ಮತ್ತೆ ಟಿಎಂಸಿ ಸೇರಿದ ಬಿಜೆಪಿಯ ನಾಲ್ಕನೇ ಶಾಸಕ; ಕೇಸರಿ ಪಕ್ಷಕ್ಕೆ ಶಾಕ್!
ಕೋಲ್ಕತಾ, ಸೆಪ್ಟೆಂಬರ್ 4: ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾದ ವೇಳೆಯಲ್ಲೇ ಭಾರತಿಯ ಜನತಾ ಪಕ್ಷದಿಂದ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಿರುವ ಶಾಸಕರ ಸಂಖ್ಯೆಯೂ ಹೆಚ್ಚಾಗಿದೆ.
ಇದೀಗ ಪಶ್ಚಿಮ ಬಂಗಾಳದ ಕಾಲಿಯಾಗಂಜ್ ಬಿಜೆಪಿ ಶಾಸಕ ಸೌಮೆನ್ ರಾಯ್ ಕೋಲ್ಕತಾದಲ್ಲಿ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಟಿಎಂಸಿ ಸಚಿವ ಪಾರ್ಥ ಚಟರ್ಜಿ ಆತ್ಮೀಯವಾಗಿ ಸ್ವಾಗತಿಸಿದರು.
ವಿಧಾನಸಭೆ ಚುನಾವಣೆ ಮೊದಲು ಟಿಎಂಸಿಯಲ್ಲೇ ಇದ್ದ ಸೌಮೆನ್ ರಾಯ್ ರಾಜಕೀಯ ಕಾರಣದಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದರು. ನಂತರ ನಡೆದ ಚುನಾವಣೆಯಲ್ಲಿ ಎರಡನೇ ಬಾರಿ ಶಾಸಕರಾಗಿದ್ದರು.
ಶನಿವಾರ ತಮ್ಮ ಮಾತೃಪಕ್ಷಕ್ಕೆ ಮರಳಿದ ಬಳಿಕ ಮಾತನಾಡಿದ ಸೌಮೆನ್ ರಾಯ್, ಕೆಲವು ಕಾರಣಗಳಿಂದಾಗಿ ನಾನು ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಲಿಯಾಗಂಜ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದೆ. ಆದರೆ ನನ್ನ ಹೃದಯ ಮತ್ತು ಆತ್ಮ ಎರಡೂ ಟಿಎಂಸಿಯಲ್ಲೇ ಇದೆ. ನಾನು ಪಕ್ಷ ಬಿಟ್ಟು ಹೋಗಿದ್ದಕ್ಕೆ ಕ್ಷಮೆ ಕೇಳುತ್ತೇನೆ ಮತ್ತು ಮಮತಾ ಬ್ಯಾನರ್ಜಿಯವರಿಗೆ ಸದಾ ಬೆಂಬಲ ನೀಡುವ ಸಲುವಾಗಿ ಮರಳಿ ಬರುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಕಳೆದ ವಾರ ಬಿಜೆಪಿ ಶಾಸಕರಾದ ತನ್ಮಯ್ ಘೋಷ್, ಬಿಸ್ವಜಿತ್ ದಾಸ್ ಟಿಎಂಸಿ ಸೇರ್ಪಡೆಯಾಗಿದ್ದಾರೆ. ಅದರಲ್ಲಿ ಘೋಷ್ ಬಿಷ್ಣುಪುರ ವಿಧಾನಸಭಾ ಕ್ಷೇತ್ರ ಮತ್ತು ಬಿಸ್ವಜಿತ್ ದಾಸ್ ಬಾಗ್ದಾ ಕ್ಷೇತ್ರದ ಶಾಸಕರಾಗಿದ್ದರು. ಇವರೆಲ್ಲರಿಗಿಂತ ಮೊದಲು ಬಿಜೆಪಿ ತೊರೆದು ಟಿಎಂಸಿಗೆ ಹೋಗಿದ್ದು, ಕೃಷ್ಣನಗರ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆದ್ದಿದ್ದ ಮುಕುಲ್ ರಾಯ್.
ಅವರಿಂದ ಈ ಪಕ್ಷಾಂತರ ಪರ್ವ ಶುರುವಾಗಿದ್ದು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ನಂತರ ಇದುವರೆಗೆ ಒಟ್ಟು ನಾಲ್ವರು ಶಾಸಕರನ್ನು ಬಿಜೆಪಿ ಕಳೆದುಕೊಂಡಂತಾಗಿದೆ. ಅವರೆಲ್ಲರೂ ಟಿಎಂಸಿಗೆ ಮರಳಿ ಸೇರ್ಪಡೆಯಾಗಿದ್ದಾರೆ. ಇವರಲ್ಲಿ ಮುಕುಲ್ ರಾಯ್ ಅಕ್ಷರಶಃ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ. ಮೊದಲು ಟಿಎಂಸಿಯಲ್ಲಿ ಇದ್ದ ಮುಕುಲ್ ರಾಯ್ ನಂತರ ಬಿಜೆಪಿಗೆ ಸೇರ್ಪಡೆಯಾಗಿ ಶಾಸಕರಾಗಿದ್ದರು. ನಂತರ ಮತ್ತೆ ಟಿಎಂಸಿಗೇ ಹೋಗಿದ್ದಾರೆ.
ಸೆಪ್ಟೆಂಬರ್ 30ಕ್ಕೆ ಉಪ ಚುನಾವಣೆ
ಇನ್ನು ರಾಜ್ಯ ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್ 30ರಂದು ಉಪ ಚುನಾವಣೆ ಘೋಷಿಸಿದೆ. ಭವಾನಿಪುರ, ಸಂಸೆರ್ಗಂಜ್ ಮತ್ತು ಜಾಂಗಿಪುರ್ ಕ್ಷೇತ್ರಗಳಲ್ಲಿ ಅಂದು ಮತದಾನ ನಡೆಯಲಿದ್ದು, ಫಲಿತಾಂಶ ಅಕ್ಟೋಬರ್ 30ರಂದು ಪ್ರಕಟಗೊಳ್ಳಲಿದೆ.
ಅದರಲ್ಲಿ ಭವಾನಿಪುರದಲ್ಲಿ ಟಿಎಂಸಿಯಿಂದ ಸಿಎಂ ಮಮತಾ ಬ್ಯಾನರ್ಜಿಯವರೇ ಸ್ಪರ್ಧಿಸಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಕಾರಣ, ಭವಾನಿಪುರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.