"ಬಂಗಾರದಂತಾ ಭಾರತ ನಾಶಪಡಿಸಿದ ನಂತರ ಬಂಗಾಳಕ್ಕೆ ಬಿಜೆಪಿ"
ಕೋಲ್ಕತ್ತಾ, ಫೆಬ್ರವರಿ.05: "ಗೋಲ್ಡನ್ ಇಂಡಿಯಾ"ವನ್ನು ನಾಶಪಡಿಸಿದ ಭಾರತೀಯ ಜನತಾ ಪಕ್ಷವು ಇದೀಗ ಬಂಗಾರದಂತಾ ಪಶ್ಚಿಮ ಬಂಗಾಳವನ್ನು ಕಟ್ಟುವ ಬಗ್ಗೆ ಮಾತನಾಡುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆ ಕೋಲ್ಕತ್ತಾದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೇಸರಿ ಪಕ್ಷವು ಸುಳ್ಳು ಭರವಸೆಗಳನ್ನೊಳಗೊಂಡು ಪ್ರಚಾರ ಮಾಡುತ್ತಿದೆ ಎಂದು ದೂಷಿಸಿದರು.
ಆಸೆಬುರುಕರು ನೀವು; ಬಿಜೆಪಿಯೆಡೆಗೆ ಮಮತಾ ಬ್ಯಾನರ್ಜಿ ಮಾತಿನ ಬಾಣ
ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಜನರು ಇಂದಿಗೂ ಹಲವು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಬಿಹಾರ, ಅಸ್ಸಾಂ, ತ್ರಿಪುರಾ ರಾಜ್ಯಗಳಲ್ಲಿ ಬಿಜೆಪಿಗೆ ಪರ್ಯಾಯ ಪಕ್ಷಗಳೇ ಇಲ್ಲದೇ ಜನರು ಪರಿತಪಿಸುವಂತಾ ಸ್ಥಿತಿಯಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾದ ಪಕ್ಷವೇ ಇಲ್ಲ ಎಂದು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
"ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಪರ್ಯಾಯವಿಲ್ಲ":
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಪರ್ಯಾಯ ಪಕ್ಷಗಳಿಲ್ಲ. ಇಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ತೃಣಮೂಲ ಕಾಂಗ್ರೆಸ್ ಪಕ್ಷವೇ ಪರ್ಯಾಯವಾಗಿದೆ. ಬೇರೆ ಯಾವುದೇ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಜನಪರ ಮತ್ತು ಜನಸ್ನೇಹಿ ಸರ್ಕಾರ ಹಾಗೂ ಆಡಳಿತವನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಭಾರತ ಲಾಕ್ ಡೌನ್ ಸಂದರ್ಭದಲ್ಲಿ ನಿರಾಶ್ರಿತರಿಗೆ ಮತ್ತು ವಲಸೆ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಕ್ಕೆ ನೆರವು ನೀಡಲು ಬಿಜೆಪಿ ಸರ್ಕಾರದ ಬಳಿ ಹಣವಿಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರ ಹೊಂದಲು ಬಯಸಿದ ನಾಯಕರನ್ನು ಕೊಂಡುಕೊಳ್ಳುವುದಕ್ಕೆ ಹಣ ನೀಡುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ಟಿಎಂಸಿ ಶಾಸಕರು, ಸಚಿವರು ಸೇರಿದಂತೆ ಹಲವು ನಾಯಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. ನಂದಿಗ್ರಾಮ್ ಕ್ಷೇತ್ರದ ಪ್ರಭಾವಿ ಶಾಸಕ ಸುವೇಂಧು ಅಧಿಕಾರಿ, ಶಾಸಕ ಲಕ್ಷ್ಮಿ ರತನ್ ಶುಕ್ಲಾ, ರಾಜಿಬ್ ಬ್ಯಾನರ್ಜಿ, ಬೈಶಾಲಿ ದಾಲ್ಮಿಯಾ, ಪ್ರಬಿರ್ ಘೋಶಾಲ್, ರತಿನ್ ಚಕ್ರಬೊರ್ತಿ, ರುದ್ರಾಣಿ ಘೋಷ್ ಸೇರಿದಂತೆ ಈ ಶಾಸಕರ ಬೆಂಬಲಿಗರು ಕೂಡಾ ಬಿಜೆಪಗೆ ಸೇರ್ಪಡೆಯಾಗಿದ್ದರು.