ಪಶ್ಚಿಮ ಬಂಗಾಳದ ನಾದಿಯಾದಲ್ಲಿ ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿ
ಕೋಲ್ಕತ್ತಾ, ಮಾರ್ಚ್ 08: ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡನ ಮೇಲೆ ಕೆಲವು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
ಬಿಜೆಪಿಯು ಟಿಎಂಸಿ ಕಾರ್ಯಕರ್ತರ ಕೈವಾಡವಿದೆ ಎಂದು ಆರೋಪಿಸಿದೆ. ಘಟನೆಯಲ್ಲಿ ಗಾಯಗೊಂಡಿರುವ ಸಂಜಯ್ ದಾಸ್ ಹರೀಂಗಾಟಾ ನಗರಸಭೆ ವಾರ್ಡ್ ನಂ.10ರ ಬಿಜೆಪಿ ಬೂತ್ ಅಧ್ಯಕ್ಷರಾಗಿದ್ದಾರೆ.
ಪ.ಬಂಗಾಳದಲ್ಲಿ ಆರು ಬಿಜೆಪಿ ಕಾರ್ಯಕರ್ತರ ಮೇಲೆ ಬಾಂಬ್ ದಾಳಿ
ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಕಪಿಲೇಶ್ವರ ಸಂತೋಷ್ಪುರದ ಚಹಾ ಅಂಗಡಿಯೊಂದರ ಬಳಿ ಗಾಯಗೊಂಡ ಸ್ಥಿತಿಯಲ್ಲಿ ಸಂಜಯ್ ದಾಸ್ ಪತ್ತೆಯಾಗಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಎಸ್ಪಿ ವಿಎಸ್ಆರ್ ಅನಂತ್ನಾಗ್ ತಿಳಿಸಿದ್ದಾರೆ.
ಕಪಿಲೇಶ್ವರ ಸಂತೋಷ್ಪುರದ ಚಹಾ ಅಂಗಡಿ ಬಳಿ ವಾಹನ ನಿಲ್ಲಿಸಿದಾಗ ಸ್ವಲ್ಪ ದೂರದಲ್ಲಿ ಒಂದು ಗುಂಪು ಕುಳಿತಿತ್ತು. ಪೊಲೀಸರನ್ನು ನೋಡುತ್ತಲೇ ಗುಂಪಿನಲ್ಲಿದ್ದವರು ಓಡಿ ಹೋಗಿದ್ದಾರೆ. ಒಬ್ಬ ಮಾತ್ರ ಅಲ್ಲಿಯೇ ಇದ್ದ, ಹತ್ತಿರಕ್ಕೆ ಹೋಗಿ ನೋಡಿದಾಗ ಆತ ರಕ್ತದ ಮಡುವಿನಲ್ಲಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಗುಂಪಿನಲ್ಲಿದ್ದವರು ತನ್ನ ಮೇಲೆ ಗುಂಡು ಹಾರಿಸಿರುವುದಾಗಿಯೂ ಅದು ಸೊಂಟದ ಭಾಗಕ್ಕೆ ತಗುಲಿರುವುದಾಗಿಯೂ ಬಿಜೆಪಿ ಮುಖಂಡ ಸಂಜಯ್ ದಾಸ್ ತಿಳಿಸಿದ್ದರು. ಈಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತೃಣಮೂಲ ಕಾಂಗ್ರೆಸ್ನ ಗೂಂಡಾಗಳು ಈ ಕೃತ್ಯವೆಸಗಿದ್ದಾರೆ, ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪವನ್ನು ಆಡಳಿತಾರೂಢ ಟಿಎಂಸಿ ನಿರಾಕರಿಸಿದೆ, ಇದು ಬಿಜೆಪಿ ಗುಂಪಿನೊಳಗೇ ನಡೆದ ಘರ್ಷಣೆ ಎಂದು ಆರೋಪಿಸಿದೆ.
ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ಮುಖಂಡರ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಚುನಾವಣೆ ಹೊಸ್ತಿನಲ್ಲಿನಲ್ಲೇ ಇಂತಹ ಘಟನೆಗಳು ನಡೆಯುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.