ಬಿಎಸ್ಎಫ್ನಿಂದ ನಮ್ಮನ್ನು ನಿಯಂತ್ರಿಸಲು ಸಾಧ್ಯವಿಲ್ಲ: ಮೋದಿ ವಿರುದ್ಧ ಮಮತಾ ಕಿಡಿ
ಕೊಲ್ಕತ್ತಾ, ನವೆಂಬರ್ 22: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಅವರ ಮುಂದೆ ಭಾರತದ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲು ತೀವ್ರ ಆಕ್ಷೇಪಣೆಯನ್ನು ಎತ್ತುವುದಾಗಿ ಹೇಳಿದ್ದಾರೆ.
ಇಂದು ಮಧ್ಯಾಹ್ನ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ಹೊರಡುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಮ್ಮನ್ನು ನಿಯಂತ್ರಿಸಲು ನಾನು ಅವರಿಗೆ (ಕೇಂದ್ರ) ಎಂದಿಗೂ ಅವಕಾಶ ನೀಡುವುದಿಲ್ಲ. ಇದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ವಿಷಯವಾಗಿದೆ. ಬಿಎಸ್ಎಫ್ ಬಗ್ಗೆ ನಮಗೆ ಗೌರವವಿದೆ. ಆದರೆ ನಮ್ಮ ಪ್ರದೇಶಗಳನ್ನು ನಿಯಂತ್ರಿಸಲು ನಾವು ಬಿಡುವುದಿಲ್ಲ. ಬಿಜೆಪಿ (ಭಾರತೀಯ ಜನತಾ ಪಕ್ಷ) ತನ್ನ ಅಧಿಕಾರವನ್ನು ಸ್ಥಾಪಿಸಲು ಕೇಂದ್ರ ಏಜೆನ್ಸಿಗಳನ್ನು ಬಳಸುತ್ತಿದೆ ಎಂದು ಬ್ಯಾನರ್ಜಿ ಆರೋಪ ಮಾಡಿದ್ದಾರೆ. ಈ ಬಗ್ಗೆ ತಾವು ಪ್ರಧಾನಿ ಮೋದಿ ಅವರ ಮುಂದೆ ಪ್ರಸ್ತಾಪ ಮಾಡುವುದಾಗಿ ಹೇಳಿದ ನಾಲ್ಕು ದಿನಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ ತಂಗಲಿದ್ದಾರೆ.
"ಪ್ರಧಾನಿ ಅವರೊಂದಿಗಿನ ಸಭೆಯಲ್ಲಿ, ನಾನು ಬಂಗಾಳದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸುತ್ತೇನೆ" ಎಂದು ಹೇಳಿದ ಮಮತಾ ಬ್ಯಾನರ್ಜಿ ತ್ರಿಪುರಾದಲ್ಲಿ ತನ್ನ ಪಕ್ಷದ ಕಾರ್ಯಕರ್ತರ ಮೇಲೆ ನಡೆದ ದಾಳಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು.
ಬಿಜೆಪಿ ಆಡಳಿತವಿರುವ ತ್ರಿಪುರಾದಲ್ಲಿ ಪ್ರಜಾಪ್ರಭುತ್ವ ಇಲ್ಲ. ಇದು ಚುನಾವಣೆ ಹೆಸರಿನಲ್ಲಿ ನಡೆಯುವ ಕುತಂತ್ರ. ತ್ರಿಪುರ ಹೊತ್ತಿ ಉರಿಯುತ್ತಿದೆ. ನಮ್ಮ ಜನಪ್ರಿಯ ನಾಯಕಿ ಸಯೋನಿ ಘೋಷ್ ಅವರನ್ನು ಕೊಲೆ ಯತ್ನದ ಸುಳ್ಳು ಆರೋಪದ ಮೇಲೆ ನಿನ್ನೆ ಬಂಧಿಸಲಾಯಿತು. ಪೊಲೀಸ್ ಠಾಣೆಯೊಳಗೆ ನಮ್ಮ ಬೆಂಬಲಿಗರ ಮೇಲೆ ಎರಡು ಬಾರಿ ಹಲ್ಲೆ ನಡೆಸಲಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈಗ ಎಲ್ಲಿದೆ? ಎಂದು ಬ್ಯಾನರ್ಜಿ ಗುಡುಗಿದರು. "ದೆಹಲಿ ತಲುಪಿದ ನಂತರ, ಅಮಿತ್ ಶಾ ಕಚೇರಿಯ ಹೊರಗೆ ಧರಣಿ ನಡೆಸುತ್ತಿರುವ ನನ್ನ ಸಂಸತ್ ಸದಸ್ಯರನ್ನು ಭೇಟಿ ಮಾಡುತ್ತೇನೆ. ಕೇಂದ್ರ ಗೃಹ ಸಚಿವರು ಅವರನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ. ನಾನು ಆಂದೋಲನದಲ್ಲಿ ಭಾಗವಹಿಸುವುದಿಲ್ಲ. ಆದರೆ ನಮ್ಮ ಸಂಸದರಿಗೆ ಒಗ್ಗಟ್ಟನ್ನು ಮಾತ್ರ ವ್ಯಕ್ತಪಡಿಸುತ್ತೇನೆ. ಅವರು ಶಾ ಅವರ ಮನೆಯ ಹೊರಗೆ ಆಂದೋಲನ ನಡೆಸಲು ಬಯಸಿದ್ದರು ಆದರೆ ಭದ್ರತಾ ಸಮಸ್ಯೆಗಳ ದೃಷ್ಟಿಯಿಂದ ನಾನು ಅವರನ್ನು ನಿಲ್ಲಿಸಿದೆ. ಗೃಹ ಸಚಿವರ ಕುರ್ಚಿಯಲ್ಲಿ ಕುಳಿತಿರುವ ಅಮಿತ್ ಶಾ ಅವರೊಂದಿಗೆ ಮಾತನಾಡುವ ಹಕ್ಕು ನಮಗಿದೆ" ಎಂದು ಬ್ಯಾನರ್ಜಿ ಹೇಳಿದ್ದಾರೆ.
"ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಂಗಾಳದಲ್ಲಿ ಯಾವುದೇ ಬಿಜೆಪಿ ನಾಯಕರನ್ನು ಪ್ರಚಾರ ಮಾಡುವುದನ್ನು ನಾವು ತಡೆಯಲಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಲಾಯಿತು. ತ್ರಿಪುರಾದಲ್ಲಿ ಏನಾಗುತ್ತಿದೆ ಎಂಬುದಕ್ಕೆ ಜನರು ತಕ್ಕ ಉತ್ತರ ನೀಡುತ್ತಾರೆ. ಅವರು (ಬಿಜೆಪಿ) ಸುಪ್ರೀಂ ಕೋರ್ಟ್ನ ಆದೇಶಗಳನ್ನು ಸಹ ಅನುಸರಿಸದಿರುವುದು ದುರದೃಷ್ಟಕರ. ಬಿಜೆಪಿಗೆ ಸೋಲಿನ ಭಯವಾಗಿದೆ. ನಮ್ಮ ಕಾರ್ಯಕರ್ತರ ಮೇಲಿನ ಹಿಂಸಾಚಾರದ ವಿಷಯ ತ್ರಿಪುರ ಮಾತ್ರವಲ್ಲ ಇದನ್ನು ಮುಂಬೈ, ದೆಹಲಿ ಮತ್ತು ಭಾರತದಾದ್ಯಂತ ಜನ ನೋಡುತ್ತಿದ್ದಾರೆಂದು" ಮುಖ್ಯಮಂತ್ರಿ ಹೇಳಿದರು.
ಟಿಎಂಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇತ್ತೀಚೆಗೆ ತ್ರಿಪುರಾ ಸರ್ಕಾರಕ್ಕೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಆದರೆ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಟಿಎಂಸಿ ಸೋಮವಾರ ಮತ್ತೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಕಳೆದ ತಿಂಗಳಷ್ಟೇ ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಅಂತರಾಷ್ಟ್ರೀಯ ಗಡಿಯಲ್ಲಿ ಬಿಎಸ್ಎಫ್ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಬಿಎಸ್ಎಫ್ ಕಾಯ್ದೆಗೆ ತಿದ್ದುಪಡಿಯ ಪ್ರಕಾರ, ಗಡಿಯಿಂದ 15 ಕಿಲೋಮೀಟರ್ ವ್ಯಾಪ್ತಿ ಬದಲಿಗೆ ಸುಮಾರು 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಿಎಸ್ಎಫ್ ಯೋಧರು, ಶೋಧ, ವಶಪಡಿಸಿಕೊಳ್ಳುವಿಕೆ ಮತ್ತು ಬಂಧನ ಮಾಡುವ ಅಧಿಕಾರವನ್ನು ಗಡಿ ಭದ್ರತಾ ಪಡೆಗೆ ನೀಡಲಾಗಿತ್ತು.
"ಕೇಂದ್ರ ಸರ್ಕಾರವು ಗಡಿ ಭದ್ರತಾ ಪಡೆ (ಬಿಎಸ್ಎಫ್) ವ್ಯಾಪ್ತಿಯನ್ನು 15 ಕಿ.ಮೀ ನಿಂದ 50 ಕಿ.ಮೀ ವರೆಗೆ ವಿಸ್ತರಿಸುವ ನಿರ್ಧಾರವು ರಾಜ್ಯ ಪೊಲೀಸರು ಮತ್ತು ಪಂಜಾಬ್ನ ಜನರ ಮೇಲಿನ ಅಪನಂಬಿಕೆ ಸಂಕೇತವಾಗಿದೆ. ಇದರಿಂದ ರಾಜ್ಯದ ಪೊಲೀಸರಿಗೆ ಮತ್ತು ಜನರಿಗೆ ಅವಮಾನ ಮಾಡಿದಂತೆ ಆಗುತ್ತದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. ಇಂತಹ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಕೇಂದ್ರ ಸರ್ಕಾರವು ರಾಜ್ಯದೊಂದಿಗೆ ಸಮಾಲೋಚನೆ ನಡೆಸಬೇಕಿತ್ತು. ಪಂಜಾಬ್ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ನಿಯಂತ್ರಣದಲ್ಲಿದೆ. ಬಿಎಸ್ಎಫ್ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಅಗತ್ಯವಿಲ್ಲ" ಎಂದು ಪಂಜಾಬ್ ವಿಧಾನಸಭೆ ಕಲಾಪದಲ್ಲಿ ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ ಬಿಎಸ್ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆಗೆ ವಿರುದ್ಧದ ನಿರ್ಣಯ ಮಂಡಿಸಿದ್ದರು.
Recommended Video
ಪಂಜಾಬ್ನ ಎಲ್ಲಾ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರದ ನಿರ್ಧಾರವನ್ನು ಸರ್ವಾನುಮತದಿಂದ ಖಂಡಿಸಿವೆ. ಕಳೆದ ಅಕ್ಟೋಬರ್ 11ರಂದು ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಹೊರಡಿಸಿದ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಲಾಗಿದೆ. "ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆ ತಿರಸ್ಕರಿಸುವ ನಿರ್ಣಯವನ್ನು ಅಂಗೀಕರಿಸಬಹುದು ಎಂದು ಪಂಜಾಬ್ ವಿಧಾನ ಸಭೆಯು ಸರ್ವಾನುಮತದಿಂದ ನಿರ್ಧರಿಸುತ್ತದೆ" ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.