ಕೋಲ್ಕತ್ತಾ ಹೈಕೋರ್ಟ್ನಿಂದ ಬಿಜೆಪಿಯ ಸುವೇಂದು ಅಧಿಕಾರಿಗೆ ನೋಟಿಸ್
ಕೋಲ್ಕತ್ತಾ, ಜುಲೈ 14: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಿಂದ ಜಯ ಗಳಿಸಿದ್ದ ಬಿಜೆಪಿಯ ಸುವೇಂದ್ರ ಅಧಿಕಾರಿ ಆಯ್ಕೆ ಪ್ರಶ್ನಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಸುವೇಂದು ಅಧಿಕಾರಿಗೆ ಬುಧವಾರ ರಾಜ್ಯ ಹೈಕೋರ್ಟ್ ನೋಟಿಸ್ ನೀಡಿದೆ.
ಈ ಅರ್ಜಿಗೆ ಸಂಬಂಧಿಸಿದಂತೆ ಚುನಾವಣೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ಚುನಾವಣಾ ಪತ್ರಗಳು, ಸಾಧನಗಳು, ವಿಡಿಯೋ ರೆಕಾರ್ಡಿಂಗ್ ಎಲ್ಲಾ ದಾಖಲೆಗಳನ್ನು ಸಂಬಂಧಿಸಿದ ಸಂಸ್ಥೆ ಸಂಗ್ರಹಿಸಿಡಬೇಕು ಎಂದು ನ್ಯಾಯಮೂರ್ತಿ ಶಂಪಾ ಸರ್ಕಾರ್ ನೇತೃತ್ವದ ಏಕಸದಸ್ಯ ಪೀಠ ನಿರ್ದೇಶನ ನೀಡಿದೆ.
ಚುನಾವಣಾ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಧೀಶ: ದೀದಿಗೆ 5 ಲಕ್ಷ ದಂಡ
ಮೇ 21ರ ರಿಜಿಸ್ಟ್ರಾರ್ ವರದಿ ಪರಿಶೀಲಿಸಿದ ಪೀಠ, ಅರ್ಜಿಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಚುನಾವಣಾ ಮನವಿ ನಿಯಮಗಳ ಅಡಿ ನಿಯಮ 24ರ ಅಡಿ ನೋಟಿಸ್ ಜಾರಿ ಮಾಡಲಾಗಿದೆ. ಆಗಸ್ಟ್ 12ರ ಒಳಗೆ ಪ್ರತಿಕ್ರಿಯೆ ನೀಡಬೇಕು" ಎಂದು ನ್ಯಾಯಾಲಯ ಆದೇಶಿಸಿದೆ.
ನಂದಿಗ್ರಾಮದಲ್ಲಿ ಸುವೇಂದು ಗೆಲುವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೋಲ್ಕತ್ತಾ ಹೈಕೋರ್ಟ್ನಲ್ಲಿ ಜೂನ್ ತಿಂಗಳಿನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಚುನಾವಣಾ ಸಮಯದಲ್ಲಿ ಇವಿಎಂಗಳ ದುರ್ಬಳಕೆ ಮಾಡಲಾಗಿದೆ. ಸುವೇಂದು ಅಧಿಕಾರಿ ಅಕ್ರಮ ಮಾರ್ಗಗಳನ್ನು ಅನುಸರಿಸಿದ್ದಾರೆ. ಹಣದ ಆಸೆ ತೋರಿಸಿ, ಶತ್ರುತ್ವವನ್ನು ಪ್ರಚೋದಿಸಿದ್ದಾರೆ. ಧರ್ಮದ ಹೆಸರು ಹೇಳಿಕೊಂಡು ಮತ ಪಡೆಯುವ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ಅರ್ಜಿಯಲ್ಲಿ ದೂರಿದ್ದರು.