ಕಲ್ಲಿದ್ದಲು ಹಗರಣ: ಟಿಎಂಸಿ ಸಂಸದನ ಮನೆಗೆ ಬೇಟಿ ನೀಡಿದ ಸಿಬಿಐ
ಕೋಲ್ಕತಾ,ಫೆಬ್ರವರಿ 23: ಪಶ್ಚಿಮ ಬಂಗಾಳ ಸಂಸದ ಅಭಿಷೇಕ್ ಬ್ಯಾನರ್ಜಿ ಮನೆಗೆ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ, ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ನಿವಾಸಕ್ಕೆ ಭೇಟಿ ನೀಡಿ ಪತ್ನಿಯ ವಿಚಾರಣೆ ನಡೆಸಿದ್ದಾರೆ.
ಸ್ವಂತ ಮಗಳನ್ನು ಬಂಗಾಳ ಬಯಸುತ್ತದೆ; ತೃಣಮೂಲ ಕಾಂಗ್ರೆಸ್ ಹೊಸ ಘೋಷಣೆ
ಪಶ್ಚಿಮ ಬಂಗಾಳದ ಕುನುಸ್ಟೋರಿಯಾ, ಖಜೋರಿಯಾದಲ್ಲಿ ಅಕ್ರಮ ಗಣಿಗಾರಿಕೆ ನಡೆದಿವೆ ಎಂದು ಅಧಿಕಾರಿಗಳು ಈಗಾಗಲೇ ದೃಢಪಡಿಸಿದ್ದು, ಈ ಪ್ರಕರಣದಲ್ಲಿ ತೃಣ ಮೂಲ ಕಾಂಗ್ರೆಸ್ ನಾಯಕರಿಗೆ ಕಲ್ಲಿದ್ದಲು ಮಾಫಿಯಾದಿಂದ ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪ ಹಿನ್ನಲೆಯಲ್ಲಿ ಕಳೆದ ನವೆಂಬರ್ನಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು.
ಕಲ್ಲಿದ್ದಲು ಹಗರಣ ಪ್ರಕರಣದ ಭಾಗವಾಗಿ ಅಭಿಷೇಕ್ ಪತ್ನಿ ರುಜೀರಾ ಬ್ಯಾನರ್ಜಿಯನ್ನು ಸಿಬಿಐ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ. ರುಜೀರಾ ಅವರ ಹಣಕಾಸು ವಹಿವಾಟುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಕಲ್ಲಿದ್ದಲು ಕಳವು ಪ್ರಕರಣದಲ್ಲಿ ಅಭಿಷೇಕ್ ಬ್ಯಾನರ್ಜಿ ನಾದಿನಿ ಮೇನಕಾ ಗಂಭೀರ್ ಅವರನ್ನು ಸಿಬಿಐ ಅಧಿಕಾರಿಗಳು ಸೋಮವಾರ ವಿಚಾರಣೆ ನಡೆಸಿದ್ದರು. ಈ ಸಂಬಂಧ ಅಭಿಷೇಕ್ ಬ್ಯಾನರ್ಜಿ ಪತ್ನಿಗೂ ಸಮನ್ಸ್ ಜಾರಿಗೊಳಿಸಿದ್ದರು.
ಈ ಕುರಿತು ರುಜೀರಾ ಬ್ಯಾನರ್ಜಿ ಸೋಮವಾರ ಪ್ರತಿಕ್ರಿಯಿಸಿ, ತಮ್ಮನ್ನು ವಿಚಾರಣೆ ನಡೆಸಲು ನಿವಾಸಕ್ಕೆ ಬರುವುದಾಗಿ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಅಧಿಕಾರಿಗಳು ತಮ್ಮನ್ನು ಏಕೆ ಪ್ರಶ್ನಿಸಲು ಬಯಸಿದ್ದಾರೆಂದು ಗೊತ್ತಿಲ್ಲ ಎಂದು ಅವರು ಹೇಳಿದ್ದರು.
ಸಿಬಿಐ ಅಧಿಕಾರಿಗಳು ಇಂದು ಸೋದರಳಿಯನ ಮನೆಗೆ ಆಗಮಿಸುವ ಮೊದಲೇ ಮಮತಾ ಬ್ಯಾನರ್ಜಿ ಅವರು ಅಭಿಷೇಕ್ ನಿವಾಸಕ್ಕೆ ಭೇಟಿ ನೀಡಿದ್ದರು ಎಂಬುದು ಗಮನಾರ್ಹ.