ಹಿರಿಯ ನಾಯಕರ ವಿರುದ್ದ ಫೇಸ್ಬುಕ್ನಲ್ಲಿ ಕಿಡಿಕಾರಿದ್ದ ಬಿಜೆಪಿ ಸಂಸದನಿಂದ ಕ್ಷಮೆಯಾಚನೆ
ಕೋಲ್ಕತ್ತಾ, ಜು.26: ಬಿಜೆಪಿ ನಾಯಕರಾದ ಸುವೇಂದು ಅಧಿಕಾರಿ ಹಾಗೂ ದಿಲೀಪ್ ಘೋಷ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಕೆಲ ದಿನಗಳ ನಂತರ, ಪಕ್ಷದ ರಾಜ್ಯ ಯುವ ವಿಭಾಗದ ಮುಖ್ಯಸ್ಥ ಸೌಮಿತ್ರಾ ಖಾನ್ ತಮ್ಮ ಹೇಳಿಕೆಗಳಿಗೆ ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ. ಹಾಗೆಯೇ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ತೀವ್ರ ಆಂದೋಲನವನ್ನು ಪ್ರಾರಂಭಿಸುವುದಾಗಿ ಪ್ರತಿಜ್ಞೆ ಮಾಡಿದರು.
ಬಿಜೆವೈಎಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಂಗಾಳದ ಬಿಷ್ಣಪುರದ ಸಂಸದರು ಫೇಸ್ಬುಕ್ನಲ್ಲಿ ಬಿಜೆಪಿಯ ಇಬ್ಬರು ನಾಯಕರುಗಳ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದರು. ಈ ಪೋಸ್ಟ್ ಬಿಜೆಪಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡಿದ ಸಂಸದ ಸೌಮಿತ್ರ ಖಾನ್
ಭಾನುವಾರ ನಡೆದ ಪಕ್ಷದ ಯುವ ವಿಭಾಗದ ಸಭೆಯಲ್ಲಿ ಮಾತನಾಡಿದ ಖಾನ್, "ಫೇಸ್ಬುಕ್ನಲ್ಲಿ ಹೇಳಿಕೆ ನೀಡುವುದು ನನ್ನ ಕಡೆಯಿಂದ ಮಾಡಿದ ಪ್ರಮಾದ," ಎಂದು ಹೇಳುವ ಮೂಲಕ ಫೇಸ್ಬುಕ್ ಪೋಸ್ಟ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. "ನಾನು ಈ ಮೂಲಕ ಕ್ಷಮೆಯಾಚಿಸುತ್ತಿದ್ದೇನೆ, ನಿಮ್ಮ ಕ್ಷಮೆ ಕೋರುತ್ತೇನೆ. ನಾನು ಸೋಶಿಯಲ್ ಮೀಡಿಯಾದಲ್ಲಿ ಅಂತಹ ಪೋಸ್ಟ್ಗಳನ್ನು ಮಾಡಬಾರದಿತ್ತು," ಎಂದು ಪಕ್ಷದ ಸದಸ್ಯರು ಚಪ್ಪಾಳೆ ತಟ್ಟುತ್ತಿದ್ದಂತೆ ಇಬ್ಬರು ನಾಯಕರನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲೇ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ನಂತರದ ಹಿಂಸಾಚಾರದ ಬಗ್ಗೆ ಟಿಎಂಸಿಯನ್ನು ದೂಷಿಸಿದ ಸೌಮಿತ್ರಾ ಖಾನ್, ಮನೀಶ್ ಶುಕ್ಲಾರಂತಹ ನಾಯಕರ ಸಾವು ವ್ಯರ್ಥವಾಗುವುದಿಲ್ಲ ಎಂದರು. ಉತ್ತರ 24 ಪರಗಣ ಜಿಲ್ಲೆಯ ಟೈಟಗಢದ ಸ್ಥಳೀಯ ಮುಖಂಡ ಮನೀಶ್ ಶುಕ್ಲಾರನ್ನು ಕಳೆದ ವರ್ಷ ಅಕ್ಟೋಬರ್ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.
"ಟಿಎಂಸಿಗೆ 211 ವಿಧಾನಸಭಾ ಕ್ಷೇತ್ರಗಳನ್ನು ಪಡೆಯಲು ಸಾಧ್ಯವಾದರೆ, ಭವಿಷ್ಯದಲ್ಲಿ ನಾವು 250 ಸ್ಥಾನಗಳನ್ನು ಏಕೆ ಪಡೆಯಲು ಸಾಧ್ಯವಿಲ್ಲ? ನಾವು ಮುಂದುವರಿಯಬೇಕಾಗಿದೆ, ಪಕ್ಷವನ್ನು ಮುನ್ನಡೆಸಬಲ್ಲವರು ಅಧಿಕಾರ ವಹಿಸಿಕೊಳ್ಳುತ್ತಾರೆ," ಎಂದು ಹೇಳಿದರು.
ಟಿಎಂಸಿ ಸೇರಿದ ಬಿಜೆಪಿ ಸಂಸದನ ಪತ್ನಿ, ವಿಚ್ಚೇದನ ನೀಡುವುದಾಗಿ ಪತಿ ಹೇಳಿಕೆ
ಈ ತಿಂಗಳ ಆರಂಭದಲ್ಲಿ ಫೇಸ್ಬುಕ್ನಲ್ಲಿ ಸೌಮಿತ್ರಾ ಖಾನ್, "ಒಬ್ಬ ನಿರ್ದಿಷ್ಟ ನಾಯಕ ದೆಹಲಿಗೆ ಆಗಾಗ್ಗೆ ಪ್ರವಾಸ ಮಾಡುತ್ತಿದ್ದನು. ಪಕ್ಷದ ಪ್ರತಿಯೊಂದು ಯಶಸ್ಸಿಗೆ ಮನ್ನಣೆ ನೀಡುತ್ತಿದ್ದನು. ರಾಜ್ಯದ ಪ್ರತಿಪಕ್ಷದ ನಾಯಕ (ಸುವೆಂದು ಅಧಿಕಾರಿ) ಕನ್ನಡಿಯಲ್ಲಿ ನೋಡಬೇಕು. ಅಧಿಕಾರಿ ನವದೆಹಲಿಯ ಉನ್ನತ ದರ್ಜೆಯವರನ್ನು ದಾರಿತಪ್ಪಿಸುತ್ತಿದ್ದಾರೆ. ತಮ್ಮನ್ನು ಬಂಗಾಳದ ಪಕ್ಷದ ಅತಿ ಎತ್ತರದ ನಾಯಕ ಎಂದು ಕೊಂಡಿದ್ದಾರೆ," ಎಂದು ವಾಗ್ದಾಳಿ ನಡೆಸಿದ್ದರು. ಹಾಗೆಯೇ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಕೂಡಾ ತರಾಟೆಗೆ ತೆಗೆದುಕೊಂಡಿದ್ದರು.
ಆದರೆ ಭಾನುವಾರ ಖಾನ್, ದಿಲಿ ಘೋಷ್ ಪಕ್ಕದಲ್ಲೇ ಕುಳಿತು ಮಾತನಾಡಿ ನಗೆ ಬೀರುತ್ತಿದ್ದರು. "ಸೌಮಿತ್ರ ಖಾನ್ ಭಾವನಾತ್ಮಕ ವ್ಯಕ್ತಿ. ನಾನು ಖಾನ್ ಬಗ್ಗೆ ಯಾವುದೇ ಕೆಟ್ಟ ಭಾವನೆಗಳನ್ನು ಹೊಂದಿಲ್ಲ. ಖಾನ್ ಯುವ ಮೋರ್ಚಾವನ್ನು ಮುನ್ನಡೆಸುತ್ತಾರೆ," ಎಂದು ದಿಲೀಪ್ ಘೋಷ್ ನಂತರ ಸುದ್ದಿಗಾರರಿಗೆ ತಿಳಿಸಿದರು.
(ಒನ್ಇಂಡಿಯಾ ಸುದ್ದಿ)