ಬಾಂಗ್ಲಾದೇಶ್ ಗಡಿ ಭದ್ರತಾ ಪಡೆಯಿಂದ ಬಿಎಸ್ ಎಫ್ ಯೋಧನ ಹತ್ಯೆ
ಕೋಲ್ಕತ್ತಾ (ಪಶ್ಚಿಮ ಬಂಗಾಲ), ಅಕ್ಟೋಬರ್ 17: ತನ್ನ ಹಿರಿಯ ಆಧಿಕಾರಿಗಳ ಜತೆಗೆ 'ಫ್ಲ್ಯಾಗ್ ಮೀಟಿಂಗ್'ಗೆ ತೆರಳಿದ್ದ ಗಡಿ ಭದ್ರತಾ ಪಡೆಯ (ಬಿಎಸ್ ಎಫ್) ಯೋಧನನ್ನು ಬಾಂಗ್ಲಾದೇಶ್ ನ ಗಡಿ ಭದ್ರತಾ ಪಡೆಯ ಸಿಬ್ಬಂದಿ ಗುರುವಾರ ಗುಂಡಿಟ್ಟು ಕೊಂದಿದ್ದಾರೆ ಎಂದು ಬಿಎಸ್ ಎಫ್ ವಕ್ತಾರ ಹೇಳಿದ್ದಾರೆ.
ಭಾರತ- ಬಾಂಗ್ಲಾದೇಶ್ ಗಡಿಯಲ್ಲಿ ಫ್ಲ್ಯಾಗ್ ಸಭೆ ಮುಗಿದ ಮೇಲೆ, ಬೆಳಗ್ಗೆ ಹತ್ತು ಮೂವತ್ತರ ಹೊತ್ತಿಗೆ ಘಟನೆ ಸಂಭವಿಸಿದೆ. ಭಾರತ- ಬಾಂಗ್ಲಾ ಗಡಿಯಲ್ಲಿ ಇರುವ ಪದ್ಮಾ ನದಿಗೆ ಮೀನು ಹಿಡಿಯಲು ಹೋಗಿದ್ದ ಭಾರತದ ಮೂವರು ಹಳ್ಳಿಗರನ್ನು ಬಾಂಗ್ಲಾ ಪಡೆ ಬಂಧಿಸಿತ್ತು. ಆ ನಂತರ ಇಬ್ಬರನ್ನು ಬಿಡುಗಡೆ ಮಾಡಿ, ಬಿಎಸ್ ಎಫ್ ನ ಕಮ್ಯಾಂಡರ್ ಅನ್ನು ಫ್ಲ್ಯಾಗ್ ಮೀಟಿಂಗ್ ಗೆ ಕರೆತರುವಂತೆ ತಿಳಿಸಿತ್ತು ಬಾಂಗ್ಲಾ ಪಡೆ.
ಬೆಳಗ್ಗೆ ಹತ್ತು ಮೂವತ್ತರ ಹೊತ್ತಿಗೆ ಸಭೆ ನಡೆದಿತ್ತು. ಬಿಎಸ್ ಎಫ್ ನ ಪೋಸ್ಟ್ ಕಮ್ಯಾಂಡರ್ ಮತ್ತು ಇತರ ಐವರು ಯೋಧರು ಬಾಂಗ್ಲಾದ ಕಾವಲು ಪಡೆಯನ್ನು ನೀರಿನ ಕಾಲುವೆಯಲ್ಲಿ ಸಂಪರ್ಕಿಸಿದೆ. ಆ ವೇಳೆ ಬಂಧಿಸಿದ್ದ ಮತ್ತೊಬ್ಬ ಭಾರತೀಯ ಮೀನುಗಾರನನ್ನು ಬಿಡುಗಡೆ ಮಾಡದೆ ಬಿಎಸ್ ಎಫ್ ಪಡೆಗೆ ಬಾಂಗ್ಲಾ ಘೇರಾವ್ ಮಾಡಿದೆ.
ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತು ಬಿಎಸ್ ಎಫ್ ಯೋಧರು ತಕ್ಷಣ ಹಿಂತಿರುಗಿದ್ದಾರೆ. ಆಗ ಬಾಂಗ್ಲಾ ಪಡೆಯಿಂದ ಗುಂಡು ಹಾರಿಸಲಾಗಿದೆ. ಹೆಡ್ ಕಾನ್ಸ್ ಟೇಬಲ್ ವಿಜಯ್ ಭಾನ್ ಸಿಂಗ್ ಅವರ ತಲೆಗೆ ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದೇ ದೋಣಿಯಲ್ಲಿ ಇದ್ದ ಮತ್ತೊಬ್ಬ ಸಿಬ್ಬಂದಿಗೆ ಬಲಗೈಗೆ ಗಾಯವಾಗಿದೆ.