ಟಿಎಂಸಿಯಿಂದ ಹಲ್ಲೆ ಆರೋಪ: ಬಿಜೆಪಿ ಕಾರ್ಯಕರ್ತನ ತಾಯಿ ನಿಧನ
ಕೋಲ್ಕತಾ, ಮಾರ್ಚ್ 29: ಈ ತಿಂಗಳ ಆರಂಭದಲ್ಲಿ ತೃಣಮೂಲ ಕಾಂಗ್ರೆಸ್ನಿಂದ ಹಲ್ಲೆಗೆ ಒಳಗಾಗಿದ್ದಾರೆ ಎಂಬ ಪ್ರಕರಣದಲ್ಲಿ ಸುದ್ದಿಯಾಗಿದ್ದ ಬಿಜೆಪಿ ಕಾರ್ಯಕರ್ತನ ತಾಯಿ, 85 ವರ್ಷದ ಶೋವಾ ಮಜುಂದಾರ್ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಶೋವಾ ಅವರ ನಿಧನಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಮುಖಂಡರು ಸಂತಾಪ ಸೂಚಿಸಿದ್ದಾರೆ. ಅವರ ನಿಧನಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಬಿಜೆಪಿ ಕಾರ್ಯಕರ್ತ, ತಾಯಿ ಮೇಲೆ ಹಲ್ಲೆ ಆರೋಪ: ಟಿಎಂಸಿ ಪ್ರತ್ಯಾರೋಪ
ಪಶ್ಚಿಮ ಬಂಗಾಳದ ಉತ್ತರ ದುಂಡುಮ್ ಪ್ರದೇಶದ ನಿಮ್ತಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಬಿಜೆಪಿ ಕಾರ್ಯಕರ್ತರ ಗೋಪಾಲ್ ಮಜುಂದಾರ್ ಮನೆಗೆ ನುಗ್ಗಿದ್ದ ಟಿಎಂಸಿ ಕಾರ್ಯಕರ್ತರು, ಗೋಪಾಲ್ ಹಾಗೂ ಅವರ ಅಸ್ವಸ್ಥ ತಾಯಿ ಶೋಬಾ ಮಜುಂದಾರ್ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಶೋವಾ, 'ಟಿಎಂಸಿ ಕಾರ್ಯಕರ್ತರು ಹಾಸಿಗೆ ಹಿಡಿದಿರುವ ನನ್ನ ಮೇಲೆಯೂ ಹಲ್ಲೆ ಮಾಡಿದ್ದಾರೆ. ನನ್ನ ತಲೆ ಮತ್ತು ಕುತ್ತಿಗೆಗೆ ಬಾರಿಇದರು. ಮುಖಕ್ಕೆ ಸಹ ಗುದ್ದಿದ್ದರು. ನನ್ನ ಮಗ ಬಿಜೆಪಿ ಪರ ಕೆಲಸ ಮಾಡುತ್ತಾನೆ ಎಂದು ಈ ರೀತಿ ಹಲ್ಲೆ ಮಾಡಿದ್ದಾರೆ' ಎಂದು ಆರೋಪಿಸಿದ್ದರು.
ಆದರೆ ಶೋವಾ ಅವರ ಮೇಲೆ ಹಲ್ಲೆ ನಡೆದಿಲ್ಲ. ಅವರ ಮುಖವು ಊದಿಕೊಳ್ಳಲು ಅವರನ್ನು ಕಾಡುತ್ತಿರುವ ಕಾಯಿಲೆ ಕಾರಣ ಎಂದು ಟಿಎಂಸಿ ಕಾರ್ಯಕರ್ತರು ಹಾಗೂ ಪೊಲೀಸರು ಹೇಳಿದ್ದರು. ಗೋಪಾಲ್, ಆಗಾಗ ತನ್ನ ತಾಯಿಗೆ ಹೊಡೆಯುತ್ತಿದ್ದ ಎಂದು ಸಂಬಂಧಿಕರು ಹೇಳಿದ್ದು, ಘಟನೆಗೆ ತಿರುವು ನೀಡಿತ್ತು.
'ನಿಮ್ತಾದ ವೃದ್ಧ ಚೇತನವಾದ ತಾಯಿ ಶೋವಾ ಮಜುಂದಾರ್ ಅವರಿಗೆ ದೇವರು ಶಾಂತಿ ನೀಡಲಿ. ಆಕೆಯ ಮಗ ಗೋಪಾಲ್ ಮಜುಂದಾರ್ ಬಿಜೆಪಿ ಕಾರ್ಯಕರ್ತನಾಗಿದ್ದ ಕಾರಣಕ್ಕೆ ಆಕೆ ತನ್ನ ಜೀವಕ್ಕೆ ಬೆಲೆ ತೆರಬೇಕಾಯಿತು. ಆಕೆಯ ತ್ಯಾಗವನ್ನು ಎಂದೆಂದಿಗೂ ನೆನಪಿಸಿಕೊಳ್ಳಲಾಗುವುದು. ಆಕೆ ಕೂಡ ಬಂಗಾಳದ ತಾಯಿ, ಬಂಗಾಳದ ಮಗಳು. ತಾಯಿ ಮತ್ತು ಹೆಣ್ಣುಮಕ್ಕಳ ರಕ್ಷಣೆಗಾಗಿ ಬಿಜೆಪಿ ಸದಾ ಹೋರಾಡಲಿದೆ' ಎಂದು ಜೆಪಿ ನಡ್ಡಾ ಟ್ವೀಟ್ ಮಾಡಿದ್ದಾರೆ.
Recommended Video
'ಟಿಎಂಸಿ ಗೂಂಡಾಗಳಿಂದ ಕ್ರೂರವಾಗಿ ಹಲ್ಲೆಗೊಳಗಾಗಿದ್ದ ಬಂಗಾಳದ ಮಗಳು ಶೋವಾ ಮಜುಂದಾರ್ ಅವರ ಅಗಲುವಿಕೆಯಿಂದ ನೋವಾಗಿದೆ. ಆಕೆಯ ಕುಟುಂಬದ ನೋವು ಮತ್ತು ಗಾಯ ಮಮತಾ ದೀದಿಯನ್ನು ಸುದೀರ್ಘ ಕಾಲ ಕಾಡಲಿದೆ. ಬಂಗಾಳವು ಹಿಂಸಾಚಾರ ಮುಕ್ತ ನಾಳೆಗಾಗಿ ಹೋರಾಡಲಿದೆ, ನಮ್ಮ ತಾಯಂದಿರು ಮತ್ತು ಸಹೋದರಿಯರಿಗಾಗಿ ಸುರಕ್ಷಿತ ರಾಜ್ಯಕ್ಕಾಗಿ ಬಂಗಾಳ ಹೋರಾಡಲಿದೆ' ಎಂದು ಅಮಿತ್ ಶಾ ಟ್ವೀಟ್ ಹೇಳಿದ್ದಾರೆ.