Breaking: ಬಿಜೆಪಿ ಮಾಜಿ ನಾಯಕ ಬಾಬುಲ್ ಸುಪ್ರೀಯೋ ಟಿಎಂಸಿ ಸೇರ್ಪಡೆ
ಕೋಲ್ಕತ್ತಾ, ಸೆಪ್ಟೆಂಬರ್ 18: ರಾಜಕೀಯ ತ್ಯಜಿಸುವ ನಿರ್ಧಾರ ಕೈಗೊಂಡಿದ್ದ ಒಂದು ತಿಂಗಳ ನಂತರ ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ, ಸಂಸದ ಬಾಬುಲ್ ಸುಪ್ರಿಯೋ ಈಗ ತೃಣಮೂಲ ಕಾಂಗ್ರೆಸ್ ಅನ್ನು ಸೇರ್ಪಡೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ರಾಜಕೀಯ ತ್ಯಜಿಸುವ ನಿರ್ಧಾರ ಕೈಗೊಂಡಿದ್ದ ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ, ಸಂಸದ ಬಾಬುಲ್ ಸುಪ್ರಿಯೋ ಕಳೆದ ತಿಂಗಳು ಆಗಸ್ಟ್ 1 ರಂದು ರಾಜಕೀಯ ನಿರ್ಗಮನ ಘೋಷಣೆ ಮಾಡಿದ್ದರು. ಹಾಗೆಯೇ ತನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು.
ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋರ ಈ ನಿರ್ಧಾರವು ಭಾಗಶಃ ಕೇಂದ್ರ ಸಚಿವ ಸ್ಥಾನವನ್ನು ಕಳೆದುಕೊಂಡ ಕಾರಣ ಮತ್ತು ರಾಜ್ಯ ಬಿಜೆಪಿ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯಗಳ ಕಾರಣ ಎಂಬ ಸುಳಿವನ್ನು ಸ್ವತಃ ಬಾಬುಲ್ ಸುಪ್ರಿಯೋ ನೀಡಿದ್ದರು. ಈ ಸಂದರ್ಭದಲ್ಲೇ ಬಾಬುಲ್ ಸುಪ್ರಿಯೋ ಟಿಎಂಸಿ ಸೇರಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಆದರೆ ಬಾಬುಲ್ ಸುಪ್ರಿಯೋ ಮಾತ್ರ ನಾನು ಯಾವುದೇ ರಾಜಕೀಯ ಪ್ರವೇಶವನ್ನು ಇನ್ನು ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ಈಗ ಟಿಎಂಸಿ ಸೇರ್ಪಡೆಯಾಗಿದ್ದಾರೆ.
ಇನ್ನು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಭರ್ಜರಿ ಜಯಗಳಿಸಿ ಆಡಳಿತವನ್ನು ಮತ್ತೆ ವಹಿಸಿಕೊಂಡ ನಂತರ ನಾಲ್ವರು ಬಿಜೆಪಿ ಶಾಸಕರುಗಳು ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಈಗ ಬಿಜೆಪಿಯ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರೀಯೋ ಕೂಡಾ ಟಿಎಂಸಿಗೆ ಸೇರ್ಪಡೆಯಾಗಿರುವುದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭಾರೀ ಮುಖಭಂಗವನ್ನು ಉಂಟು ಮಾಡಿದೆ.
2014 ರಿಂದ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿ ಹಲವಾರು ಖಾತೆಗಳನ್ನು ನಿರ್ವಹಿಸಿದ್ದ ಸುಪ್ರಿಯೋರನ್ನು ಕಳೆದ ತಿಂಗಳ ಆರಂಭದಲ್ಲಿ ಪ್ರಮುಖ ಸಂಪುಟ ಪುನರ್ ರಚನೆಯ ಸಂದರ್ಭದಲ್ಲಿ ಹೊರ ಹಾಕಲಾಗಿದೆ. ಈ ವಿಚಾರದಲ್ಲಿಯೇ ಅಸಮಾಧಾನ ಉಂಟಾಗಿದೆ ಎಂದು ಕೂಡಾ ಹೇಳಲಾಗುತ್ತಿದೆ. ಇನ್ನು ಈ ಹಿಂದೆ ತಾನು ಟಿಎಂಸಿ ಸೇರ್ಪಡೆಯಾಗುವ ಬಗ್ಗೆ ಆಗಿದ್ದ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಬಾಬುಲ್ ಸುಪ್ರಿಯೋ, "ನಾನು ರಾಜಕೀಯ ತೊರೆಯುತ್ತಿದ್ದೇನೆ, ಅಲ್ವಿದಾ. ನನ್ನ ಪೋಷಕರು, ಪತ್ನಿ, ಸ್ನೇಹಿತ ಜೊತೆಯಲ್ಲಿ ಮಾತುಕತೆ ನಡೆಸಿದೆ. ಅವರೆಲ್ಲರ ಸಲಹೆಯನ್ನು ಕೇಳಿದ ನಂತರ ನಾನು ನಿರ್ಗಮನದ ಘೋಷಣೆ ಮಾಡುತ್ತಿದ್ದೇನೆ. ಆದರೆ ನಾನು ಯಾವುದೇ ಬೇರೆ ಪಕ್ಷಕ್ಕೆ ಹೋಗುತ್ತಿಲ್ಲ. ಟಿಎಂಸಿ, ಕಾಂಗ್ರೆಸ್, ಸಿಪಿಐಎಂ ಯಾವ ಪಕ್ಷಕ್ಕೂ ಸೇರ್ಪಡೆ ಮಾಡುತ್ತಿಲ್ಲ. ಯಾರೂ ನನ್ನನ್ನು ಕರೆದಿಲ್ಲ ಎಂದು ಈ ಮೂಲಕ ನಾನು ದೃಢಪಡಿಸುತ್ತೇನೆ," ಎಂದು ತಿಳಿಸಿದ್ದರು.
"ನಾನು ಯಾವ ಪಕ್ಷಕ್ಕೂ ಸೇರುತ್ತಿಲ್ಲ. ನಾನು ಒಬ್ಬ ತಂಡದ ಆಟಗಾರ! ಯಾವಾಗಲೂ ಒಂದು ತಂಡವನ್ನು ಬೆಂಬಲಿಸುತ್ತಿದ್ದೇನೆ. ಅದು ಮೌನ್ ಭಗನ್. ಹಾಗೆಯೇ ಒಂದೇ ಪಕ್ಷದಲ್ಲಿ ಇದ್ದೆ. ಅದು ಪಶ್ಚಿಮ ಬಂಗಾಳ ಬಿಜೆಪಿ ಪಕ್ಷ. ಅಷ್ಟೇ. ನಾನೀಗ ತೆರಳುತ್ತಿದ್ದೇನೆ," ಎಂದು ಸುಪ್ರಿಯೋ ತನ್ನ ಫೇಸ್ ಬುಕ್ನಲ್ಲಿ ಹೇಳಿದ್ದರು. ಇನ್ನು ಬಳಿಕ ಬಾಬೂಲ್ ತಾನು ಎಲ್ಲಿಗೂ ಹೋಗುತ್ತಿಲ್ಲ ಎಂಬ ವಾಕ್ಯವನ್ನು ತೆಗೆದುಹಾಕಿದ್ದರು.
(ಒನ್ ಇಂಡಿಯಾ ಸುದ್ದಿ)