾಣಿಸಿಕೊಂಡಿದ್ದರು. ರೋಸ್ ವ್ಯಾಲಿ ಹಗರಣ ಹದಿನೈದು ಸಾವಿರ ಕೋಟಿ ಹಾಗೂ ಶಾರದಾ ಚಿಟ್ ಫಂಡ್ ಹಗರಣ ಎರಡೂವರೆ ಸಾವಿರ ಕೋಟಿ. ಎರಡೂ ಪ್ರಕರಣದಲ್ಲಿ ಆರೋಪಿಗಳಿಗೆ ಅಧಿಕಾರಾರೂಢ ಟಿಎಂಸಿ ಜತೆಗೆ ನಂಟಿತ್ತು ಎನ್ನುತ್ತಾರೆ.
ಐದು ವರ್ಷದ ಹಿಂದೆ ಸುಪ್ರೀಂ ಕೋರ್ಟ್ ನಿಂದ ಈ ಹಗರಣದ ತನಿಖೆ ಸಿಬಿಐಗೆ ವಹಿಸಲಾಯಿತು. ಮೂರು ವರ್ಷದ ಹಿಂದೆ ಕೋಲ್ಕತ್ತಾ ಕಮಿಷನರ್ ಆಗಿ ಕುಮಾರ್ ಬಂದರು.
ಇನ್ನು ಕೋಲ್ಕತ್ತಾ ಪೊಲೀಸರು ನೋಟಿಸ್ ಹೊರಡಿಸಿದ್ದಾರೆ. ಅದರ ಪ್ರಕಾರ, ವಿವಿಧ ಸುದ್ದಿ ವಾಹಿನಿಗಳಲ್ಲಿ ಫೆಬ್ರವರಿ ಎರಡನೇ ತಾರೀಕಿನ ಶನಿವಾರದಿಂದ ಒಂದು ಸುದ್ದಿ ಗಮನಿಸಿದೆವು. ಶಾರದಾ ಚಿಟ್ ಫಂಡ್ ಹಗರಣದಲ್ಲಿ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಗಾಗಿ ಸಿಬಿಐ ಹುಡುಕಾಡುತ್ತಿದೆ ಎಂಬುದು ಸುದ್ದಿ. ಅದೇ ಸುದ್ದಿಯಲ್ಲಿ, ಕಳೆದ ಮೂರು ದಿನದಿಂದ ಕುಮಾರ್ ತಮ್ಮ ಕಚೇರಿಗೆ ಬಂದಿಲ್ಲ ಎಂದಿದೆ.
ಕೋಲ್ಕತ್ತಾ ಪೊಲೀಸ್ ಈ ಆಧಾರರಹಿತ ಸುದ್ದಿಯನ್ನು ನಿರಾಕರಿಸುತ್ತದೆ. ಕಮಿಷನರ್ ದೊರೆಯುತ್ತಿರುವುದು ಮಾತ್ರವಲ್ಲ, ಕಚೇರಿಗೆ ಕೂಡ ತೆರಳುತ್ತಿದ್ದಾರೆ. ಅದು ಜನವರಿ ಮೂವತ್ತೊಂದನೇ ತಾರೀಕು ಹೊರತುಪಡಿಸಿ. ಆ ದಿನ ಅವರು ರಜಾದಲ್ಲಿದ್ದರು. ಯಾವುದೇ ಸುದ್ದಿಯನ್ನು ಸರಿಯಾಗಿ ಪರಿಶೀಲನೆ ಮಾಡದೆ ಹಬ್ಬಿದರೆ ಕೋಲ್ಕತ್ತಾ ಪೊಲೀಸ್ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಸಂಬಂಧಪಟ್ಟವರು ಗಮನಿಸಿ ಎಂದು ಹೇಳಿದ್ದಾರೆ.