ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಕೋವಿಡ್ ಪರಿಸ್ಥಿತಿ ಮೇಲೆ ಅವಲಂಬಿತ: ಅಮಿತ್ ಶಾ
ಕೋಲ್ಕತಾ, ನವೆಂಬರ್ 6: ಕೊರೊನಾ ವೈರಸ್ ಸೋಂಕಿನ ಪಿಡುಗು ಸಂಪೂರ್ಣ ನಿಯಂತ್ರಣಕ್ಕೆ ಬಂದು ಅಂತ್ಯಗೊಳ್ಳುತ್ತಿದ್ದಂತೆಯೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ದೇಶದಾದ್ಯಂತ ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳದ ಭೇಟಿ ವೇಳೆ ಹೇಳಿದ್ದಾರೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳಕ್ಕೆ ಎರಡು ದಿನಗಳ ಭೇಟಿ ನೀಡಿದ್ದ ಅಮಿತ್ ಶಾ, ಚುನಾವಣೆಗೆ ಅಗತ್ಯ ಕಾರ್ಯತಂತ್ರಗಳನ್ನು ರೂಪಿಸಲು ಮತ್ತು ಮಮತಾ ಬ್ಯಾನರ್ಜಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಲು ನಡೆಸಬೇಕಾದ ಯೋಜನೆಗಳ ಬಗ್ಗೆ ಪಕ್ಷದ ರಾಜ್ಯ ಮುಖಂಡರ ಜತೆ ಚರ್ಚಿಸಿದರು.
ಪಶ್ಚಿಮ ಬಂಗಾಳ ಗೆಲ್ಲಲು ಬೃಹತ್ ಗುರಿ ಕೊಟ್ಟ ಅಮಿತ್ ಶಾ
'ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ ಮತ್ತು ನಿರಾಶ್ರಿತರಿಗೆ ಭಾರತದ ಪೌರತ್ವ ಸಿಗಲಿದೆ. ಅದು ಕೊರೊನಾ ವೈರಸ್ ಪಿಡುಗನ್ನು ಅವಲಂಬಿಸಿದೆ. ಆದರೆ ಅದು ಜಾರಿಯಾಗುವುದು ನಿಶ್ಚಿತ' ಎಂದು ಅವರು ಶುಕ್ರವಾರ ಬಂಗಾಳದಿಂದ ಹೊರಡುವ ಮುನ್ನ ತಿಳಿಸಿದರು.
'ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ಜನರಲ್ಲಿ ವ್ಯಾಪಕ ಸಾರ್ವಜನಿಕ ಆಕ್ರೋಶವನ್ನು ನಾನು ಗ್ರಹಿಸಿದ್ದೇನೆ. ನಾನು ಕಳೆದ ರಾತ್ರಿಯಿಂದ ಪಶ್ಚಿಮ ಬಂಗಾಳದಲ್ಲಿದ್ದೇನೆ. ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಸಾರ್ವಜನಿಕರಲ್ಲಿ ತೀವ್ರ ಕೋಪವಿರುವುದು ನನಗೆ ಅರಿವಾಗುತ್ತಿದೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಾತ್ರವೇ ರಾಜ್ಯದಲ್ಲಿ ಬದಲಾವಣೆಯಾಗುತ್ತದೆ ಎಂಬ ಭರವಸೆ ಜನರಲ್ಲಿ ಮೂಡಿರುವುದೂ ಗೊತ್ತಾಗುತ್ತಿದೆ' ಎಂದರು.