ನಿಗದಿಯಂತೆಯೇ ಚುನಾವಣೆ ನಡೆಸಲಿ: ಆಯೋಗಕ್ಕೆ ಬಿಜೆಪಿ ಮನವಿ
ಕೋಲ್ಕತಾ, ಏಪ್ರಿಲ್ 16: ಪಶ್ಚಿಮ ಬಂಗಾಳದಲ್ಲಿ ಎಲ್ಲ ಅಭ್ಯರ್ಥಿಗಳೂ ನ್ಯಾಯ ದೊರಕುವಂತೆ ನೋಡಿಕೊಳ್ಳಬೇಕು. ಹೀಗಾಗಿ ಈ ಮುಂಚೆ ನಿಗದಿಪಡಿಸಿರುವಂತೆಯೇ ಚುನಾವಣೆಗಳನ್ನು ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ದೇಶಾದ್ಯಂತ ಕೋವಿಡ್ ಸನ್ನಿವೇಶ ವಿಕೋಪಕ್ಕೆ ಹೋಗುತ್ತಿರುವುದರಿಂದ ಬಾಕಿ ಉಳಿದಿರುವ ನಾಲ್ಕು ಹಂತಗಳ ಚುನಾವಣೆಯನ್ನು ಸೇರಿಸಿ ಒಂದೇ ಹಂತದಲ್ಲಿ ಚುನಾವಣೆ ಮುಗಿಸಿಬಿಡುವಂತೆ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆಯೋಗಕ್ಕೆ ಮನವಿ ಮಾಡಿದ ಮರುದಿನ ಬಿಜೆಪಿ ಈ ಬೇಡಿಕೆ ಇರಿಸಿದೆ.
4 ಹಂತಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸಲು ಮಮತಾ ಬ್ಯಾನರ್ಜಿ ಒತ್ತಾಯ
ಕೊರೊನಾ ವೈರಸ್ ಪಿಡುಗಿನ ನಡುವೆ ನಾವು ಎಂಟು ಹಂತಗಳಲ್ಲಿ ಚುನಾವಣೆ ನಡೆಸುವುದನ್ನು ವಿರೋಧಿಸುತ್ತೇವೆ. ಕೋವಿಡ್-19 ಪ್ರಕರಣಗಳ ಭಾರಿ ಹೆಚ್ಚಳದ ಹಿನ್ನೆಲೆಯಲ್ಲಿ, ಬಾಕಿ ಉಳಿದಿರುವ ಹಂತಗಳನ್ನು ಒಂದೇ ಬಾರಿಗೆ ಚುನಾವಣೆ ನಡೆಸುವ ಮೂಲಕ ಮುಗಿಸುವಂತೆ ಚುನಾವಣಾ ಆಯೋಗವನ್ನು ಕೋರುತ್ತೇನೆ. ಇದು ಕೋವಿಡ್-19ಕ್ಕೆ ಜನರು ಮತ್ತಷ್ಟು ಒಳಗಾಗುವುದರಿಂದ ಜನರನ್ನು ಕಾಪಾಡುತ್ತದೆ ಎಂದು ಮಮತಾ ಹೇಳಿದ್ದರು.
ಈ ಸಲಹೆಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಶೇ 61ರಷ್ಟು ಅಭ್ಯರ್ಥಿಗಳಿಗೆ ಅನುಭವಿಸಿದ ಹಕ್ಕನ್ನು ಉಳಿದ ಶೇ 39ರಷ್ಟು ಅಭ್ಯರ್ಥಿಗಳು ಕೂಡ ಅನುಭವಿಸಬೇಕು ಎಂದು ಆಯೋಗಕ್ಕೆ ಬರೆದ ಪತ್ರದಲ್ಲಿ ಬಿಜೆಪಿ ಹೇಳಿದೆ.
ಎಲ್ಲ ಅಭ್ಯರ್ಥಿಗಳಿಗೂ ಸಮಾನ ಅವಕಾಶಗಳನ್ನು ನೀಡುವುದು ಮತ್ತು ನ್ಯಾಯಸಮ್ಮತತೆಯನ್ನು ಕಾಪಾಡುವುದು ಮುಖ್ಯವಾಗಿದೆ. ಆಯೋಗ ಮತ್ತು ಅದರಲ್ಲಿ ಭಾಗಿಯಾಗುವ ಎಲ್ಲರ ಪವಿತ್ರ ಜವಾಬ್ದಾರಿ ಇದು. ಹೀಗಾಗಿ ಈ ಮುಂದೆ ನಿಗದಿಮಾಡಿರುವಂತೆಯೇ ವಿವಿಧ ಹಂತಗಳಲ್ಲಿ ಚುನಾವಣೆ ನಡೆಸಬೇಕು ಎಂದು ಅದು ಮನವಿ ಮಾಡಿದೆ.