ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡಿದ ಸಂಸದ ಸೌಮಿತ್ರ ಖಾನ್
ಕೋಲ್ಕತ್ತಾ, ಜುಲೈ 08: ಲೋಕಸಭಾ ಸಂಸದ ಸೌಮಿತ್ರ ಖಾನ್ ಪಶ್ಚಿಮ ಬಂಗಾಳದ ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥ ಹುದ್ದೆಯನ್ನು ತೊರೆದಿದ್ದಾರೆ.
ನರೇಂದ್ರ ಮೋದಿ ಮತ್ತು ಕೇಂದ್ರ ನಾಯಕತ್ವದ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ಆದರೆ ರಾಜ್ಯದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಕು.
ಅವರು ನವದೆಹಲಿಯ ನಾಯಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರು ತಮ್ಮನ್ನು ಬಂಗಾಳದ ಬಿಜೆಪಿ ಪಕ್ಷದ ಅತಿ ಎತ್ತರದ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಎಂದು ಖಾನ್ ಹೇಳಿದ್ದಾರೆ.
ಅಲ್ಲದೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು ಬಂಗಾಳದಲ್ಲಿ ಬಿಜೆಪಿಯ ಸಾಧನೆಗಳಿಗೆ ಮನ್ನಣೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸುವೇಂದು ಅಧಿಕಾರಿ ವಿರುದ್ಧ ಕಿಡಿಕಾರಿದ್ದಾರೆ. ಈ ಮೂಲಕ ಬಂಗಾಳದ ಬಿಜೆಪಿ ಘಟಕದಲ್ಲಿ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳು ಬೆಳಕಿಗೆ ಬಂದಿದೆ.
ಇಂದಿನಿಂದ ವೈಯಕ್ತಿಕ ಕಾರಣಗಳಿಂದಾಗಿ ಭಾರತೀಯ ಜನತಾ ಯುವ ಮೋರ್ಚಾ ರಾಜ್ಯ ಘಟಕದ ಜವಾಬ್ದಾರಿಯಿಂದ ನಾನು ಮುಕ್ತನಾಗುತ್ತಿದ್ದೇನೆ. ನಾನು ಬಿಜೆಪಿಯಲ್ಲಿದ್ದೆ, ನಾನು ಬಿಜೆಪಿಯಲ್ಲಿಯೇ ಇರುತ್ತೇನೆ.
ಅದರ ಭಾಗವಾಗಿ ಮುಂದುವರಿಯುತ್ತೇನೆ ಎಂದು 2018ರಲ್ಲಿ ಟಿಎಂಸಿಯಿಂದ ಕೇಸರಿ ಶಿಬಿರಕ್ಕೆ ಬಂದಿದ್ದ ಬಿಷ್ಣುಪರ ಸಂಸದ ಸೌಮಿತ್ರ ಖಾನ್ ಫೇಸ್ಬುಕ್ನಲ್ಲಿ ತಿಳಿಸಿದ್ದಾರೆ.