Breaking: ಸಿಬಿಐನಿಂದ ಟಿಎಂಸಿ ನಾಯಕ ಅನುಬ್ರತಾ ಮೊಂಡಲ್ ಬಂಧನ
ಕೋಲ್ಕತ್ತಾ, ಆಗಸ್ಟ್ 11: ಜಾನುವಾರು ಕಳ್ಳಸಾಗಣೆ ಪ್ರಕರಣದ ತನಿಖೆಗೆ ಸಹಕರಿಸದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ನ ಹಿರಿಯ ನಾಯಕ ಅನುಬ್ರತಾ ಮೊಂಡಲ್ ಅವರನ್ನು ಸಿಬಿಐ ಗುರುವಾರ ಭೋಲ್ಪುರದ ಅವರ ನಿವಾಸದಿಂದ ಬಂಧಿಸಿ ಕರೆದೊಯ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಾಯಕ ಹಾಗೂ ಟಿಎಂಸಿಯ ಬಿರ್ಭೂಮ್ ಜಿಲ್ಲಾಧ್ಯಕ್ಷ ಅನುಬ್ರತಾ ಮೊಂಡಲ್ ಅವರನ್ನು 2020 ರ ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಸಿಬಿಐ ಬಂಧಿಸಿದೆ.
ಗುರುವಾರ ಮುಂಜಾನೆ ಅನುಬ್ರತಾ ಮೊಂಡಲ್ ಮನೆಗೆ ಆಗಮಿಸಿದ ಸಿಬಿಐ ತಂಡವು ಸುಮಾರು ಒಂದೂವರೆ ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ. ನಂತರ ಮೊಂಡಾಲ್ ಅವರನ್ನು ಬಂಧಿಸಿದೆ. ಟಿಎಂಸಿ ನಾಯಕ ಮೊಂಡಲ್ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
"ಜಾನುವಾರು ಕಳ್ಳಸಾಗಣೆ ಹಗರಣದ ತನಿಖೆಗೆ ಸಹಕರಿಸದ ಕಾರಣ ನಾವು ಅವರನ್ನು ಬಂಧಿಸಿದ್ದೇವೆ" ಎಂದು ಸಿಬಿಐ ಅಧಿಕಾರಿ ತಿಳಿಸಿದ್ದಾರೆ. ಅವರನ್ನು ಅಸನ್ಸೋಲ್ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.
ಅನಾರೋಗ್ಯದ ಕಾರಣಕ್ಕಾಗಿ ಟಿಎಂಸಿ ನಾಯಕ ಕಳೆದ ಕೆಲವು ದಿನಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಯ ಮುಂದೆ ಹಾಜರಾಗುವುದನ್ನು ಎರಡು ಬಾರಿ ತಪ್ಪಿಸಿದ್ದರು.
ಪಶ್ಚಿಮ ಬಂಗಾಳದ ಶಿಕ್ಷಕರ ಉದ್ಯೋಗ ನೇಮಕಾತಿ ಹಗರಣದಲ್ಲಿ ಟಿಎಂಸಿ ನಾಯಕ ಪಾರ್ಥ ಚಟರ್ಜಿ ಅವರನ್ನು ಬಂಧಿಸಿದ ಕೆಲವು ದಿನಗಳ ನಂತರ ಅನುಬ್ರತಾ ಮೊಂಡಾಲ್ ಅವರ ಬಂಧನವಾಗಿದೆ.
ಕೇಂದ್ರ ತನಿಖಾ ಸಂಸ್ಥೆ ಅನುಬ್ರತಾ ಮೊಂಡಲ್ ಅವರನ್ನು ವಿಚಾರಣೆ ನಡೆಸಲು ಈ ಮೊದಲು 10 ಬಾರಿ ಸಮನ್ಸ್ ನೀಡಿತ್ತು. ಆದರೆ ಆರೋಗ್ಯ ಸಮಸ್ಯೆಗಳ ಕಾರಣ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
Recommended Video
ಜಾನುವಾರು ಕಳ್ಳಸಾಗಣೆ ಪ್ರಕರಣದ ತನಿಖೆಯ ಭಾಗವಾಗಿ ಕೇಂದ್ರೀಯ ಸಂಸ್ಥೆ ಈ ಹಿಂದೆ ಎರಡು ಬಾರಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಕೋಲ್ಕತ್ತಾದ ಎಸ್ಎಸ್ಕೆಎಂ ಆಸ್ಪತ್ರೆಯು ಅನುಬ್ರತಾ ಮೊಂಡಲ್ ಅವರು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ಹೇಳಿದ ನಂತರ ಬಂಧಿಸಲಾಗಿದೆ.