ಪಶ್ಚಿಮ ಬಂಗಾಳ; ಸಿಎಂ ಕುರಿತು ಬಿಜೆಪಿ ಸಂಸದನ ಹೇಳಿಕೆಗೆ ಸಿಟ್ಟಾದ ನಾಯಕರು
ಕೋಲ್ಕತ್ತಾ, ಜನವರಿ 18: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಬಿಜೆಪಿ ಪ.ಬಂಗಾಳ ಯುವಮೋರ್ಚಾ ಅಧ್ಯಕ್ಷ ಸೌಮಿತ್ರಾ ಖಾನ್ ಹೇಳಿಕೆ ನೀಡಿದ್ದು, ಈ ಹೇಳಿಕೆ ಬಿಜೆಪಿ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಪಕ್ಷದ ಒಳಗೆ ನಡೆಯುವ ಚರ್ಚೆ, ನಿರ್ಧಾರಗಳ ಕುರಿತು ಅನುಮತಿಯಿಲ್ಲದೇ, ಯಾರ ಗಮನಕ್ಕೂ ತರದೇ ಸುಮ್ಮನೆ ಸಾರ್ವಜನಿಕವಾಗಿ ಹೇಳಿಕೆ ನೀಡಬಾರದು ಎಂದು ಬಿಜೆಪಿ ಮುಖಂಡರು ಸೌಮಿತ್ರಾ ಖಾನ್ ಗೆ ಸಂದೇಶ ರವಾನಿಸಿದ್ದಾರೆ.
ಬಂಗಾಳ ಚುನಾವಣೆ: ನಂದಿಗ್ರಾಮದಿಂದ ಸ್ಪರ್ಧಿಸಲು ಸಜ್ಜಾದ ಮಮತಾ
"ದಿಲೀಪ್ ಘೋಷ್ ನಿಜವಾದ ನಾಯಕ. ಅವರು ಮದುವೆಯಾಗಿಲ್ಲ, ಕುಟುಂಬವೂ ಇಲ್ಲ. ಚಿಕ್ಕ ವಯಸ್ಸಿನಿಂದಲೂ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಪಕ್ಷದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ದಿಲೀಪ್ ಘೋಷ್ ಒಂದು ದಿನ ಈ ರಾಜ್ಯವನ್ನು ನಡೆಸುತ್ತಾರೆ. ಅವರೇ ನಮ್ಮ ಮುಂದಿನ ಸಿಎಂ" ಎಂದು ಪಶ್ಚಿಮ ಮಿಡ್ನಾಪುರದಲ್ಲಿ ಕಳೆದ ವಾರ ಹೇಳಿಕೆ ಸೌಮಿತ್ರಾ ಖಾನ್ ಹೇಳಿಕೆ ನೀಡಿದ್ದರು.
ಇದಕ್ಕೆ ಸಿಟ್ಟಾಗಿರುವ ನಾಯಕರು, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಗೆದ್ದರೆ ಯಾರು ಸಿಎಂ ಆಗುತ್ತಾರೆ ಎನ್ನುವ ಕುರಿತು ಇನ್ನೂ ಯೋಚನೆ ಮಾಡಿಲ್ಲ. ಸುಮ್ಮನೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಮುಖಂಡರು ಅಸಮಾಧಾನಗೊಂಡಿದ್ದಾರೆ.