ನೋಟ್ ಬ್ಯಾನ್ ವೇಳೆ 100 ಜನ ಸತ್ತಿದ್ದರೆ, ಶಹೀನ್ ಬಾಗ್ನಲ್ಲೇಕೆ ಸಾಯುತ್ತಿಲ್ಲ?: ಬಿಜೆಪಿ ಮುಖಂಡ
ಕೋಲ್ಕತಾ, ಜನವರಿ 29: ಮೂರು ವರ್ಷಕ್ಕೂ ಹಿಂದೆ ಅಪನಗದೀಕರಣದ ಸಮಯದಲ್ಲಿ ಬ್ಯಾಂಕುಗಳಿಂದ ಹಣ ವಿತ್ ಡ್ರಾ ಮಾಡಿಕೊಳ್ಳಲು ಸರದಿಯಲ್ಲಿ ನಿಂತು ನೂರಾರು ಮಂದಿ ಮೃತಪಟ್ಟಿದ್ದರು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೆಹಲಿಯ ಶಹೀನ್ ಬಾಗ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಯಾರೂ ಸಾಯುತ್ತಿಲ್ಲವಲ್ಲ ಎನ್ನುವ ಮೂಲಕ ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಮುಖ್ಯಸ್ಥ ದಿಲೀಪ್ ಘೋಷ್ ವಿವಾದ ಸೃಷ್ಟಿಸಿದ್ದಾರೆ.
ಕೋಲ್ಕತಾ ಪ್ರೆಸ್ ಕ್ಲಬ್ನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ದಿಲೀಪ್ ಘೋಷ್ ಮಾತನಾಡಿದರು.
ಸಿಎಎ ಪ್ರತಿಭಟನಾಕಾರರು ಕೊಲೆಗಾರರು, ಅತ್ಯಾಚಾರಿಗಳು: ಬಿಜೆಪಿ ಸಂಸದ
ನೋಟ್ ಬ್ಯಾನ್ ಆದಾಗ ಹಣ ಪಡೆಯಲು ಸರದಿಯಲ್ಲಿ ನಿಂತು ಹೈರಾಣಾಗಿ ಜನರು ಸತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಎರಡು ಮೂರು ಗಂಟೆ ನಿಂತಿದ್ದಕ್ಕೇ ಜನರು ಸತ್ತಿದ್ದರು ಎಂದು ಕೇಳುವುದು ಅಚ್ಚರಿ ಮೂಡಿಸುತ್ತದೆ. ಆದರೆ ಈಗ ನೂರಾರು ಮಕ್ಕಳು ಮತ್ತು ಮಹಿಳೆಯರು ಕೊರೆಯುವ ಚಳಿಯಲ್ಲಿ ಹಗಲು ರಾತ್ರಿ ಕೂರುತ್ತಿದ್ದಾರೆ. ಯಾರಿಗೂ ಏನೂ ಆಗುತ್ತಿಲ್ಲ. ಅದಿನ್ನೆಂತಹ ಅಮೃತವನ್ನು ಅವರು ಕುಡಿದು ಬದುಕಿರಬಹುದು? ಎಂದು ವ್ಯಂಗ್ಯವಾಡಿದರು.
ಯಾವ ಅಮೃತ ಕುಡಿದು ಬದುಕಿದ್ದಾರೆ?
'ಎರಡು ಅಥವಾ ಮೂರು ಗಂಟೆ ಸರದಿಯಲ್ಲಿ ನಿಂತಿದ್ದಕ್ಕಾಗಿ ಜನರು ಸತ್ತಿದ್ದಾರೆ ಎಂಬುದನ್ನು ಕೇಳಿ ನನಗೆ ಅಚ್ಚರಿ ಮೂಡಿಸಿತ್ತು. ಆದರೆ ಈಗ 4-5 ಡಿಗ್ರಿ ಸೆಲ್ಸಿಯಸ್ ಚಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಪ್ರತಿಭಟನೆಗೆ ಕುಳಿತುಕೊಳ್ಳುತ್ತಿದ್ದಾರೆ. ಆದರೆ ಯಾರೊಬ್ಬರೂ ಸಾಯುತ್ತಿಲ್ಲ. ಯಾವ ಅಮೃತವನ್ನು ಅವರು ಕುಡಿದಿದ್ದಾರೆ? ನನಗೆ ಆಶ್ಚರ್ಯವಾಗುತ್ತಿದೆ. ಅವರ ಪ್ರತಿಭಟನೆಯ ಹಿಂದಿನ ಉದ್ದೇಶವೇನು?' ಎಂದು ಘೋಷ್
ಶಹೀನ್ ಬಾಗ್ ಸತ್ಯ ಹೊರಬರಲಿದೆ
ಈ ಪ್ರತಿಭಟನೆಗಳ ಹಿಂದೆ ಬೇರೆಯದೇ ಕಾರಣಗಳಿರುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು. 'ನನಗೆ ಇದು ಸಾಕಷ್ಟು ಆಸಕ್ತಿದಾಯಕವಾಗಿ ಕಂಡಿದೆ. ಹಗಲು ರಾತ್ರಿ ಮಹಿಳೆಯರು ಮತ್ತು ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಜನರು ಶಹೀನ್ ಬಾಗ್ ಕುರಿತು ಭಾರಿ ಕುತೂಹಲ ಹೊಂದಿದ್ದಾರೆ. ಕೆಲವರು ಹೇಳುತ್ತಾರೆ ಅವರಿಗೆ ಪ್ರತಿ ದಿನ 500 ರೂ. ಸಿಗುತ್ತಿದೆ ಎಂದು. ಇದು ಕೂಡ ಇರಬಹುದು ಅಥವಾ ಇಲ್ಲದಿರಬಹುದು. ಆದರೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕುರಿತಾದ ಸತ್ಯ ಹೊರಬಂದಿದೆ. ಹಾಗೆಯೇ ಶಹೀನ್ ಬಾಗ್ ಕುರಿತಾದ ಸತ್ಯ ಕೂಡ ಹೊರಬೀಳಲಿದೆ. ಅದು ಹೊರಬರುವಂತೆ ಮಾಡುತ್ತೇವೆ' ಎಂದರು.
ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಗಡಿಬಿಡಿ, ಮೋದಿ-ದೀದಿ ಸಿಡಿಮಿಡಿ
ಶೂಟೌಟ್ ಮಾಡಿ ಒಳ್ಳೆ ಕೆಲಸ ಮಾಡಿದ್ದಾರೆ
ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರನ್ನು ಗುರಿಯನ್ನಾಗಿರಿಸಿಕೊಂಡು ದಿಲೀಪ್ ಘೋಷ್ ಹೇಳಿಕೆ ನೀಡುತ್ತಿರುವುದು ಇದು ಮೊದಲೇನಲ್ಲ. ಕರ್ನಾಟಕ, ಉತ್ತರ ಪ್ರದೇಶ ಮತ್ತು ಅಸ್ಸಾಂನಂತಹ ಬಿಜೆಪಿ ಆಡಳಿತವಿರುವ ರಾಜ್ಯಗಳನ್ನು ಶ್ಲಾಘಿಸಿದ್ದ ಅವರು, ನಾಯಿಗಳಂತೆ ಸಾರ್ವಜನಿಕ ಆಸ್ತಿಗಳನ್ನು ಹಾಳುಗೆಡವಿದ್ದವರನ್ನು ಶೂಟೌಟ್ ಮಾಡಿ ಸರಿಯಾದ ಕೆಲಸ ಮಾಡಿದ್ದಾರೆ. ಆದರೆ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಆ ರೀತಿ ಮಾಡದೆ ಅವರಿಗೆ ಪ್ರೋತ್ಸಾಹ ಕೊಟ್ಟಿದ್ದಾರೆ ಎಂದಿದ್ದರು.
ನಾಚಿಕೆಯಿಂದ ಓಡುತ್ತಾರೆ
ಕಾನೂನಿನ ಪ್ರಕಾರ ದಾಖಲೆಗಳನ್ನು ತೋರಿಸಬೇಕಾದವರು, ಯಾವ ದಾಖಲೆಗಳನ್ನೂ ಹೊಂದಿಲ್ಲ ಎಂದು ಹೇಳುವ ಪರಾವಲಂಬಿ ಜೀವಿಗಳಾಗಿದ್ದಾರೆ. ಅವರು ಶೀಘ್ರದಲ್ಲಿಯೇ ಸಾರ್ವಜನಿಕವಾಗಿ ತಮ್ಮ ಮುಖ ತೋರಿಸಲು ಸಾಧ್ಯವಾಗದೆ ನಾಚಿಕೆಯಿಂದ ಓಡುವಂತಾಗುತ್ತದೆ ಎಂದು ಹೇಳಿದ್ದರು.