ಪಶ್ಚಿಮ ಬಂಗಾಳ ಚುನಾವಣೆ; ಕೇಂದ್ರ ಪಡೆ ನಿಯೋಜನೆಗೆ ಬಿಜೆಪಿ ಒತ್ತಾಯ
ನವದೆಹಲಿ, ಫೆಬ್ರುವರಿ 05: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿದ್ದು, ರಾಜ್ಯದ ಚುನಾವಣಾ ಪ್ರಕ್ರಿಯೆಯಲ್ಲಿ ಕೇವಲ ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ. ಚುನಾವಣೆ ಪ್ರಕ್ರಿಯೆಯನ್ನು ನ್ಯಾಯಯುತವಾಗಿ, ಘನತೆಯಾಗಿ ನಡೆಸಲು ಈ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದೆ.
ಬಿಜೆಪಿ ನಿಯೋಗವು ಈ ಸಂಬಂಧ ಚುನಾವಣಾ ಆಯೋಗವನ್ನು ಶುಕ್ರವಾರ ಭೇಟಿಯಾಗಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಕೇಂದ್ರ ಸಶಸ್ತ್ರ ಪಡೆ ನಿಯೋಜನೆ ಸೇರಿದಂತೆ ರಾಜ್ಯದ ಪೊಲೀಸರು, ಆಡಳಿತ ಯಂತ್ರೋಪಕರಣಗಳ ಬಗ್ಗೆ ಗಮನ ಹರಿಸಿ ಚುನಾವಣಾ ಪ್ರಕ್ರಿಯೆಯ ಅಂತಿಮ ಹಂತದವರೆಗೂ ನಿಗಾ ವಹಿಸಬೇಕೆಂದು ಪತ್ರ ಮುಖೇನ ಕೇಳಿಕೊಂಡಿದೆ.
ಪಶ್ಚಿಮ ಬಂಗಾಳ ಚುನಾವಣಾ ರೇಸ್; ಬಿಜೆಪಿ "ರಥ"ಕ್ಕೆ ಟಿಎಂಸಿ ಅಡ್ಡಗಾಲು?
ಈ ಹಿಂದೆ ರಾಜಕೀಯ ಪಕ್ಷಪಾತದ ಆರೋಪ ಹೊತ್ತಿರುವ ಪೊಲೀಸ್ ಅಧಿಕಾರಿಗಳನ್ನು ಮತದಾನಕ್ಕೆ ಸಂಬಂಧಿಸಿದ ಎಲ್ಲ ಕರ್ತವ್ಯಗಳಿಂದ ಕಟ್ಟುನಿಟ್ಟಾಗಿ ಹೊರಗಿಡಬೇಕು. ರಾಜ್ಯ ಭದ್ರತಾ ವ್ಯವಸ್ಥೆ ಹಾಗೂ ಆಡಳಿತ ಯಂತ್ರಗಳ ವ್ಯವಸ್ಥೆ ಬಗ್ಗೆ ವಿಶ್ವಾಸಾರ್ಹತೆ ಇಲ್ಲದ ಕಾರಣ ಈ ಕ್ರಮ ತೆಗೆದುಕೊಳ್ಳುವುದು ಅವಶ್ಯಕ ಎಂದು ನಿಯೋಗ ಪತ್ರದಲ್ಲಿ ಉಲ್ಲೇಖಿಸಿದೆ.
ಈ ನಿಯೋಗದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಭೂಪೇಂದರ್ ಯಾದವ್, ರಾಜ್ಯ ಬಿಜೆಪಿ ಕಾರ್ಯದರ್ಶಿ ದಿಲೀಪ್ ಘೋಷ್, ಸಂಸದರಾದ ಸ್ಬಪನ್ ದಾಸ್ ಗುಪ್ತಾ, ಲೋಕೆಟ್ ಚಟರ್ಜಿ, ಅರ್ಜುನ್ ಸಿಂಗ್ ಹಾಗೂ ಮುಖಂಡರಾದ ಓಂ ಪಾಠಕ್ ಹಾಗೂ ಸಂಜಯ್ ಮಯುಖ್ ಅವರನ್ನು ಒಳಗೊಂಡಿದೆ.
ಈ ಸಂದರ್ಭ ಅಂಗವಿಕಲರಿಗೆ ಹಾಗೂ ವಯೋವೃದ್ಧರಿಗೆ ಪ್ರತ್ಯೇಕ ಮತ ಕೇಂದ್ರಗಳನ್ನು ತೆರೆಯುವ ಕುರಿತು ಹಾಗೂ ಕೊರೊನಾ ಸೋಂಕಿನ ಪ್ರಮಾಣ ತಗ್ಗಿರುವ ಕಾರಣ ಚುನಾವಣೆಯನ್ನು ಸಹಜ ಪ್ರಕ್ರಿಯೆಯಂತೆಯೇ ನಡೆಸಬಹುದು ಎಂದು ನಿಯೋಗ ಸಲಹೆ ನೀಡಿದೆ. ಇದೇ ಏಪ್ರಿಲ್ ಮೇ ತಿಂಗಳಿನಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದ್ದು, 294 ಸೀಟುಗಳಿಗೆ ಚುನಾವಣೆ ನಡೆಯಲಿದೆ.