ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ಬೀದಿಗಿಳಿದು ಸಾರ್ವಜನಿಕ ಕ್ಷಮೆಯಾಚಿಸಿದ ಕಾರ್ಯಕರ್ತರು!
ಕೋಲ್ಕತ್ತಾ, ಜೂ.13: ಬಿಜೆಪಿಗೆ ಸೇರ್ಪಡೆಯಾಗಿದ್ದ ಹಲವು ತೃಣಮೂಲ ಕಾಂಗ್ರೆಸ್ನ ನಾಯಕರು ಈಗ ಮತ್ತೆ ಟಿಎಂಸಿ ತೆಕ್ಕೆಗೆ ಸೇರುತ್ತಿರುವ ನಡುವೆಯೇ ಈಗ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಲ್ಲಿ ಕ್ಷಮೆಯಾಚಿಸಲು ಆರಂಭಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷವನ್ನು ಬೆಂಬಲಿಸಿದ್ದಕ್ಕಾಗಿ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರು ಇ-ರಿಕ್ಷಾಗಳ ಮೇಲೆ ಸಾರ್ವಜನಿಕ ಪ್ರಕಟಣೆಯನ್ನು ನೀಡಿ ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ.
ನಾವು ಬಿಜೆಪಿಯನ್ನು "ತಪ್ಪಾಗಿ ಅರ್ಥೈಸಿಕೊಂಡಿದ್ದೆವು" ಎಂದು ಹೇಳಿರುವ ಈ ಕಾರ್ಯಕರ್ತರು, ಬಿರ್ಭಮ್ ಜಿಲ್ಲೆಯ ಲಾಬ್ಪುರ್, ಬೋಲ್ಪುರ್ ಮತ್ತು ಸೈಂಥಿಯಾದಿಂದ ಹೂಗ್ಲಿ ಜಿಲ್ಲೆಯ ಧನಿಯಖಾಲಿಯವರೆಗೆ ಕ್ಷಮೆಯಾಚಿಸುತ್ತಾ ಮೆರವಣಿಗೆ ನಡೆಸಿದ್ದಾರೆ. ಆದರೆ ಟಿಎಂಸಿ "ಬೆದರಿಕೆ" ತಂತ್ರಗಳಿಂದಾಗಿ ನಮ್ಮ ಕಾರ್ಯಕರ್ತರು ಸಾರ್ವಜನಿಕ ಕ್ಷಮೆಯಾಚನೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿಯಿಂದ ಟಿಎಂಸಿಗೆ ವಾಪಸಾದ ಮುಕುಲ್ ರಾಯ್ ಹೇಳಿದ್ದೇನು?
ಏತನ್ಮಧ್ಯೆ, ಬಿಜೆಪಿಯ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಟಿಎಂಸಿಗೆ ಮರಳಿದ ಒಂದು ದಿನದ ನಂತರ, ಮಾಜಿ ರಾಜ್ಯ ಸಚಿವ ರಾಜೀಬ್ ಬ್ಯಾನರ್ಜಿ ತೃಣಮೂಲ ವಕ್ತಾರ ಕುನಾಲ್ ಘೋಷ್ರನ್ನು ಶನಿವಾರ ಭೇಟಿಯಾದರು. ಈ ಹಿನ್ನೆಲೆ ಇದೀಗ ರಾಜೀಬ್ ಬ್ಯಾನರ್ಜಿ ಪಕ್ಷಕ್ಕೆ ಮರು ಸೇರ್ಪಡೆಯಾಗುವ ಊಹಾಪೋಹಗಳು ಎದ್ದಿದೆ. ಆದರೆ ರಾಜೀಬ್ ಬ್ಯಾನರ್ಜಿ ಮಾತ್ರ ಇದು ಬರೀ ಸೌಜನ್ಯದ ಭೇಟಿ, ''ಯಾವುದೇ ರಾಜಕೀಯವಿಲ್ಲ'' ಎಂದು ಹೇಳಿಕೊಂಡಿದ್ದಾರೆ.
''ನಾನು ಅನಾರೋಗ್ಯದಲ್ಲಿರುವ ಸಂಬಂಧಿಯನ್ನು ಭೇಟಿಯಾಗಲು ಉತ್ತರ ಕೊಲ್ಕತ್ತಾಗೆ ಬಂದೆ. ಈ ಸಂದರ್ಭ ನನ್ನ ಹಿರಿಯ ಸಹೋದರ ಮತ್ತು ದೀರ್ಘಕಾಲದ ಸ್ನೇಹಿತ ಕುನಾಲ್ ಘೋಷ್ ನಿವಾಸ ಸಮೀಪದಲ್ಲೇ ಇದ್ದ ಕಾರಣ ಅವರನ್ನು ಭೇಟಿಯಾದೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಮತ್ತು ರಾಜ್ಯಪಾಲ ಜಗದೀಪ್ ಧಂಕರ್ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿದ್ದರೂ, ಬಿಜೆಪಿ ಕಾರ್ಯಕರ್ತರು ಈಗ ಸಾರ್ವಜನಿಕ ಸಭೆಗಳಲ್ಲಿ ಟಿಎಂಸಿಗೆ ಕ್ಷಮೆಯಾಚಿಸುತ್ತಿದ್ದಾರೆ. ಬೋಲ್ಪುರದ ವಾರ್ಡ್ ಸಂಖ್ಯೆ 18 ರಲ್ಲಿ, ಬಿಜೆಪಿ ಕಾರ್ಯಕರ್ತರು ನಡೆಸಿದ ಸಾರ್ವಜನಿಕ ಪ್ರಕಟಣೆಯಲ್ಲಿ, ''ನಮ್ಮನ್ನು ಬಿಜೆಪಿ ಮನವೊಲಿಸಿತು. ಇದು ಮೋಸದ ಪಕ್ಷ. ಗೌರವಾನ್ವಿತ ಸಿಎಂ ಮಮತಾ ಬ್ಯಾನರ್ಜಿಗೆ ನಮಗೆ ಯಾವುದೇ ಮನಸ್ತಾಪವಿಲ್ಲ. ನಾವು ಅವರ ಅಭಿವೃದ್ಧಿ ಕಾರ್ಯಕ್ರಮದ ಭಾಗವಾಗಲು ಬಯಸುತ್ತೇವೆ'' ಎಂದು ಕಾರ್ಯಕರ್ತರು ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತ ಮುಕುಲ್ ಮಂಡಲ್, ''ನಾನು ಬಿಜೆಪಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆ. ಈಗ ನಾವು ಟಿಎಂಸಿಗೆ ಸೇರಲು ಬಯಸುತ್ತೇವೆ'' ಎಂದಿದ್ದಾರೆ.
ಬಿಜೆಪಿ ತೊರೆದು ಮತ್ತೆ ಟಿಎಂಸಿ ಸೇರಿದ ಮುಕುಲ್ ರಾಯ್
ಸೈಂಥಿಯಾದಲ್ಲಿ, 300 ಬಿಜೆಪಿ ಕಾರ್ಯಕರ್ತರ ಗುಂಪು ಟಿಎಂಸಿಗೆ ಮರಳಿದೆ. ''ನಾವು ತಪ್ಪಾಗಿ ಬಿಜೆಪಿಗೆ ಹೋಗಿದ್ದೆವು. ಮಮತಾ ಬ್ಯಾನರ್ಜಿಯ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಲು ನಾವು ಇಂದಿನಿಂದ ಟಿಎಂಸಿಗೆ ಸೇರುತ್ತಿದ್ದೇವೆ'' ಎಂದು ಈ ಗುಂಪು ಹೇಳಿದೆ. ಈ 300 ಬಿಜೆಪಿ ಕಾರ್ಯಕರ್ತರ ಪೈಕಿ ಒಬ್ಬರು ಬಿಜೆಪಿ ಮಾಜಿ ಯುವ ಮೋರ್ಚಾ ಮಂಡಲದ ಅಧ್ಯಕ್ಷ ತಪಸ್ ಸಹಾ. ''ನಾನು ಬಿಜೆಪಿಯಲ್ಲಿ ಏನೂ ಮಾಡಲು ಸಾಧ್ಯವಾಗಲಿಲ್ಲ. ಅಭಿವೃದ್ಧಿಯಲ್ಲಿ ಭಾಗವಹಿಸಲು ನಾನು ಟಿಎಂಸಿಗೆ ಸೇರುತ್ತೇನೆ'' ಎಂದು ಹೇಳಿದ್ದಾರೆ.
ಧನಿಯಖಾಲಿಯಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರು, ನಮ್ಮ ಸೊಕ್ಕಿನ ವರ್ತನೆಗಾಗಿ ಟಿಎಂಸಿ ಕಾರ್ಯಕರ್ತರ ಬಳಿ ಸಾರ್ವಜನಿಕ ಕ್ಷಮೆಯಾಚಿಸಿದ ಬೆನ್ನಲ್ಲೇ ಈಗ ಅಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರು ಟಿಎಂಸಿ ಸೇರಿದ್ದಾರೆ. ಹೂಗ್ಲಿ ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರನ್ನು ಟಿಎಂಸಿಗೆ ಸೇರಲು ಒತ್ತಾಯಿಸಿದ್ದಾರೆ.
Recommended Video
(ಒನ್ಇಂಡಿಯಾ ಸುದ್ದಿ)