ಬಂಗಾಳದಲ್ಲಿ ಬಿಜೆಪಿಯ ಮೈಂಡ್ ಗೇಮ್ ಕೆಲಸ ಮಾಡಲ್ಲ: ಟಿಎಂಸಿಯ ಡೆರೆಕ್ ಒಬ್ರಿಯನ್
ಕೋಲ್ಕತಾ, ಮಾರ್ಚ್ 29: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಪಶ್ಚಿಮ ಬಂಗಾಳವನ್ನು ಕ್ಲೀನ್ ಸ್ವೀಪ್ ಮಾಡುವ ಗುರಿಗೆ, ಆಡಳಿತರೂಢ ಟಿಎಂಸಿ ಪ್ರತಿಕ್ರಿಯಿಸಿದ್ದು, 'ಇದು ಬಂಗಾಳ, ಮೈಂಡ್ ಗೇಮ್ಸ್ ಕೆಲಸ ಮಾಡುವುದಿಲ್ಲ' ಎಂದಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2021ರಲ್ಲಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ಮುಗಿದ ನಂತರ, ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಎರಡೂ ರಾಜ್ಯಗಳಲ್ಲಿ ಚುನಾವಣೆ ನಡೆದಿದ್ದು, ಬಹುಮತದ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಮತ್ತು ಅಲ್ಲಿ ಮುಂದಿನ ಸರ್ಕಾರವನ್ನು ರಚಿಸುತ್ತದೆ ಎಂದು ಹೇಳಿದ್ದರು.
ಮೊದಲ ಹಂತದಲ್ಲಿ 47 ಸ್ಥಾನಗಳು ಅಸ್ಸಾಂನಲ್ಲಿ ಮತ್ತು 26 ಸ್ಥಾನಗಳಿಗೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆದವು. ಪಶ್ಚಿಮ ಬಂಗಾಳದ 30 ಸ್ಥಾನಗಳಲ್ಲಿ 26 ಮತ್ತು ಅಸ್ಸಾಂನ 47 ಸ್ಥಾನಗಳಲ್ಲಿ 37 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಅಮಿತ್ ಶಾ ಭವಿಷ್ಯ ನುಡಿದಿದ್ದರು.
""ಬೂತ್ ಮಟ್ಟದ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ ನಂತರ, ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ನಡೆದ 30 ಸ್ಥಾನಗಳಲ್ಲಿ ನಾವು 26ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ.''
""ಅಸ್ಸಾಂನ 47 ಸ್ಥಾನಗಳಲ್ಲಿ 37ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂಬ ಸ್ಪಷ್ಟ ಸೂಚನೆಗಳು ನಮಗೆ ದೊರೆತಿವೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿ ನಿವಾಸದಲ್ಲಿ ಹೇಳಿದರು. ಒಟ್ಟಾರೆ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಲಿದೆ ಎಂದಿದ್ದರು.
ಅಮಿತ್ ಶಾ ಅವರ ಹೇಳಿಕೆಗೆ ಹಿರಿಯ ಟಿಎಂಸಿ ನಾಯಕ ಡೆರೆಕ್ ಒಬ್ರಿಯನ್ ಅವರು ಪ್ರತಿಕ್ರಿಯೆ ನೀಡಿದ್ದು, ಇದನ್ನು "ಮೈಂಡ್ ಗೇಮ್' ಎಂದ ಅವರು, ಮೋದಿ-ಶಾ ಮೈಂಡ್ ಗೇಮ್ ಬಂಗಾಳದಲ್ಲಿ ಕೆಲಸ ಮಾಡುವುದಿಲ್ಲ. ಏನಿದ್ದರೂ ನಿಮ್ಮ ಗುಜರಾತ್ ಜಿಮ್ಖಾನಾದಲ್ಲಿ ನಿಮ್ಮ ಸಾಹಸ ಪ್ರಯತ್ನಿಸಿ ಎಂದು ಹೇಳಿದ್ದಾರೆ.
ಪ್ರಚಾರದ ಆರಂಭಿಕ ದಿನಗಳಲ್ಲಿ ಹಲವಾರು ಜನಾಭಿಪ್ರಾಯ ಸಂಗ್ರಹಗಳು ಟಿಎಂಸಿ ಗೆಲುವನ್ನು ಗ್ರಹಿಸಿವೆ. ಆದರೆ, ಬಿಜೆಪಿ ಕ್ರಮೇಣ ವೇಗವನ್ನು ಪಡೆದುಕೊಂಡಿದ್ದು, ಮತ್ತು ಕೆಲವು ಸಮೀಕ್ಷೆಗಳು ಈಗ ಟಿಎಂಸಿಗಿಂತ ಮುಂದಿದೆ ಎಂದು ಸೂಚಿಸಿವೆ. ಮಾರ್ಚ್ 23 ಮತ್ತು 24 ರಂದು ಪ್ರಕಟವಾದ ಆರು ಸಮೀಕ್ಷೆಗಳಲ್ಲಿ ಎರಡು ಟಿಎಂಸಿಗೆ ಬಹುಮತ ಎಂದಿದ್ದರೆ, ಎರಡು ಬಿಜೆಪಿಗೆ ಬಹುಮತ ಮತ್ತು ಎರಡು ಅತಂತ್ರ ವಿಧಾನಸಭೆ ಎಂದು ಹೇಳಿವೆ.
Recommended Video
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಆರಂಭವಾದಾಗಿನಿಂದಲೂ ಬಿಜೆಪಿ ಮತ್ತು ಟಿಎಂಸಿ ನಡುವೆ ಪೈಪೋಟಿ ಏರ್ಪಟ್ಟಿದೆ. ಎರಡೂ ಪಕ್ಷಗಳ ಉನ್ನತ ನಾಯಕರು ತಮ್ಮ ಚುನಾವಣಾ ಪ್ರಚಾರವನ್ನು ಈಗ ರಾಜ್ಯದ ಇತಿಹಾಸದಲ್ಲಿ ಅತ್ಯಂತ ಅನಿರೀಕ್ಷಿತ ಚುನಾವಣೆ ಎಂದು ಕರೆಯುತ್ತಿದ್ದಾರೆ. ಏಪ್ರಿಲ್ 1 ರಂದು ನಡೆಯಲಿರುವ ಎರಡನೇ ಹಂತದಲ್ಲಿ, ಮಮತಾ ಬ್ಯಾನರ್ಜಿ ಅವರು ಮಾಜಿ ಕ್ಯಾಬಿನೆಟ್ ಸಚಿವ ಮತ್ತು ಈಗ ನಂದಿಗ್ರಾಮದಲ್ಲಿ ಬಿಜೆಪಿ ಮುಖಂಡ ಸುವೆಂದು ಅಧಿಕಾರಿಯ ವಿರುದ್ಧ ಸ್ಪರ್ಧಿಸಲಾಗಿದೆ.