ಚುನಾವಣೋತ್ತರ ಹಿಂಸಾಚಾರ ವಿರುದ್ಧ ಬಿಜೆಪಿ ರ್ಯಾಲಿ: ಬಂಗಾಳಕ್ಕೆ ಶಾ ಭೇಟಿ ಸಾಧ್ಯತೆ
ಕೋಲ್ಕತ್ತಾ, ಮೇ 2: ತೀವ್ರ ಪೈಪೋಟಿಯಿಂದ ಕೂಡಿದ್ದ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಿದ ನಂತರ ರಾಜಕೀಯ ಕೆಸರೆರೆಚಾಟ ಉಲ್ಬಣಗೊಂಡಿದೆ. ರಾಜ್ಯವನ್ನು ಅಲುಗಾಡಿಸಿರುವ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಪ್ರತಿಭಟಿಸಲು ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂದು ಕೋಲ್ಕತ್ತಾದಲ್ಲಿ ಮೆಗಾ ರ್ಯಾಲಿಯನ್ನು ಆಯೋಜಿಸಿದೆ.
ಪಕ್ಷದ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್, ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಮತ್ತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಬಿಜೆಪಿಯ ರಾಜ್ಯ ಘಟಕದ ಪ್ರಮುಖ ನಾಯಕರು ಸೋಮವಾರ ಮಧ್ಯಾಹ್ನ ಕೋಲ್ಕತ್ತಾದಲ್ಲಿ ರ್ಯಾಲಿಯನ್ನು ನಡೆಸಲಿದ್ದಾರೆ.
ಇಂಧನದ ಮೇಲಿನ ತೆರಿಗೆ ಇಳಿಸಿ ಎಂದ ಮೋದಿ, ಮೊದಲು ದುಡ್ಡು ಕೊಡಿ ಎಂದ ದೀದಿ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್, "ಇದು ಆಡಳಿತಾರೂಢ ಟಿಎಂಸಿಯಿಂದ ಬಿಚ್ಚಿಟ್ಟಿರುವ ಭಯೋತ್ಪಾದನೆಯ ವಿರುದ್ಧ ಮೆಗಾ ಪ್ರತಿಭಟನಾ ರ್ಯಾಲಿಯಾಗಲಿದೆ. ನಮ್ಮ ಪಕ್ಷದ ಹಲವಾರು ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ರಕ್ತ ಹೀರುತ್ತಿರುವ ಟಿಎಂಸಿ ಸರ್ಕಾರವನ್ನು ಖಂಡಿಸಿ ಈ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ" ಎಂದು ಹೇಳಿದ್ದಾರೆ.
ಇಂದು (ಮೇ 2) ಮಮತಾ ಬ್ಯಾನರ್ಜಿ-ಸರ್ಕಾರ 2021 ರಲ್ಲಿ ಅಧಿಕಾರಕ್ಕೆ ಮರಳಿದ ದಿನವಾಗಿದೆ. ಕಳೆದ ವರ್ಷ ಮೇ 2 ರಂದು ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಘೋಷಿಸಲಾಯಿತು. ಮೇ 5 ರಂದು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಸತತ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೀದಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಆರೋಪಿಸಲಾಗುತ್ತಿದೆ.
ಕೋಲ್ಕತ್ತಾ ಹೈಕೋರ್ಟ್ನ ಆದೇಶದ ಮೇರೆಗೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ), 2021ರ ವಿಧಾನಸಭಾ ಚುನಾವಣೆಯ ನಂತರ ನಡೆದ ಕೊಲೆಗಳು ಮತ್ತು ಅತ್ಯಾಚಾರಗಳ ಆರೋಪಗಳನ್ನು ಈಗಾಗಲೇ ತನಿಖೆ ನಡೆಸುತ್ತಿದೆ. ಆದರೂ ಭಯೋತ್ಪಾದನೆಯ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ. ಮಾತ್ರವಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೇ 4 ರಿಂದ ಬಂಗಾಳಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದಾರೆ ಎಂದು ಪಶ್ಚಿಮ ಬಂಗಾಳಕ್ಕೆ ಬರಲಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ಮೋದಿ ಅವರು ಮೇ 5 ರಂದು ಉತ್ತರ ಬಂಗಾಳದ ಸಿಲಿಗುರಿಯಲ್ಲಿ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.
ಆದರೆ ಬಿಜೆಪಿಗೆ ಟಿಎಂಸಿ ಈ ಎಲ್ಲಾ ಬೆಳವಣಿಗೆ ವಿರುದ್ಧ ತಿರುಗೇಟು ನೀಡಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಟಿಎಂಸಿ ತಿರುಗೇಟು ನೀಡಿದೆ. ಕಳೆದ ವರ್ಷ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿಯ ಕೇಂದ್ರ ನಾಯಕರು ಪಶ್ಚಿಮ ಬಂಗಾಳದಲ್ಲಿ ಪಕ್ಷ 200ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಬಿಜೆಪಿ ಟಿಎಂಸಿ ವಿರುದ್ಧ ಇಂತೆಲ್ಲಾ ತಂತ್ರಗಳನ್ನು ರೂಪಿಸುತ್ತಿದೆ ಎಂದು ಆರೋಪಿಸಿದೆ.
ಅತ್ಯಾಚಾರ, ಹತ್ಯಾಕಾಂಡ ಮತ್ತು ಭ್ರಷ್ಟಾಚಾರ ಸೇರಿದಂತೆ ಸರಣಿ ಘಟನೆಗಳ ಕುರಿತು ಟಿಎಂಸಿ ಟೀಕೆಗೆ ಗುರಿಯಾಗಿದೆ. ಹೀಗಾಗಿ ಕಳೆದ ವರ್ಷ ಪಕ್ಷದ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದ (ಮೇ 5) ಸ್ಮರಣಾರ್ಥ ಮುಂದಿನ ಕೆಲವು ತಿಂಗಳುಗಳಲ್ಲಿ ಆಡಳಿತಾರೂಢ ಟಿಎಂಸಿ ಬೃಹತ್ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಮುಂದಿನ ವರ್ಷ ಪಂಚಾಯತ್ ಚುನಾವಣೆ ನಡೆಯುವ ಸಾಧ್ಯತೆ ಇದ್ದು ಈ ಎಲ್ಲಾ ಕಸರತ್ತುಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ. ಮಾತ್ರವಲ್ಲದೆ ಟಿಎಂಸಿ ವರಿಷ್ಠರು ಎಲ್ಲ ನಾಯಕರನ್ನು ಬೀದಿಗಿಳಿದು, ಹಳ್ಳಿಗಳು ಮತ್ತು ಬ್ಲಾಕ್ಗಳಿಗೆ ಭೇಟಿ ನೀಡಿ ಜನರನ್ನು ತಲುಪುವಂತೆ ಸೂಚಿಸಿದ್ದಾರೆನ್ನಲಾಗುತ್ತಿದೆ.
ಮೊದಲ ಹಂತವು ಮೇ 5 ರಿಂದ ನಡೆಯಲಿದೆ ಮತ್ತು ಜುಲೈ 21 ರವರೆಗೆ ಮುಂದುವರಿಯುತ್ತದೆ, ಎರಡನೇ ಹಂತವು TMC ಯ ಜುಲೈ 21 ರ ಮೆಗಾ ರ್ಯಾಲಿಯ ನಂತರ ಪ್ರಾರಂಭವಾಗುತ್ತದೆ. ಇದು ಅಕ್ಟೋಬರ್ ವರೆಗೆ ಮುಂದುವರಿಯುತ್ತದೆ. ಮೂರನೇ ಹಂತವು ನವೆಂಬರ್ನಲ್ಲಿ ಪ್ರಾರಂಭವಾಗುತ್ತದೆ.