ಬಿಜೆಪಿ ತೊರೆದು ಟಿಎಂಸಿ ಸೇರಿದ ಸಾಲು ಸಾಲು ಬಿಜೆಪಿ ನಾಯಕರು
ಕೋಲ್ಕತ್ತಾ, ಜೂನ್ 21: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮತ್ತೊಂದು ಮುಖಭಂಗ ಎಂಬಂತೆ ಮತ್ತೊಬ್ಬ ಬಿಜೆಪಿ ಮುಖಂಡ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅಲಿಪುರದೌರ್ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಗಂಗಾ ಪ್ರಸಾದ್ ಶರ್ಮಾ ಸೋಮವಾರ ಟಿಎಂಸಿ ಸೇರಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಮುಕುಲ್ ರಾಯ್ ಕಳೆದ ವಾರವಷ್ಟೇ ಮತ್ತೆ ಟಿಎಂಸಿ ಸೇರಿದ್ದರು. ರಾಜ್ಯದಲ್ಲಿ ಬಿಜೆಪಿಯ ಅಂತ್ಯದ ಆರಂಭವಿದು ಎಂದು ಹೇಳಿದ್ದರು.
ಮತ್ತೆ ಟಿಎಂಸಿ ಸೇರ್ಪಡೆ ಬೆನ್ನಲ್ಲೇ ಮುಕುಲ್ ರಾಯ್ ಝಡ್ ಶ್ರೇಣಿ ಭದ್ರತೆ ಹಿಂಪಡೆದ ಕೇಂದ್ರ
ಇದೀಗ ಮತ್ತೊಬ್ಬ ಬಿಜೆಪಿ ಮುಖಂಡ ಗಂಗಾ ಪ್ರಸಾದ್ ಶರ್ಮಾ ಟಿಎಂಸಿ ಸೇರಿದ್ದು, ಇತರೆ ಏಳು ಬಿಜೆಪಿ ಸ್ಥಳೀಯ ನಾಯಕರು ಕೂಡ ಮಮತಾ ಬ್ಯಾನರ್ಜಿ ಪಕ್ಷ ಸೇರಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಕುಲ್ ರಾಯ್, "2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಕಾಣಿಸಿಕೊಂಡಿತು. ಉತ್ತರ ಬಂಗಾಳದಲ್ಲಿ ಸೀಟುಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ ಬಿಜೆಪಿ ಕೆಳಗೆ ನೋಡುವ ಸಮಯ ಈಗ ಆರಂಭವಾಗಿದೆ" ಎಂದು ಹೇಳಿದ್ದಾರೆ. "ಮುಂದೆ ಬಿಜೆಪಿಗೆ ಇನ್ನಷ್ಟು ಆಘಾತಗಳು ಕಾದಿವೆ. ಇದು ಒಂದು ಉದಾಹರಣೆಯಷ್ಟೆ" ಎಂದಿದ್ದಾರೆ.
"ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ತಳಮಟ್ಟದಿಂದ ಕೆಲಸ ಮಾಡಿದವರ ಭಾವನೆಗಳನ್ನು ಬಿಜೆಪಿ ನಿರ್ಲಕ್ಷಿಸಿದೆ" ಎಂದು ಟಿಎಂಸಿ ಸೇರ್ಪಡೆಯಾಗಿರುವ ಶರ್ಮಾ ದೂರಿದ್ದಾರೆ. "ನಮ್ಮನ್ನು ನಿರ್ಲಕ್ಷಿಸಿದರೂ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದೇವೆ. ಆದರೆ ಈಗ ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿ ಜನರಿಗಾಗಿ ಕೆಲಸ ಮಾಡಲು ಮುಂದಾಗಿದ್ದೇವೆ" ಎಂದು ತೃಣಮೂಲ ಕಾಂಗ್ರೆಸ್ ಸೇರಿರುವುದರ ಕಾರಣವನ್ನು ಕೊಟ್ಟಿದ್ದಾರೆ.