"ಕೊರೊನಾಗಿಂತ ಅಪಾಯಕಾರಿ ಯಾವುದು ಗೊತ್ತಾ?"; ಬಿಜೆಪಿ ಸಿಟ್ಟಿಗೆ ಕಾರಣವಾಯ್ತು ಈ ಹೇಳಿಕೆ
ಕೋಲ್ಕತ್ತಾ, ಜನವರಿ 15: "ಕೊರೊನಾ ವೈರಸ್ ಗಿಂತಲೂ ಅಪಾಯಕಾರಿ ಯಾವುದು ಗೊತ್ತೇ? -ಬಿಜೆಪಿ" ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಮೇಲೆ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ರಕ್ತದಾನ ಶಿಬಿರವೊಂದರಲ್ಲಿ ಭಾಗವಹಿಸಿದ್ದ ನುಸ್ರತ್ ಜಹಾನ್, "ನಿಮ್ಮ ಕಿವಿ ಹಾಗೂ ಕಣ್ಣುಗಳನ್ನು ಯಾವಾಗಲೂ ತೆರೆದಿರಿ. ಏಕೆಂದರೆ ಕೊರೊನಾಗಿಂತ ಅಪಾಯಕಾರಿಯಾಗಿರುವ ಜನರು ನಿಮ್ಮ ಸುತ್ತಲೇ ಇದ್ದಾರೆ. ಕೊರೊನಾ ವೈರಸ್ ಗಿಂತಲೂ ಅಪಾಯಕಾರಿಯಾಗಿರುವುದು ಯಾವುದು ಗೊತ್ತಾ? ಬಿಜೆಪಿ" ಎಂದು ಹೇಳಿದ್ದರು.
ದೀದಿಗೆ ಮತ್ತೊಂದು ಶಾಕ್ ಸೂಚನೆ ಕೊಟ್ಟ ತೃಣಮೂಲ ಸಂಸದೆ ಪೋಸ್ಟ್...
"ಬಿಜೆಪಿಗೆ ಸಂಸ್ಕೃತಿ ಬಗ್ಗೆ ಗೊತ್ತಿಲ್ಲ. ಮಾನವೀಯತೆ ಬಗ್ಗೆ ತಿಳಿದಿಲ್ಲ. ಪರಿಶ್ರಮದ ಬಗ್ಗೆ ಅರ್ಥವಾಗಿಲ್ಲ. ಅವರಿಗೆ ಗೊತ್ತಿರುವುದು ವ್ಯವಹಾರವಷ್ಟೇ. ಅವರ ಬಳಿ ಸಾಕಷ್ಟು ಹಣವಿದೆ. ಅದನ್ನು ಎಲ್ಲಾ ಕಡೆ ಹರಡುತ್ತಿದ್ದಾರೆ. ಧರ್ಮದ ಆಧಾರದಲ್ಲಿ ಜನರ ನಡುವೆಯೇ ಸಂಘರ್ಷ ಹತ್ತಿಕ್ಕುತ್ತಿದ್ದಾರೆ. ಹೀಗಾಗೇ ಕೊರೊನಾ ವೈರಸ್ ಗಿಂತಲೂ ಬಿಜೆಪಿ ಅಪಾಯಕಾರಿ" ಎಂದು ಆರೋಪಿಸಿದ್ದರು.
ಈ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ಸಾಮಾಜಿಕ ಜಾಲತಾಣ ಮುಖ್ಯಸ್ಥ ಅಮಿತ್ ಮಾಲ್ವಿಯಾ, ಮಮತಾ ಬ್ಯಾನರ್ಜಿ ಅವರ ಮೇಲೆ ಹರಿಹಾಯ್ದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಲಸಿಕೆಯ ರಾಜಕೀಯ ನಡೆಯುತ್ತಿದೆ. ಮೊದಲು ಸಿದ್ಧಿಕ್ ಚೌಧರಿ ಲಸಿಕೆ ವಿತರಣೆಯ ಟ್ರಕ್ ತಡೆದರು. ಈಗ ಬಿಜೆಪಿಯನ್ನು ನುಸ್ರತ್ ಕೊರೊನಾಗೆ ಹೋಲಿಸಿದ್ದಾರೆ. ಇಷ್ಟಾದರೂ ಮಮತಾ ಬ್ಯಾನರ್ಜಿ ಏಕೆ ಸುಮ್ಮನಿದ್ದಾರೆ" ಎಂದು ಪ್ರಶ್ನಿಸಿದ್ದಾರೆ.