ಪಶ್ಚಿಮ ಬಂಗಾಳದಲ್ಲಿ ತೇಜಸ್ವಿ ಸೂರ್ಯ ಪ್ರತಿಭಟನೆ: ಹಿಂಸಾಚಾರದಲ್ಲಿ ಒಬ್ಬರ ಸಾವು
ಸಿಲಿಗುರಿ, ಡಿಸೆಂಬರ್ 7: ಬಿಜೆಪಿ ಸಂಸದ, ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಸಂಘರ್ಷದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ.
'ಬಿಜೆಪಿಯ ಹಿರಿಯ ಕಾರ್ಯಕರ್ತ ಉಲೆನ್ ರಾಯ್ ಅವರು ಮಮತಾ ಪೊಲೀಸರು ಎಸೆದ ನಾಡ ಬಾಂಬ್ನಿಂದ ಉಂಟಾದ ತೀವ್ರ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ' ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ. ತನ್ನ ಕಾರ್ಯಕರ್ತನ ಸಾವಿನ ಬೆನ್ನಲ್ಲೇ ಉತ್ತರ ಬಂಗಾಳದಲ್ಲಿ ಬಿಜೆಪಿ 12 ಗಂಟೆಗಳ ಬಂದ್ಗೆ ಕರೆ ನೀಡಿದೆ.
ಪಶ್ಚಿಮ ಬಂಗಾಳ: ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಮೆರವಣಿಗೆ, ಹಿಂಸಾಚಾರ
ತೀನ್ಬಟ್ಟಿಯಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಚೆದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಪ್ರಯೋಗಿಸಿದರು. 'ಶಾಂತಿಯುತ ಪ್ರತಿಭಟನೆ ವೇಳೆ ಬಿಜೆಪಿಯ ಅನೇಕ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ' ಎಂದು ತೇಜಸ್ವಿ ಸೂರ್ಯ ಮತ್ತೊಂದು ಟ್ವೀಟ್ನಲ್ಲಿ ಆರೋಪಿಸಿದ್ದಾರೆ. ಮುಂದೆ ಓದಿ.
ಮಮತಾ ವಿರುದ್ಧ ಆರೋಪ
ಸರಣಿ ಟ್ವೀಟ್ಗಳಲ್ಲಿ ತೇಜಸ್ವಿ ಸೂರ್ಯ, ಬಿಜೆಪಿ ಕಾರ್ಯಕರ್ತರ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ತೆಗೆದುಕೊಂಡ ಕ್ರಮಗಳನ್ನು ತೋರಿಸುವ ಅನೇಕ ಫೋಟೊಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ಘರ್ಷಣೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಕಾರಣ ಎಂದು ದೂರಿದ್ದಾರೆ.
ನಾವು ಉಕ್ಕಿನಿಂದ ಮಾಡಿದವರು
'ಮಮತಾ ಬ್ಯಾನರ್ಜಿ ಅವರೇ, ಸಮವಸ್ತ್ರದಲ್ಲಿನ ನಿಮ್ಮ ಗೂಂಡಾಗಳು ನಮ್ಮ ಯುವ ಮೋರ್ಚಾ ಕಾರ್ಯಕರ್ತರನ್ನು ಎಷ್ಟು ಹಿಂಸಿಸಲು ಬಯಸುತ್ತಾರೋ ಅಷ್ಟು ಹಿಂಸಿಸಲು ಬಿಡಿ. ನಾವು ಬೆನ್ನು ಬಾಗಿಸುವುದಿಲ್ಲ. ನಾವು ಹೆದರುವುದಿಲ್ಲ. ನಮ್ಮ ಬಿಜೆವೈಎಂ ಕಾರ್ಯಕರ್ತರು ಉಕ್ಕಿನಿಂದ ಮಾಡಿದವರು. ನಮ್ಮನ್ನು ಮುರಿಯಲು ನಿಮ್ಮಿಂದ ಸಾಧ್ಯವಿಲ್ಲ. ನಮ್ಮ ನಿರ್ಧಾರವನ್ನು ನಿಮಗೆ ಅಲ್ಲಾಡಿಸಲು ಆಗದು' ಎಂದು ಹೇಳಿದ್ದಾರೆ.
ಬಂಗಾಳದಲ್ಲಿ ಫ್ಯಾಸಿಸ್ಟ್ ಆಡಳಿತ: ತೇಜಸ್ವಿ ಸೂರ್ಯ
ಪೊಲೀಸರ ಪ್ರತ್ಯಾರೋಪ
ತೇಜಸ್ವಿ ಸೂರ್ಯ ಅವರ ಟ್ವೀಟ್ ಬಳಿಕ ಪಶ್ಚಿಮ ಬಂಗಾಳ ಪೊಲೀಸರು ಹೇಳಿಕೆ ನೀಡಿದ್ದು, ಸಿಲಿಗುರಿಯಲ್ಲಿ ಮೊದಲು ಹಿಂಸಾಚಾರವನ್ನು ಆರಂಭಿಸಿದ್ದೇ ಬಿಜೆಪಿ ಕಾರ್ಯಕರ್ತರು ಎಂದು ಆರೋಪಿಸಿದ್ದಾರೆ. 'ಇಂದು ಸಿಲಿಗುರಿಯಲ್ಲಿ ರಾಜಕೀಯ ಪಕ್ಷದವರ ಬೆಂಬಲಿಗರು ತಮ್ಮ ಪ್ರತಿಭಟನೆಯ ವೇಳೆ ಗಂಭೀರ ಹಿಂಸಾಚಾರ ಕೃತ್ಯ ನಡೆಸಿದ್ದಾರೆ. ಹಿಂಸಾಚಾರದಲ್ಲಿ ತೊಡಗಿದ್ದ ಗುಂಪನ್ನು ಚೆದುರಿಸಲು ಕೇವಲ ಜಲಫಿರಂಗಿ ಮತ್ತು ಅಶ್ರುವಾಯುಗಳನ್ನು ಬಳಸಿದ್ದೆವಷ್ಟೇ. ಒಬ್ಬ ವ್ಯಕ್ತಿಯ ಸಾವು ವರದಿಯಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ' ಎಂದು ಅವರು ತಿಳಿಸಿದ್ದಾರೆ.
ಎರಡನೆಯ ಬಾರಿ ಹಿಂಸಾಚಾರ
ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಬಿಜೆಪಿ, ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ಹೆಚ್ಚಿಸಿದೆ. ಕಳೆದ ಕೆಲವು ವಾರಗಳಲ್ಲಿ ತೇಜಸ್ವಿ ಸೂರ್ಯ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೆಯ ಬಾರಿ. ಎರಡು ಬಾರಿಯೂ ಅಲ್ಲಿ ಹಿಂಸಾಚಾರ ನಡೆದಿದೆ.
ಮತ್ತೊಂದು ಕಡೆ ಸಂಘರ್ಷ
ಹೂಗ್ಲಿ ಜಿಲ್ಲೆಯಲ್ಲಿ ಸೋಮವಾರ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕೂಡ ಘರ್ಷಣೆ ನಡೆದಿದೆ. 'ಬಿಜೆಪಿಯ ಗೂಂಡಾವೊಬ್ಬನಿಗೆ ಇಲ್ಲಿ ಸಿಐಎಸ್ಎಫ್ ರಕ್ಷಣೆ ನೀಡಲಾಗಿದೆ. ಆತ ಜಗದೀಪ್ ಧನಕರ್ ಜತೆ ನಿರಂತರ ಸಂಪರ್ಕದಲ್ಲಿದ್ದಾನೆ. ಅಲ್ಲಿ ಸೇರಿದ್ದ ನಮ್ಮ ಕಾರ್ಯಕರ್ತರ ಮೇಲೆ ಸಿಐಎಸ್ಎಫ್ ಲಾಠಿ ಪ್ರಹಾರ ನಡೆಸಿದ್ದಾರೆ' ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಹೇಳಿದ್ದಾರೆ.