ಟಿಎಂಸಿ ಕಾರ್ಯಕರ್ತನ ಮನೆ ಮೇಲೆ ದಾಳಿ; ಪಶ್ಚಿಮ ಬಂಗಾಳದಲ್ಲಿ ತಾರಕಕ್ಕೇರಿದ ಟಿಎಂಸಿ-ಬಿಜೆಪಿ ಕಾದಾಟ
ಕೋಲ್ಕತ್ತಾ, ಡಿಸೆಂಬರ್ 12: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣದ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವಿನ ಜಿದ್ದು ತಾರಕಕ್ಕೇರಿದೆ. ಈ ಘಟನೆಯ ಬೆನ್ನಲ್ಲೇ ಶುಕ್ರವಾರ ರಾತ್ರಿ ದುರ್ಗಾಪುರದಲ್ಲಿ ಟಿಎಂಸಿ ಬೆಂಬಲಿಗನ ಮನೆಯ ಮೇಲೆ ಸ್ಫೋಟಕದ ದಾಳಿ ನಡೆದಿದ್ದು, ಎರಡೂ ಪಕ್ಷಗಳ ನಡುವೆ ಮತ್ತೆ ಗಲಭೆಗೆ ಕಾರಣವಾಗಿದೆ.
ಈ ಘಟನೆಯ ಹೊಣೆಯನ್ನು ಟಿಎಂಸಿ ಬಿಜೆಪಿ ಮೇಲೆ ಹಾಕಿದೆ. ತಾನು ಈ ಪ್ರದೇಶದಲ್ಲಿ ಜನಪ್ರಿಯ ಆಗಿರುವುದು ಕೇಸರಿ ನಾಯಕರ ಕೋಪಕ್ಕೆ ಕಾರಣವಾಗಿದೆ. ಹೀಗಾಗಿಯೇ ಈ ಕೃತ್ಯ ನಡೆಸಿದ್ದಾರೆ ಎಂದು ಟಿಎಂಸಿ ಕಾರ್ಯಕರ್ತ ಆರೋಪಿಸಿದ್ದಾರೆ.
ನಡ್ಡಾ ಬೆಂಗಾವಲು ವಾಹನದ ಮೇಲೆ ದಾಳಿ; ಮೂವರ ಮೇಲೆ FIR, ಏಳು ಮಂದಿ ಬಂಧನ
ಘಟನೆ ನಡೆದಾಗ ನಾವು ಮನೆಯೊಳಗೆ ಇದ್ದೆವು. ಆಗ ಸ್ಫೋಟಕವನ್ನು ಮನೆಯ ಮೇಲೆ ಎಸೆದಿದ್ದಾರೆ. ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ನಾವು ಹೊರಗೆ ಬಂದೆವು. ಘಟನೆಯಲ್ಲಿ ಹಸುವಿಗೆ ಗಾಯವಾಗಿದೆ. ನಾನು ಟಿಎಂಸಿ ಕಾರ್ಯಕರ್ತ ಎಂಬ ಕಾರಣಕ್ಕೇ ಬಿಜೆಪಿ ಕಡೆಯವರು ಈ ಕೃತ್ಯ ನಡೆಸಿದ್ದಾರೆ ಎಂದು ದೂರಿದ್ದಾರೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಕಾರ್ಯಕರ್ತ, "ರಾಜ್ಯದಲ್ಲಿ ಏನೇ ಆದರೂ ಬಿಜೆಪಿ ಮೇಲೆ ಎತ್ತಿಹಾಕುವುದು ಟಿಎಂಸಿ ಅವರಿಗೆ ಅಭ್ಯಾಸವಾಗಿದೆ. ಘಟನೆ ನಡೆದಾಗ ಬೆಂಕಿ ಆರಿಸಲು ನಮ್ಮ ಕಡೆಯವರು ಸಹಾಯಕ್ಕೆ ಹೋಗಿದ್ದಾರೆ. ಆದರೆ ಸಹಾಯಕ್ಕೆ ಹೋದವರ ಮೇಲೆಯೇ ಆರೋಪ ಮಾಡುತ್ತಿದ್ದಾರೆ" ಎಂದಿದ್ದಾರೆ.
ಗುರುವಾರ, ಡಿಸೆಂಬರ್ 10ರಂದು ಡೈಮಂಡ್ ಹಾರ್ಬರ್ ಗೆ ಪ.ಬಂಗಾಳ ಚುನಾವಣೆ 2021ರ ಸಲುವಾಗಿ ಪಕ್ಷದ ಸಭೆಗೆ ತೆರಳುತ್ತಿದ್ದ ಸಂದರ್ಭ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶದ ವಿಜಯವರ್ಗಿಯಾ ಅವರ ಕಾರಿನ ಮೇಲೆ ಕಲ್ಲು ತೂರಲಾಗಿತ್ತು. ಈ ಘಟನೆಗೆ ಬಿಜೆಪಿ ಟಿಎಂಸಿಯನ್ನು ಹೊಣೆ ಮಾಡಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಟಿಎಂಸಿ ನಾಯಕರ ನಡುವೆ ವಾಕ್ಸಮರ ಜೋರಾಗಿದೆ. ಇದೀಗ ಟಿಎಂಸಿ ಕಾರ್ಯಕರ್ತನ ಮನೆಯ ಮೇಲೆ ದಾಳಿ ನಡೆದಿರುವುದು ಈ ಜಗಳವನ್ನು ಇನ್ನಷ್ಟು ಹೆಚ್ಚಿಸಿದೆ.