ಮಮತಾ ಆಪ್ತನ ವಶಕ್ಕೆ ಕೋರಿ ಸುಪ್ರೀಂ ಮೊರೆ ಹೋದ ಸಿಬಿಐ
ಕೋಲ್ಕತಾ, ಡಿ.28: ಕೋಲ್ಕತಾದ ಮಾಜಿ ಪೊಲೀಸ್ ಆಯುಕ್ತ, ಸಿಎಂ ಮಮತಾ ಬ್ಯಾನರ್ಜಿ ಆಪ್ತ ರಾಜೀವ್ ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಅವಕಾಶ ಕೋರಿ ಸುಪ್ರೀಂಕೋರ್ಟಿಗೆ ಸಿಬಿಐ ಮನವಿ ಸಲ್ಲಿಸಿದೆ.
ಒಂದು ಕಾಲದಲ್ಲಿ ಮಮತಾ ಸರ್ಕಾರಕ್ಕೆ ಮುಳುವಾಗಿದ್ದ ಶಾರದಾ ಚಿಟ್ಫಂಡ್ ಹಗರಣ ಸದ್ಯಕ್ಕೆ ತಣ್ಣಗಾಗಿದೆ. ಆದರೆ, ಚುನಾವಣೆ ಹತ್ತಿರದಲ್ಲರುವಾಗ ಮತ್ತೊಮ್ಮೆ ಪ್ರಕರಣ ಮುನ್ನೆಲೆಗೆ ಬಂದಿದೆ.
40 ಸಾವಿರ ಕೋಟಿ ಹಗರಣದಲ್ಲಿ ಮಮತಾ ಕೂಡಾ ಭಾಗಿ: ಬಿಜೆಪಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀವ್ ಅವರನ್ನು ವಿಚಾರಣೆಗೊಳಪಡಿಸಲಾಗಿದ್ದು, ಅವರು ತನಿಖೆಗೆ ಸಹಕಾರ ನೀಡುತ್ತಿಲ್ಲ. ಹಗರಣದಲ್ಲಿ ಇತರ ಆರೋಪಿಗಳು ಸಮಾಜದಲ್ಲಿ ಪ್ರಮುಖರು ಭಾಗಿಯಾಗಿರುವ ಬಗ್ಗೆ ಮಾಹಿತಿಯಿದೆ ಈ ಬಗ್ಗೆ ಪತ್ತೆಹಚ್ಚಲು ರಾಜೀವ್ ಅವರ ವಿಚಾರಣೆ ಅಗತ್ಯ ಎಂದು ಸಿಬಿಐ ತನ್ನ ಅರ್ಜಿಯಲ್ಲಿ ಹೇಳಿದೆ.
ಪ್ರಕರಣ ಒಂದು ವರ್ಷದಿಂದ ಸುಪ್ರೀಂಕೋರ್ಟ್ನಲ್ಲಿ ಬಾಕಿ ಉಳಿದಿದ್ದು ಶೀಘ್ರ ವಿಚಾರಣೆ ನಡೆಸಬೇಕು. ಕಸ್ಟಡಿ ವಿಚಾರಣೆ ನಡೆಸಬೇಕಿರುವುದರಿಂದ ಕುಮಾರ್ ಅವರಿಗೆ ನೀಡಲಾಗಿದ್ದ ಜಾಮೀನು ರದ್ದುಗೊಳಿಸಬೇಕು ಎಂದು ಕೂಡ ಸಿಬಿಐ ಕೋರಿದೆ.
ಶಾರದಾ ಚಿಟ್ ಫಂಡ್ ಹಗರಣದ ತನಿಖೆ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳನ್ನು ಕುಮಾರ್ ಹಾಳುಗೆಡವಿದ್ದಾರೆ. ಹೀಗಾಗಿ, ಕೋರ್ಟ್ ನೀಡಿದ್ದ ಷರತ್ತು ಮುರಿದಿದ್ದಾರೆ. ಅವರ ಜಾಮೀನು ರದ್ದುಗೊಳಿಸಬೇಕು ಎಂದು ಕೂಡಾ ಸಿಬಿಐ ಕೋರಿದೆ.
1989ರ ಬ್ಯಾಚಿನ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಅವರು 2500 ಕೋಟಿ ರು ಮೌಲ್ಯದ ಶಾರಾದ ಚಿಟ್ ಫಂಡ್ ಹಗರಣದಲ್ಲಿ ಸಿಲುಕಿದ್ದಾರೆ. ಶಾರದಾ ಚಿಟ್ ಫಂಡ್ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ, ಸಾಕ್ಷ್ಯ ನಾಶಪಡಿಸಿದ ಆರೋಪದಲ್ಲಿ ರಾಜೀವ್ ಕುಮಾರ್ ಅವರನ್ನು ಬಂಧಿಸಲು ಮುಂದಾಗಿತ್ತು. ಕೊಲ್ಕತ್ತಾ ಪೊಲೀಸರು ಅವರನ್ನು ಬಂಧಿಸದಂತೆ ತಡೆದಿದ್ದರು, ಮಾತ್ರವಲ್ಲ ಸಿಬಿಐ ಅಧಿಕಾರಿಗಳನ್ನೇ ಬಂಧಿಸಿ ದೊಡ್ಡ ನಾಟಕೀಯ ಬೆಳವಣಿಗೆಗೆ ಕಾರಣರಾಗಿದ್ದರು.
ರಾಜೀವ್ ಬಂಧನಕ್ಕೆ ತಡೆಯೊಡ್ಡಿ ಕಲ್ಕತ್ತಾ ಹೈಕೋರ್ಟ್ ಆದೇಶ ನೀಡಿತ್ತು. 2019 ಈ ಆದೇಶದ ವಿರುದ್ಧ ಸುಪ್ರೀಂಕೋರ್ಟಿಗೆ ಮನವಿ ಸಲ್ಲಿಸಿರುವ ಬಿಜೆಪಿ ಮತ್ತೊಮ್ಮೆ ವಿಚಾರಣೆಗಾಗಿ ಅರ್ಜಿ ಹಾಕಿದೆ.