ಡೆಂಗ್ಯೂ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಹೀಗೆ ಮಾಡೋದಾ?
ಕೋಲ್ಕತ್ತಾ, ನವೆಂಬರ್.13: ಪ್ರತಿಭಟನೆ ಮಾಡಿದ್ರೆ ಗುಂಡೇಟು ಪಕ್ಕಾ. ಇದು ವಿದೇಶಿ ಸಂಸ್ಕೃತಿ. ಅಲ್ಲಿ ಹೋರಾಟ ನಡೆಸೋರನ್ನು ಹತ್ತಿಕ್ಕಲು ಇಂಥದೊಂದು ಕ್ರಮ ಅನುಸರಿಸಲಾಗುತ್ತದೆ. ಇತ್ತೀಚಿಗೆ ಹಾಂಗ್ ಕಾಂಗ್ ನಲ್ಲಿ ಅಂಥದ್ದೇ ಒಂದು ಘಟನೆ ನಡೆದಿದೆ. ಆದರೆ, ಇದು ವಿದೇಶದ ಕಥೆಯಲ್ಲ ಸ್ವಾಮಿ ನಮ್ಮ ದೇಶದಲ್ಲೇ ನಡೆದ ಒಂದು ಘಟನೆ.
ಭಾರತ ಪ್ರಜಾಪ್ರಭುತ್ವ ದೇಶ. ಇಲ್ಲಿ ಹೋರಾಟ, ಪ್ರತಿಭಟನೆ ಮಾಡುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಗೂ ಇರುತ್ತದೆ. ಇಲ್ಲಿ ರಾಜಕೀಯ ಪಕ್ಷಗಳು ಲೆಕ್ಕಕ್ಕೆ ಬರುವುದಿಲ್ಲ. ಪ್ರತಿಭಟನೆ ನಡೆಸುತ್ತಿರುವ ಉದ್ದೇಶವಷ್ಟೇ ಕೌಂಟ್ ಆಗುತ್ತದೆ.
ಡೆಂಜರ್ ಡೆಂಗ್ಯೂಗೆ ಬಲಿಯಾಗಿದ್ದು ಒಬ್ಬಿಬ್ಬರಲ್ಲ
ಇದೆಲ್ಲ ಗೊತ್ತಿದ್ದು, ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳೇ ಎಲ್ಲ ಕಾನೂನನ್ನು ಗಾಳಿಗೆ ತೂರುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ನಡೆಸಿದ್ದಕ್ಕೆ 37ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.
ಡೆಂಗ್ಯೂ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಹೀಗೆ ಮಾಡೋದಾ?
ಪಶ್ಚಿಮ ಬಂಗಾಳದಲ್ಲಿ ಡೆಂಗ್ಯೂ ಭೀತಿ ದಿನೇ ದಿನೆ ಹೆಚ್ಚಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಕೋಲ್ಕತ್ತಾದಲ್ಲಿ ಡೆಂಗ್ಯೂ ರೋಗಕ್ಕೆ ಅತಿಹೆಚ್ಚು ಜನರು ತುತ್ತಾಗಿದ್ದಾರೆ. ಹೀಗಿದ್ದರೂ ಮಾರಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಾಗಲಿ, ಕೋಲ್ಕತ್ತಾ ಮಹಾನಗರ ಪಾಲಿಕೆಯಾಗಲಿ, ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರವಾಗಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಿಂದ ಕೆರಳಿದ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ.
ಅಯ್ಯೋ ಬಿಜೆಪಿಗರನ್ನು ಬಿಡಿ, ಸಮಸ್ಯೆ ನೋಡಿ!
ಕೋಲ್ಕತ್ತಾದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಯ 37 ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ನಾವು ಪ್ರತಿಭಟನೆ ನಡೆಸುತ್ತಿರುವುದು ಸಾಮಾನ್ಯ ಜನರಿಗಾಗಿ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಬಿಜೆಪಿ ಯುವಮೋರ್ಚಾ ಸಂಘಟನೆ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ತಿಳಿಸಿದ್ದಾರೆ. ಅಲ್ಲದೇ 37 ಮಂದಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಪ್ರತಿಭಟನೆ ಮಾಡಿದ್ದಕ್ಕೆ ಲಾಠಿ ಏಟು!
ಕೋಲ್ಕತ್ತಾದಲ್ಲಿ ಆರಂಭದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಬ್ಯಾರಿಕೇಡ್ ದಾಟಿ ಬರದಂತೆ ಪೊಲೀಸರು ಮೊದಲಿಗೆ ಎಚ್ಚರಿಕೆ ನೀಡಿದ್ದರು. ಆದರೆ, ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪ್ರತಿಭಟನಾಕಾರರು ಬ್ಯಾರಿಕೇಡ್ ಏರಿ ಒಳನುಗ್ಗಲು ಪ್ರಯತ್ನಿಸಿದರು. ಈ ವೇಳೆ ಆಕ್ರೋಶಗೊಂಡ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿ, ಜಲಫಿರಂಗಿ ಸಿಡಿಸಿದರು.
ಕೋಲ್ಕತ್ತಾ ಮಹಾನಗರ ಪಾಲಿಗೆ ಸುತ್ತ ನಿಷೇಧಾಜ್ಞೆ
ಬಿಜೆಪಿ ಪ್ರತಿಭಟನೆಯಿಂದ ಕೋಲ್ಕತ್ತಾದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಿನ್ನೆಲೆಯಲ್ಲಿ ಕೋಲ್ಕತ್ತಾ ಮಹಾನಗರ ಪಾಲಿಕೆ ಸುತ್ತ ನಿಷೇಧಾಜ್ಞೆ ಘೋಷಿಸಲಾಗಿದೆ. ಭದ್ರತೆಗಾಗಿ ಪಾಲಿಕೆ ಬಳಿ ಕೇಂದ್ರ ಮೀಸಲು ಪೊಲೀಸ್ ಪಡೆಯನ್ನು ನಿಯೋಜನೆ ಮಾಡಲಾಗಿದೆ.