ಸಿಎಎ ವಿರುದ್ಧ ಭಾರತ್ ಬಂದ್: ಒಂದೇ ದಿನ ಬಲಿಯಾಗಿದ್ದೆಷ್ಟು ಜನ?
ಕೋಲ್ಕತ್ತಾ, ಜನವರಿ.29: ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ನಡೆಯುತ್ತಿದ್ದ ಭಾರತ್ ಬಂದ್ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಕಚ್ಚಾಬಾಂಬ್ ದಾಳಿಯಲ್ಲಿ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುರ್ಶಿದ್ ಬಾದ್ ಜಿಲ್ಲೆಯಲ್ಲಿ ನಡೆದಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಿಎಎ ಮತ್ತು ಎನ್ ಆರ್ ಸಿ ವಿರುದ್ಧ ಜಲಂಗಿ ಪ್ರದೇಶದ ಸಾಹೇಬ್ ನಗರದಲ್ಲಿ ಸಿಎಎ ವಿರೋಧಿ ಗಣತಂತ್ರಿಕ ಮಂಚ್ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ರಸ್ತೆ ತಡೆ ನಡೆಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಒತ್ತಾಯಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಂಬೈನಲ್ಲಿ ಬೆಳ್ಳಂಬೆಳಗ್ಗೆ ರೈಲಿಗೆ ಅಡ್ಡ ನಿಂತರು ಜನ, ಯಾಕೆ ಗೊತ್ತಾ?
ಇದೇ ಸಂದರ್ಭದಲ್ಲಿ ಟಿಎಂಸಿ ಬ್ಲಾಕ್ ಅಧ್ಯಕ್ಷ ತಾಹಿರುದ್ದೀನ್ ಮೊಂಡೇಲ್ ಹಾಗೂ ಪಕ್ಷದ ಕಾರ್ಯಕರ್ತರು ಇದೇ ಪ್ರದೇಶಕ್ಕೆ ಬಂದಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಉದ್ರಿಕ್ತರ ಗುಂಪು ಕಚ್ಚಾ ಬಾಂಬ್ ದಾಳಿ ನಡೆಸಿದ್ದಾರೆ. ಕೆಲವರು ಗುಂಡಿನ ದಾಳಿ ನಡೆಸಿದ್ದು, ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಭಾರತ್ ಬಂದ್ ಗೆ ಇಬ್ಬರು ಬಲಿ:
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ವೇಳೆ ಮುರ್ಶಿದ್ ಬಾದ್ ಜಿಲ್ಲೆ ಜಾಲಂಗಿಯ ಸಾಹೇಬ್ ನಗರದಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಮೃತರನ್ನು ಅನರುಲ್ ಬಿಸ್ವಾಸ್ ಹಾಗೂ ಸಲಾಲುದ್ದೀನ್ ಶೇಕ್ ಎಂದು ಗುರುತಿಸಲಾಗಿದೆ. ಇನ್ನು, ಸ್ಥಳಕ್ಕೆ ಎಸ್ ಡಿಪಿಓ ಸಂದೀಪ್ ಸೇನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟಿದ್ದು, ಕೆಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದೀಗ ಪರಿಸ್ಥಿತಿ ಹೈತೋಟಿಗೆ ಬಂದಿದೆ ಎಂದು ಸಂದೀಪ್ ಸೇನ್ ತಿಳಿಸಿದ್ದಾರೆ.